ಎರಡು ಬಾಗಿಲ ಪಾಳೆಯಕೆ ಕೃಪ
ನಿರಲಿ ಮೂಡಲು ಪಶ್ಚಿಮಾಂಗದೊ
ಳಿರಲಿ ಕೃತವರ್ಮಕನು ಬಾಗಿಲೊಳಾಂತ ರಿಪುಜನವ
ಕರಿ ತುರಗ ರಥ ಪತ್ತಿಗಳ ಸಂ
ಹರಿಸುವುದು ನೀವಿಲ್ಲಿ ಮಧ್ಯದೊ
ಳರಸು ಮೊತ್ತಕೆ ಮಿತ್ತು ತಾನಹೆನೆಂದು ಕೈಗೊಂಡ (ಗದಾ ಪರ್ವ, ೯ ಸಂಧಿ, ೧೫ ಪದ್ಯ)
ತಾತ್ಪರ್ಯ:
ಅಶ್ವತ್ಥಾಮನು ಪಾಳೆಯಕ್ಕೆ ಪುರ್ವದಲ್ಲೊಂದು ಬಾಗಿಲಿದೆ, ಇಲ್ಲಿ ಕೃಪನು ಕಾದಿರಲಿ, ಪಶ್ಚಿಮದಲ್ಲಿರುವ ಎರಡನೆಯ ಬಾಗಿಲಲ್ಲಿ ಕೃತವರ್ಮನಿರಲಿ. ಚತುರಮ್ಗ ಸೈನ್ಯವು ಹೊರ ಬಂದರೆ ನೀವಿಬ್ಬರೂ ಅವರನ್ನು ಸಂಹರಿಸಿರಿ, ಉಳಿದ ಅರಸುಗಳಿಗೆ ನಾನು ಮೃತ್ಯುವಾಗುತ್ತೇನೆ ಎಂದು ಹೇಳಿ ತನ್ನ ಕಾರ್ಯವನ್ನು ಕೈಗೊಂಡನು.
ಅರ್ಥ:
ಬಾಗಿಲು: ಕದ; ಪಾಳೆಯ: ಬಿಡಾರ; ಮೂಡಲು: ಪೂರ್ವ; ಪಶ್ಚಿಮ: ಪಡುವಣ; ಅಂಗ:ಭಾಗ; ರಿಪು: ವೈರಿ; ಜನ: ಗುಂಪು; ಕರಿ: ಆನೆ; ತುರಗ: ಅಶ್ವ, ಕುದುರೆ; ರಥ: ಬಂಡಿ; ಪತ್ತಿ: ಒಂದು ರಥ, ಒಂದು ಆನೆ, ಮೂರು ಕುದುರೆ ಮತ್ತು ಐದು ಕಾಲಾಳುಗಳಿಂದ ಕೂಡಿದ ಸೈನ್ಯದ ಚಿಕ್ಕ ಭಾಗ; ಸಂಹರಿಸು: ನಾಶಮಾಡು; ಮಧ್ಯ: ನಡುಭಾಗ; ಅರಸು:ರಾಜ; ಮೊತ್ತ: ರಾಶಿ, ಒಟ್ಟಲು, ಕೂಡಿದುದು; ಮಿತ್ತು: ಮೃತ್ಯು; ಕೈಗೊಂಡ: ನಿರ್ಧರಿಸು;
ಪದವಿಂಗಡಣೆ:
ಎರಡು +ಬಾಗಿಲ +ಪಾಳೆಯಕೆ +ಕೃಪ
ನಿರಲಿ +ಮೂಡಲು +ಪಶ್ಚಿಮಾಂಗದೊಳ್
ಇರಲಿ +ಕೃತವರ್ಮಕನು +ಬಾಗಿಲೊಳಾಂತ +ರಿಪುಜನವ
ಕರಿ +ತುರಗ +ರಥ +ಪತ್ತಿಗಳ+ ವುದು +ನೀವಿಲ್ಲಿ+ ಮಧ್ಯದೊಳ್
ಅರಸು +ಮೊತ್ತಕೆ +ಮಿತ್ತು +ತಾನಹೆನೆಂದು +ಕೈಗೊಂಡ
ಅಚ್ಚರಿ:
(೧) ಅಶ್ವತ್ಥಾಮನ ದಿಟ್ಟ ನುಡಿ – ಮಧ್ಯದೊಳರಸು ಮೊತ್ತಕೆ ಮಿತ್ತು ತಾನಹೆನ್
(೨) ಸೈನ್ಯದ ಭಾಗವನ್ನು ವಿವರಿಸುವ ಪರಿ – ಕರಿ ತುರಗ ರಥ ಪತ್ತಿ