ಎಲೆ ಯುಧಿಷ್ಠಿರದೇವ ಸಾಲದೆ
ಕೆಲನ ಮೆಚ್ಚಿಸುವಳಲು ಲೋಚನ
ಜಲವ ತೊಡೆಯೈ ಭೀಮ ಬಲ್ಲೆನು ನಿಮ್ಮ ನೆನಹುಗಳ
ಅಳಲದಿರಿ ಸಹದೇವ ನಕುಳರು
ನಿಲಿಸಿರೈ ನಿಮ್ಮಿಷ್ಟಸಿದ್ಧಿಯ
ಬೆಳಸು ಫಲವಾಯ್ತೇಕೆ ನೋವಿನ್ನೆಂದಳಿಂದುಮುಖಿ (ದ್ರೋಣ ಪರ್ವ, ೭ ಸಂಧಿ, ೧೪ ಪದ್ಯ)
ತಾತ್ಪರ್ಯ:
ಪಕ್ಕದ ಜನರನ್ನು ಮೆಚ್ಚಿಸಲೆಂದು ತೋರುಗಾಣಿಕೆಯ ಕಣ್ಣಿರಿಡುವ ಯುಧಿಷ್ಠಿರದೇವ, ನಿನ್ನ ಕಣ್ಣೀರು ಒರೆಸಿಕೋ, ಭೀಮಾ ನಿಮ್ಮ ಒಳಸಂಚಿನ ಚಿಂತೆಯನ್ನು ಬಲ್ಲೆ, ಸಹದೇವ ನಕುಲಋಎ ನಿಮ್ಮಿಷ್ಟಸಿದ್ಧಿ ಫಲಿಸಿತು, ಇನ್ನೇಕೆ ದುಃಖಿಸುವೇ ಎಂದು ತನ್ನ ಅಳಲನ್ನು ತೋರ್ಪಡಿಸಿದಳು ಸುಭದ್ರೆ.
ಅರ್ಥ:
ಸಾಲದೆ: ಅಗತ್ಯ ಪೂರೈಸಿತು; ಕೆಲ: ಮಗ್ಗಲು; ಮೆಚ್ಚಿಸು: ಹರ್ಷಗೊಳಿಸು; ಅಳಲು: ದುಃಖ; ಲೋಚನ: ಕಣ್ಣು; ಲೋಚನಜಲ: ಕಣ್ಣೀರು; ತೊಡೆ: ಲೇಪಿಸು, ಬಳಿ; ಬಲ್ಲೆ: ತಿಳಿದಿರುವೆ; ನೆನಹು: ನೆನಪು; ನಿಲ್ಲಿಸು: ತಡೆ; ಇಷ್ಟ: ಆಸೆ; ಸಿದ್ಧಿ: ಗುರಿಮುಟ್ಟುವಿಕೆ; ಬೆಳಸು: ವೃದ್ಧಿಸು; ಫಲ: ಪ್ರಯೋಜನ; ನೋವು: ಪೆಟ್ಟು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;
ಪದವಿಂಗಡಣೆ:
ಎಲೆ +ಯುಧಿಷ್ಠಿರದೇವ +ಸಾಲದೆ
ಕೆಲನ +ಮೆಚ್ಚಿಸುವ್+ಅಳಲು +ಲೋಚನ
ಜಲವ+ ತೊಡೆಯೈ +ಭೀಮ +ಬಲ್ಲೆನು +ನಿಮ್ಮ +ನೆನಹುಗಳ
ಅಳಲದಿರಿ+ ಸಹದೇವ+ ನಕುಳರು
ನಿಲಿಸಿರೈ +ನಿಮ್ಮಿಷ್ಟಸಿದ್ಧಿಯ
ಬೆಳಸು +ಫಲವಾಯ್ತೇಕೆ +ನೋವಿನ್ನೆಂದಳ್+ಇಂದುಮುಖಿ
ಅಚ್ಚರಿ:
(೧) ಕಣ್ಣೀರೆಂದು ಹೇಳಲು – ಲೋಚನಜಲ ಪದದ ಬಳಕೆ