ಪದ್ಯ ೨೩: ಭೀಮನು ಹನುಮನನ್ನು ಏನು ಕೇಳಿದ?

ಭೀಮ ಗಡ ತಾನೌಕಿ ನಿಲಲು
ದ್ದಾಮ ಬಾಲದ ನಿದ್ರೆ ತಿಳಿಯದು
ರೋಮತತಿ ಮಸೆಗಾಣಿಸಿದುವೆನ್ನುತ್ತಮಾಂಗದಲಿ
ಈ ಮನುಷ್ಯ ಶರೀರವಪಜಯ
ಧಾಮವಲ್ಲಾ ಹರಹರಾ ನಿ
ಸ್ಸೀಮ ಕಪಿ ನೀನಾರೆನುತ ಪವನಜನ ಬೆಸಗೊಂಡ (ಅರಣ್ಯ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಾನು ಭೀಮನಲ್ಲವೇ? ನಾನು ಸಮಸ್ತ ಶಕ್ತಿಯಿಂದ ನೂಕಿದರೂ ಈ ಬಾಲವೂ ಒಂದು ಎಳ್ಳಿನಷ್ಟು ಅಲ್ಲಾಡಲಿಲ್ಲ, ಬಾಲದ ಮೇಲಿನ ರೋಮಗಳು ನನ್ನ ಅಂಗಾಂಗಳನ್ನು ತೆರೆದು ಬಿಟ್ಟವು. ಅಯ್ಯೋ ಈ ಮನುಷ್ಯ ದೇಹವೆಂಬುದು ಅಪಜಯದ ಆವಾಸಸ್ಥಾನ ಎಂದು ಭೀಮನು ದುಃಖಿಸಿ ಹನುಮಂತನನ್ನು ಅಪಾರ ಬಲಶಾಲಿಯಾದ ಕಪಿಯೇ ನೀನಾರು ಎಂದು ಕೇಳಿದನು.

ಅರ್ಥ:
ಗಡ: ಸಂತೋಷ, ಆಶ್ಚರ್ಯವನ್ನು ಸೂಚಿಸುವ ಪದ; ಔಕು: ಒತ್ತು; ನಿಲು: ನಿಲ್ಲು; ಉದ್ದಾಮ:ಶ್ರೇಷ್ಠ; ಬಾಲ: ಪುಚ್ಛ; ನಿದ್ರೆ: ಶಯನ; ತಿಳಿ: ಅರಿ; ರೋಮ: ಕೂದಲು; ತತಿ: ಗುಂಪು; ಮಸೆ: ಹರಿತ, ಚೂಪು; ಕಾಣಿಸು: ತೋರು; ಅಂಗ: ದೇಹದ ಭಾಗ; ಮನುಷ್ಯ: ನರ; ಶರೀರ: ಒಡಲು; ಅಪಜಯ: ಸೋಲು; ಧಾಮ: ವಾಸಸ್ಥಳ, ಶರೀರ; ಹರಹರಾ: ಶಿವ ಶಿವಾ; ನಿಸ್ಸೀಮ: ಎಲ್ಲೆಯಿಲ್ಲದುದು; ಕಪಿ: ವಾನರ; ಪವನಜ: ವಾಯುಪುತ್ರ (ಭೀಮ); ಬೆಸ: ವಿಚಾರಿಸುವುದು;

ಪದವಿಂಗಡಣೆ:
ಭೀಮ+ ಗಡ+ ತಾನ್+ಔಕಿ+ ನಿಲಲ್
ಉದ್ದಾಮ +ಬಾಲದ +ನಿದ್ರೆ +ತಿಳಿಯದು
ರೋಮತತಿ+ ಮಸೆಗಾಣಿಸಿದುವೆನ್+ಉತ್ತಮಾಂಗದಲಿ
ಈ +ಮನುಷ್ಯ +ಶರೀರವ್+ಅಪಜಯ
ಧಾಮವಲ್ಲಾ+ ಹರಹರಾ+ ನಿ
ಸ್ಸೀಮ +ಕಪಿ+ ನೀನಾರೆನುತ+ ಪವನಜನ +ಬೆಸಗೊಂಡ

ಅಚ್ಚರಿ:
(೧) ಮನುಷ್ಯ ಶರೀರದ ಬಗ್ಗೆ ಭೀಮನು ಹೇಳಿದ ನುಡಿ – ಈ ಮನುಷ್ಯ ಶರೀರವಪಜಯ
ಧಾಮವಲ್ಲಾ