ನೀನು ನೆರಹಿದ ಸುಕೃತ ಫಲವದ
ನೇನ ಹೇಳುವೆನಿತ್ತಲುಗ್ಗಡ
ದಾನೆ ಬಿದ್ದುದು ಕಾದಿ ನಸು ಸೊಪ್ಪಾದುದರಿಸೇನೆ
ಧ್ಯಾನವಿತ್ತಲು ರಾಗವತ್ತಲು
ಮೋನವಿತ್ತಲು ರಭಸವತ್ತಲು
ಹಾನಿಯಿತ್ತಲು ವೃದ್ಧಿಯತ್ತಲು ಭೂಪ ಕೇಳೆಂದ (ದ್ರೋಣ ಪರ್ವ, ೪ ಸಂಧಿ, ೧ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರ ಕೇಳು, ನೀನು ಗಳಿಸಿದ ಪುಣ್ಯದ ಫಲವನ್ನು ಏನೆಂದು ಹೇಳಲಿ, ಮಹಾಗಜವಾದ ಸುಪ್ರತೀಕವು ಸತ್ತುಬಿದ್ದಿತು. ಯುದ್ಧದಲ್ಲಿ ಶತ್ರುಗಳ ಸೈನ್ಯಕ್ಕೆ ಸ್ವಲ್ಪ ಹಾನಿಯಾಯಿತು, ಅವರ ಸೈನ್ಯದಲ್ಲಿ ಅತಿ ಸಂತೋಷವಿದ್ದರೆ, ನಮ್ಮಲ್ಲಿ ಚಿಂತೆ, ಅಲ್ಲಿ ರಭಸ ಆವೇಶವಿದ್ದರೆ ಇಲ್ಲಿ ಮೌನ, ಅಲ್ಲಿ ಏಳಿಗೆ ಅಭ್ಯುದಯ ಕಾಣಿಸಿದರೆ ಇಲ್ಲಿ ಹಾನಿ ತೋರುತ್ತಿತ್ತು.
ಅರ್ಥ:
ನೆರಹು: ಗುಂಪು; ಸುಕೃತ: ಒಳ್ಳೆಯ ಕೆಲಸ; ಫಲ: ಪ್ರಯೋಜನ; ಹೇಳು: ತಿಳಿಸು; ಉಗ್ಗಡ: ಉತ್ಕಟತೆ, ಅತಿಶಯ; ಆನೆ: ಗಜ; ಬಿದ್ದು: ಉರುಳು; ಕಾದು: ಹೋರಾಡು; ನಸು: ಕೊಂಚ, ಸ್ವಲ್ಪ; ಸೊಪ್ಪಾದು: ಹಾನಿಯಾಗು; ಅರಿ: ವೈರಿ; ಸೇನೆ: ಸೈನ್ಯ; ಧ್ಯಾನ: ಆತ್ಮಚಿಂತನೆ; ರಾಗ:ಹಿಗ್ಗು, ಸಂತೋಷ; ಮೋನ: ಮೌನ; ರಭಸ: ವೇಗ; ಹಾನಿ: ನಾಶ; ವೃದ್ಧಿ: ಹೆಚ್ಚಳ; ಭೂಪ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ನೀನು +ನೆರಹಿದ +ಸುಕೃತ+ ಫಲವದನ್
ಏನ +ಹೇಳುವೆನ್+ಇತ್ತಲ್+ಉಗ್ಗಡದ್
ಆನೆ +ಬಿದ್ದುದು +ಕಾದಿ +ನಸು +ಸೊಪ್ಪಾದುದ್+ಅರಿಸೇನೆ
ಧ್ಯಾನವಿತ್ತಲು +ರಾಗವತ್ತಲು
ಮೋನವಿತ್ತಲು +ರಭಸವತ್ತಲು
ಹಾನಿಯಿತ್ತಲು +ವೃದ್ಧಿಯತ್ತಲು +ಭೂಪ +ಕೇಳೆಂದ
ಅಚ್ಚರಿ:
(೧) ಇತ್ತಲು ಅತ್ತಲು ಪದದ ಬಳಕೆ
(೨) ಎಂಥಾ ಪುಣ್ಯನಿನ್ನದು ಎಂದು ಹಂಗಿಸುವ ಪರಿ – ನೀನು ನೆರಹಿದ ಸುಕೃತ ಫಲವದನೇನ ಹೇಳುವೆನ್