ಅರಸನೆಡವಂಕದಲಿ ಸಾತ್ಯಕಿ
ನರ ನಕುಲ ಸಹದೇವ ಸೋಮಕ
ವರ ಯುಧಾಮನ್ಯುತ್ತಮೌಜಸ ಸೃಂಜಯಾದಿಗಳು
ನೆರೆದುದಾ ಬಲವಂಕದಲಿ ತನು
ಜರು ವೃಕೋದರ ದ್ರುಪದಸುತ ದು
ರ್ಧರ ಶಿಖಂಡಿ ಪ್ರಮುಖ ಘನಪಾಂಚಾಲ ಪರಿವಾರ (ಶಲ್ಯ ಪರ್ವ, ೨ ಸಂಧಿ, ೧೨ ಪದ್ಯ)
ತಾತ್ಪರ್ಯ:
ಧರ್ಮಜನ ಎಡದಲ್ಲಿ ಸಾತ್ಯಕಿ ಅರ್ಜುನ, ನಕುಲ, ಸಹದೇವ ಸೋಮಕ, ಯುಧಾಮನ್ಯು, ಉತ್ತಮೌಜಸ, ಸೃಂಜಯರೇ ಮೊದಲಾದವರಿದ್ದರು. ಬಲಭಾಗದಲ್ಲಿ ಉಪಪಾಂಡವರು, ಭೀಮ ಧೃಷ್ಟದ್ಯುಮ್ನ, ಶಿಖಂಡಿ ಮತ್ತು ಉಳಿದ ಪಾಂಚಾಲರು ಇದ್ದರು.
ಅರ್ಥ:
ಅರಸ: ರಾಜ; ವಂಕ: ಬದಿ, ಮಗ್ಗುಲು; ನರ: ಅರ್ಜುನ; ಆದಿ: ಮುಂತಾದ; ನೆರೆ: ಗುಂಪು; ಬಲ: ದಕ್ಷಿಣ; ಎಡ: ವಾಮ; ತನುಜ: ಮಕ್ಕಳು; ಸುತ: ಮಗ; ಘನ: ಶ್ರೇಷ್ಠ; ಪರಿವಾರ: ಪರಿಜನ;
ಪದವಿಂಗಡಣೆ:
ಅರಸನ್+ಎಡವಂಕದಲಿ +ಸಾತ್ಯಕಿ
ನರ +ನಕುಲ +ಸಹದೇವ +ಸೋಮಕ
ವರ+ ಯುಧಾಮನ್ಯ+ಉತ್ತಮೌಜಸ+ ಸೃಂಜಯ+ಆದಿಗಳು
ನೆರೆದುದಾ +ಬಲವಂಕದಲಿ +ತನು
ಜರು +ವೃಕೋದರ +ದ್ರುಪದ+ಸುತ +ದು
ರ್ಧರ +ಶಿಖಂಡಿ +ಪ್ರಮುಖ +ಘನ+ಪಾಂಚಾಲ +ಪರಿವಾರ
ಅಚ್ಚರಿ:
(೧) ಎಡವಂಕ, ಬಲವಂಕ – ವಿರುದ್ಧ ಪದ
(೨) ಜೋಡಿ ಅಕ್ಷರದ ಪದ – ನರ, ನಕುಲ; ಸಹದೇವ ಸೋಮಕ