ಪದ್ಯ ೧೫: ಅಶ್ವತ್ಥಾಮನು ಯಾರಿಗೆ ಯಾವ ಜವಾಬ್ದಾರಿಯನ್ನು ವಹಿಸಿದನು?

ಎರಡು ಬಾಗಿಲ ಪಾಳೆಯಕೆ ಕೃಪ
ನಿರಲಿ ಮೂಡಲು ಪಶ್ಚಿಮಾಂಗದೊ
ಳಿರಲಿ ಕೃತವರ್ಮಕನು ಬಾಗಿಲೊಳಾಂತ ರಿಪುಜನವ
ಕರಿ ತುರಗ ರಥ ಪತ್ತಿಗಳ ಸಂ
ಹರಿಸುವುದು ನೀವಿಲ್ಲಿ ಮಧ್ಯದೊ
ಳರಸು ಮೊತ್ತಕೆ ಮಿತ್ತು ತಾನಹೆನೆಂದು ಕೈಗೊಂಡ (ಗದಾ ಪರ್ವ, ೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಪಾಳೆಯಕ್ಕೆ ಪುರ್ವದಲ್ಲೊಂದು ಬಾಗಿಲಿದೆ, ಇಲ್ಲಿ ಕೃಪನು ಕಾದಿರಲಿ, ಪಶ್ಚಿಮದಲ್ಲಿರುವ ಎರಡನೆಯ ಬಾಗಿಲಲ್ಲಿ ಕೃತವರ್ಮನಿರಲಿ. ಚತುರಮ್ಗ ಸೈನ್ಯವು ಹೊರ ಬಂದರೆ ನೀವಿಬ್ಬರೂ ಅವರನ್ನು ಸಂಹರಿಸಿರಿ, ಉಳಿದ ಅರಸುಗಳಿಗೆ ನಾನು ಮೃತ್ಯುವಾಗುತ್ತೇನೆ ಎಂದು ಹೇಳಿ ತನ್ನ ಕಾರ್ಯವನ್ನು ಕೈಗೊಂಡನು.

ಅರ್ಥ:
ಬಾಗಿಲು: ಕದ; ಪಾಳೆಯ: ಬಿಡಾರ; ಮೂಡಲು: ಪೂರ್ವ; ಪಶ್ಚಿಮ: ಪಡುವಣ; ಅಂಗ:ಭಾಗ; ರಿಪು: ವೈರಿ; ಜನ: ಗುಂಪು; ಕರಿ: ಆನೆ; ತುರಗ: ಅಶ್ವ, ಕುದುರೆ; ರಥ: ಬಂಡಿ; ಪತ್ತಿ: ಒಂದು ರಥ, ಒಂದು ಆನೆ, ಮೂರು ಕುದುರೆ ಮತ್ತು ಐದು ಕಾಲಾಳುಗಳಿಂದ ಕೂಡಿದ ಸೈನ್ಯದ ಚಿಕ್ಕ ಭಾಗ; ಸಂಹರಿಸು: ನಾಶಮಾಡು; ಮಧ್ಯ: ನಡುಭಾಗ; ಅರಸು:ರಾಜ; ಮೊತ್ತ: ರಾಶಿ, ಒಟ್ಟಲು, ಕೂಡಿದುದು; ಮಿತ್ತು: ಮೃತ್ಯು; ಕೈಗೊಂಡ: ನಿರ್ಧರಿಸು;

ಪದವಿಂಗಡಣೆ:
ಎರಡು +ಬಾಗಿಲ +ಪಾಳೆಯಕೆ +ಕೃಪ
ನಿರಲಿ +ಮೂಡಲು +ಪಶ್ಚಿಮಾಂಗದೊಳ್
ಇರಲಿ +ಕೃತವರ್ಮಕನು +ಬಾಗಿಲೊಳಾಂತ +ರಿಪುಜನವ
ಕರಿ +ತುರಗ +ರಥ +ಪತ್ತಿಗಳ+ ವುದು +ನೀವಿಲ್ಲಿ+ ಮಧ್ಯದೊಳ್
ಅರಸು +ಮೊತ್ತಕೆ +ಮಿತ್ತು +ತಾನಹೆನೆಂದು +ಕೈಗೊಂಡ

ಅಚ್ಚರಿ:
(೧) ಅಶ್ವತ್ಥಾಮನ ದಿಟ್ಟ ನುಡಿ – ಮಧ್ಯದೊಳರಸು ಮೊತ್ತಕೆ ಮಿತ್ತು ತಾನಹೆನ್
(೨) ಸೈನ್ಯದ ಭಾಗವನ್ನು ವಿವರಿಸುವ ಪರಿ – ಕರಿ ತುರಗ ರಥ ಪತ್ತಿ

ಪದ್ಯ ೫೩: ಶಾಪದಿಂದ ಒಳಿತಾಗುವುದೆಂದು ಹೇಗೆ ಇಂದ್ರನು ಹೇಳಿದನು?

ಖೋಡಿಯಿಲ್ಲೆಲೆ ಮಗನೆ ಚಿಂತಿಸ
ಬೇಡ ನಿಮ್ಮಜ್ಞಾತದಲಿ ನೆರೆ
ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿ ಶರಹತಿಗೆ
ಕೂಡಿತಿದು ಪುಣ್ಯದಲಿ ಸುರಸತಿ
ಮಾಡಿದಪಕೃತಿ ನಿನ್ನ ಭಾಷೆಯ
ಬೀಡ ಸಲಹಿದುದರಿಯೆ ನೀ ಸಾಹಿತ್ಯನಲ್ಲೆಂದ (ಅರಣ್ಯ ಪರ್ವ, ೯ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ಊರ್ವಶಿಯ ಶಾಪದಿಂದ ನಿನಗಾವ ಹಾನಿಯೂ ಇಲ್ಲ, ನಿಪುಣರಾದ ಶತ್ರುಗಳು ನಿನ್ನನ್ನು ಹುಡುಕುತ್ತಾ ಬಂದಾಗ ಅವರ ದೃಷ್ಟಿ ಬಾಣಗಳಿಂದ ನಪುಂಸಕತನದ ಕವಚವು ನಿನ್ನನ್ನು ಕಾಪಾಡುತ್ತದೆ. ಊರ್ವಶಿಯು ಶಾಪಕೊಟ್ಟದ್ದು ನಿನ್ನ ಪೂರ್ವ ಜನ್ಮದ ಪುಣ್ಯದಿಂದಲೇ ಆಯಿತು. ಅವಳ ಅಪಕಾರ ನಿಮ್ಮ ಪ್ರತಿಜ್ಞೆಯನ್ನುಳಿಸಿಕೊಡುತ್ತದೆ ಎನ್ನುವುದನ್ನು ತಿಳಿಯದವನು ನೀನು ಎಂದು ಇಂದ್ರನು ಅರ್ಜುನನನ್ನು ಸಂತೈಸಿದನು.

ಅರ್ಥ:
ಖೋಡಿ: ದುರುಳತನ; ಮಗ: ಸುತ; ಚಿಂತಿಸು: ಯೋಚಿಸು; ಅಜ್ಞಾತ: ತಿಳಿಯದ; ನೆರೆ: ಗುಂಪು; ಜೋಡು: ಜೊತೆ; ಜಾಣಾಯ್ಲ: ಬುದ್ಧಿವಂತ, ಜಾಣ; ರಿಪು: ವೈರಿ; ಜನ: ಮನುಷ್ಯರ ಗುಂಪು; ದೃಷ್ಟಿ: ನೋಟ; ಶರ: ಬಾಣ; ಹತಿ: ಹೊಡೆತ; ಕೂಡು: ಸೇರು; ಪುಣ್ಯ: ಸದಾಚಾರ; ಸುರಸತಿ: ಅಪ್ಸರೆ; ಅಪಕೃತಿ: ಕೆಟ್ಟ ಕಾರ್ಯ; ಭಾಷೆ: ನುಡಿ; ಬೀಡು: ವಸತಿ; ಸಲಹು: ಕಾಪಾಡು; ಅರಿ: ತಿಳಿ; ಸಾಹಿತ್ಯ: ಸಾಮಗ್ರಿ, ಸಲಕರಣೆ;

ಪದವಿಂಗಡಣೆ:
ಖೋಡಿ+ಇಲ್ಲೆಲೆ +ಮಗನೆ +ಚಿಂತಿಸ
ಬೇಡ +ನಿಮ್ಮ್+ಅಜ್ಞಾತದಲಿ +ನೆರೆ
ಜೋಡಲಾ +ಜಾಣಾಯ್ಲ +ರಿಪುಜನ+ ದೃಷ್ಟಿ +ಶರಹತಿಗೆ
ಕೂಡಿತ್+ಇದು +ಪುಣ್ಯದಲಿ+ ಸುರಸತಿ
ಮಾಡಿದ್+ಅಪಕೃತಿ +ನಿನ್ನ +ಭಾಷೆಯ
ಬೀಡ +ಸಲಹಿದುದ್+ಅರಿಯೆ+ ನೀ +ಸಾಹಿತ್ಯನಲ್ಲೆಂದ

ಅಚ್ಚರಿ:
(೧) ಶಾಪವು ಹೇಗೆ ಉಪಕಾರ ಎಂದು ಹೇಳುವ ಪರಿ – ನಿಮ್ಮಜ್ಞಾತದಲಿ ನೆರೆ ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿ ಶರಹತಿಗೆ
(೨) ಸುರಸತಿ, ಶರಹತಿ – ಪ್ರಾಸ ಪದಗಳು