ಇದು ವರಾಹನ ದಾಡೆಯಿದನಾ
ತ್ರಿದಶವೈರಿಗೆ ಕೊಟ್ಟೆನವನಿಂ
ದಿದುವೆ ಭಗದತ್ತಂಗೆ ಬಂದುದು ವೈಷ್ಣವಾಸ್ತ್ರವಿದು
ಇದು ಹರಬ್ರಹ್ಮಾದಿಗಳ ಗೆಲು
ವುದು ಕಣಾ ನಿಮಿಷದಲಿ ತನಗ
ಲ್ಲದೆ ಮಹಾಂಕುಶವುಳಿದ ಭಟರಿಗೆ ಮಣಿವುದಲ್ಲೆಂದ (ದ್ರೋಣ ಪರ್ವ, ೩ ಸಂಧಿ, ೭೨ ಪದ್ಯ)
ತಾತ್ಪರ್ಯ:
ಭಗದತ್ತನು ಪ್ರಯೋಗಿಸಿದ ಮಹಾಂಕುಶವು ಯಜ್ಞವರಾಹದ ದಾಡೆ, ಅದನ್ನು ನರಕಾಸುರನಿಗೆ ಕೊಟ್ಟೆನು. ಅವನಿಮ್ದ ಇದು ಭಗದತ್ತನಿಗೆ ಬಂದಿತು. ಇದು ನಿಮಿಷಮಾತ್ರದಲ್ಲಿ ಹರ, ಬ್ರಹ್ಮಾದಿಗಳನ್ನು ಗೆಲ್ಲುತ್ತದೆ, ನನಗಲ್ಲದೆ ಇದು ಬೇರಾರಿಗೂ ಬಗ್ಗುವುದಿಲ್ಲ ಎಂದು ಕೃಷ್ಣನು ವಿವರಿಸಿದನು.
ಅರ್ಥ:
ವರಾಹ: ಹಂದಿ; ದಾಡೆ: ಹಲ್ಲು; ತ್ರಿದಶ: ದೇವತೆ; ವೈರಿ: ರಿಪು; ಕೊಟ್ಟೆ:ನೀಡು; ಅಸ್ತ್ರ: ಶಸ್ತ್ರ, ಆಯುಧ; ಹರ: ಈಶ್ವರ; ಬ್ರಹ್ಮ: ಅಜ; ಗೆಲುವು: ಜಯ; ನಿಮಿಷ: ಕ್ಷಣ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಉಳಿದ: ಮಿಕ್ಕ; ಭಟರು: ಸೈನಿಕರು; ಮಣಿ: ಬಾಗು, ಬಗ್ಗು;
ಪದವಿಂಗಡಣೆ:
ಇದು +ವರಾಹನ +ದಾಡೆ+ಇದನ್+ಆ
ತ್ರಿದಶವೈರಿಗೆ+ ಕೊಟ್ಟೆನ್+ಅವನಿಂದ್
ಇದುವೆ +ಭಗದತ್ತಂಗೆ +ಬಂದುದು +ವೈಷ್ಣವಾಸ್ತ್ರವಿದು
ಇದು +ಹರ+ಬ್ರಹ್ಮಾದಿಗಳ+ ಗೆಲು
ವುದು +ಕಣಾ +ನಿಮಿಷದಲಿ +ತನಗ
ಲ್ಲದೆ +ಮಹಾಂಕುಶವ್+ಉಳಿದ +ಭಟರಿಗೆ +ಮಣಿವುದಲ್ಲೆಂದ
ಅಚ್ಚರಿ:
(೧) ನರಕಾಸುರ ಎಂದು ಕರೆಯಲು – ತ್ರಿದಶವೈರಿ ಪದದ ಬಳಕೆ
(೨) ಮಹಾಂಕುಶದ ಅಸ್ತ್ರ – ವೈಷ್ಣವಾಸ್ತ್ರ