ಪದ್ಯ ೧೪: ಉಭಯ ಬಲದವರು ಭೀಮನನ್ನು ಹೇಗೆ ಹೊಗಳಿದರು?

ಗಗನದಲಿ ರಥ ಯೋಜನಾಂತಕೆ
ಚಿಗಿದು ಧರಣಿಯ ಮೇಲೆ ಬೀಳಲು
ನಗುತ ಕರಣವ ಹಾಯ್ಕಿ ಮಂಡಿಯೊಳಿರ್ದನಾ ದ್ರೋಣ
ಜಗದೊಳಾವಭ್ಯಾಸಿಯೋ ತಾ
ಳಿಗೆಯ ತಲ್ಲಣದೊಳಗೆ ನೆಗಹಿನ
ಸುಗಮ ಸಾಹಸನರರೆ ಮಝ ಭಾಪೆಂದುದುಭಯ ಬಲ (ದ್ರೋಣ ಪರ್ವ, ೧೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನು ಎಸೆದ ದ್ರೋಣನ ರಥವು ಒಮ್ದು ಯೋಜನದ ವರೆಗೆ ಹೋಗಿ ಭೂಮಿಯ ಮೇಲೆ ಬಿದ್ದಿತು. ದ್ರೋಣನು ಮಂಡಿ ಹಚ್ಚಿ ನಗುತ್ತಾ ಕುಳಿತಿದ್ದನು. ಉಭಯ ಬಲದವರೂ ಅದಾವ ಅಭ್ಯಾಸದಿಮ್ದ ರಥವನ್ನೆತ್ತಿ ಎಸೆಯುವ ಸಾಹಸ ಬಂದಿತೋ, ಭೀಮ ಭಲೇ ಎಂದು ಹೊಗಳಿದರು.

ಅರ್ಥ:
ಗಗನ: ಬಾನು, ಆಗಸ; ರಥ: ಬಂಡಿ; ಯೋಜನ: ಅಂತ: ಕೊನೆ; ಚಿಗಿ: ಬೆರಳುಗಳಿಂದ ಚಿಮ್ಮಿಸು; ಧರಣಿ: ಭೂಮಿ; ಬೀಳು: ಕುಸಿ; ನಗು: ಹರ್ಷ; ಕರಣ: ಕೆಲಸ; ಹಾಯ್ಕು: ಧರಿಸು, ತೊಡು; ಮಂಡಿ: ಮೊಳಕಾಲು, ಜಾನು; ಜಗ: ಪ್ರಪಂಚ; ಅಭ್ಯಾಸ: ವ್ಯಾಸಂಗ; ತಾಳಿಗೆ: ಗಂಟಲು; ತಲ್ಲಣ: ಅಂಜಿಕೆ, ಭಯ; ನೆಗಹು: ಮೇಲೆತ್ತು; ಸುಗಮ: ನಿರಾಯಾಸ; ಸಾಹಸ: ಪರಾಕ್ರಮ; ಅರರೆ: ಅಬ್ಬಾ; ಮಝ: ಭಲೇ; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಗಗನದಲಿ +ರಥ +ಯೋಜನಾಂತಕೆ
ಚಿಗಿದು +ಧರಣಿಯ +ಮೇಲೆ +ಬೀಳಲು
ನಗುತ +ಕರಣವ +ಹಾಯ್ಕಿ +ಮಂಡಿಯೊಳ್+ಇರ್ದನಾ +ದ್ರೋಣ
ಜಗದೊಳಾವ್+ಅಭ್ಯಾಸಿಯೋ +ತಾ
ಳಿಗೆಯ +ತಲ್ಲಣದೊಳಗೆ +ನೆಗಹಿನ
ಸುಗಮ +ಸಾಹಸನ್+ಅರರೆ +ಮಝ +ಭಾಪೆಂದುದ್+ಉಭಯ +ಬಲ

ಅಚ್ಚರಿ:
(೧)ಭೀಮನನ್ನು ಹೊಗಳಿದ ಪರಿ – ಜಗದೊಳಾವಭ್ಯಾಸಿಯೋ ತಾಳಿಗೆಯ ತಲ್ಲಣದೊಳಗೆ ನೆಗಹಿನ
ಸುಗಮ ಸಾಹಸನರರೆ ಮಝ