ಪದ್ಯ ೧೫: ಭೀಮನನ್ನು ಯಾರು ಬೈದರು?

ಉಚಿತವೆಂದರು ಕೆಲವು ಕೆಲರಿದ
ನುಚಿತವೆಂದರು ಪೂರ್ವಜನ್ಮೋ
ಪಚಿತ ದುಷ್ಕೃತವೈಸಲೇ ಶಿವ ಎಂದು ಕೆಲಕೆಲರು
ಖಚರ ಕಿನ್ನರ ಯಕ್ಷ ನಿರ್ಜರ
ನಿಚಯ ಭೀಮನ ಬೈದು ಕುರುಪತಿ
ಯಚಳ ಬಲವನು ಬಣ್ಣಿಸುತ ಹೊಕ್ಕರು ನಿಜಾಲಯವ (ಗದಾ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಮಾಡಿದುದು ಸರಿ ಎಂದು ಕೆಲವರು ಹೊಗಳಿದರು, ಇದು ಅನುಚಿತವೆಂದು ಕೆಲವರು ಹೇಳಿದರು. ಪೂರ್ವಜನ್ಮದ ಸಂಚಿತ ಪಾಪವಲ್ಲವೇ ಶಿವ ಶಿವಾ ಎಂದು ಕೆಲರು ಉದ್ಗರಿಸಿದರು. ದೇವತೆಗಳು, ಕಿನ್ನರರು, ಯಕ್ಷರು, ಭೀಮನನ್ನು ಬೈದು ಕೌರವನನ್ನು ಹೊಗಳುತ್ತಾ ತಮ್ಮ ನಿವಾಸಗಳಿಗೆ ಹೋದರು.

ಅರ್ಥ:
ಉಚಿತ: ಸರಿಯಾದುದು; ಕೆಲವು: ಸ್ವಲ್ಪ; ಅನುಚಿತ: ಸರಿಯಲ್ಲದ್ದು; ಪೂರ್ವ: ಹಿಂದಿನ; ಜನ್ಮ: ಹುಟ್ಟು; ದುಷ್ಕೃತ: ಪಾಪ; ಐಸಲೇ: ಅಲ್ಲವೇ; ಖಚರ: ಗಂಧರ್ವ; ಕಿನ್ನರ: ದೇವತೆಗಳ ಒಂದುವರ್ಗ; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ನಿರ್ಜರ: ದೇವತೆ; ನಿಚಯ: ಗುಂಪು; ಬೈದು: ಜರೆದು; ಅಚಲ: ಸ್ಥಿರವಾದ; ಬಲ: ಶಕ್ತಿ; ಬಣ್ಣಿಸು: ವರ್ಣಿಸು, ಹೊಗಳು; ಹೊಕ್ಕು: ಸೇರು; ಆಲಯ: ಮನೆ;

ಪದವಿಂಗಡಣೆ:
ಉಚಿತವ್+ಎಂದರು +ಕೆಲವು +ಕೆಲರ್+ಇದ್
ಅನುಚಿತವೆಂದರು +ಪೂರ್ವಜನ್ಮೋ
ಪಚಿತ+ ದುಷ್ಕೃತವ್+ಐಸಲೇ +ಶಿವ +ಎಂದು +ಕೆಲಕೆಲರು
ಖಚರ +ಕಿನ್ನರ+ ಯಕ್ಷ+ ನಿರ್ಜರ
ನಿಚಯ +ಭೀಮನ +ಬೈದು +ಕುರುಪತಿ
ಅಚಳ +ಬಲವನು +ಬಣ್ಣಿಸುತ +ಹೊಕ್ಕರು +ನಿಜಾಲಯವ

ಅಚ್ಚರಿ:
(೧) ಉಚಿತ, ಅನುಚಿತ – ವಿರುದ್ಧ ಪದಗಳು
(೨) ದೇವತೆಗಳ ಗುಂಪುಗಳು – ಖಚರ ಕಿನ್ನರ ಯಕ್ಷ

ಪದ್ಯ ೫೮: ದುರ್ಯೋಧನನು ಅಶ್ವತ್ಥಾಮನಿಗೆ ಏನು ಹೇಳಿದ?

ಅನಿಮಿಷರು ಗಂಧರ್ವ ಯಕ್ಷರು
ಮುನಿದು ಮಾಡುವುದೇನು ಮಾಯದ
ಮನುಜರಿಗೆ ತಾ ಸಾಧ್ಯವಹನೇ ತನ್ನನರಿಯಿರಲಾ
ವಿನುತ ಸಲಿಲಸ್ತಂಭವಿದ್ಯೆಯೊ
ಳೆನಗಿರವು ಪಾತಾಳದಲಿ ಯಮ
ತನುಜನೇಗುವ ರೂಹುದೋರದೆ ಹೋಗಿ ನೀವೆಂದ (ಗದಾ ಪರ್ವ, ೪ ಸಂಧಿ, ೫೮ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ದೇವತೆಗಳು, ಗಂಧರ್ವರು, ಯಕ್ಷರು ನನ್ನ ಮೇಲೆ ಮುನಿದು ಏನು ಮಾಡಬಲ್ಲರು? ಈ ಮನುಷ್ಯರ ಮೋಸಕ್ಕೆ ನಾನು ಸಿಲುಕುವವನೇ? ನನ್ನನ್ನು ನೀವು ಅರಿತಿಲ್ಲ. ಜಲಸ್ತಂಭ ವಿದ್ಯೆಯನ್ನವಲಂಬಿಸಿ ನಾನು ಪಾತಾಳಾದಲ್ಲಿರುತ್ತೇನೆ. ಈ ಯುಧಿಷ್ಠಿರನು ಏನು ಮಾಡಿಯಾನು? ನೀವು ಮಾತ್ರ ಅವರಿಗೆ ಕಾಣಿಸಿಕೊಳ್ಳದಂತೆ ದೂರಕ್ಕೆ ಹೋಗಿರಿ.

ಅರ್ಥ:
ಅನಿಮಿಷ: ದೇವತೆ; ಗಂಧರ್ವ: ಒಂದು ದೇವಜಾತಿ; ಯಕ್ಷ:ದೇವತೆಗಳಲ್ಲಿ ಒಂದು ವರ್ಗ; ಮುನಿ: ಋಷಿ; ಮಾಯ:ಗಾರುಡಿ; ಮನುಜ: ನರ; ಸಾಧ್ಯ: ಸಾಧಿಸಬಹುದಾದುದು; ಅರಿ: ತಿಳಿ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ಸಲಿಲ: ನೀರು; ಸ್ತಂಭ: ಸ್ಥಿರವಾಗಿರುವಿಕೆ; ವಿದ್ಯೆ: ಜ್ಞಾನ; ಪಾತಾಳ: ಅಧೋ ಲೋಕ; ಯಮ: ಜವ; ತನುಜ: ಮಗ; ರೂಹು: ರೂಪ; ಹೋಗು: ತೆರಳು;

ಪದವಿಂಗಡಣೆ:
ಅನಿಮಿಷರು+ ಗಂಧರ್ವ +ಯಕ್ಷರು
ಮುನಿದು +ಮಾಡುವುದೇನು +ಮಾಯದ
ಮನುಜರಿಗೆ+ ತಾ +ಸಾಧ್ಯವಹನೇ+ ತನ್ನನ್+ಅರಿಯಿರಲಾ
ವಿನುತ +ಸಲಿಲ+ಸ್ತಂಭ+ವಿದ್ಯೆಯೊಳ್
ಎನಗ್+ಇರವು +ಪಾತಾಳದಲಿ+ ಯಮ
ತನುಜನ್+ಏಗುವ +ರೂಹು+ತೋರದೆ+ ಹೋಗಿ +ನೀವೆಂದ

ಅಚ್ಚರಿ:
(೧) ಮ ಕಾರದ ಸಾಲು ಪದ – ಮುನಿದು ಮಾಡುವುದೇನು ಮಾಯದ ಮನುಜರಿಗೆ

ಪದ್ಯ ೩೩: ಆಗಸವಾಣಿಯು ಯಾರೆಂದು ಪರಿಚಯಿಸಿಕೊಂಡಿತು?

ಬಿಸುಟನುದಕವನಾ ನುಡಿಯನಾ
ಲಿಸಿದ ನಾರೈ ನೀನು ನಿನಗಾ
ಗಸದಲಿರವೇನಸುರನೋ ಕಿನ್ನರನೊ ನಿರ್ಜರನೊ
ಉಸುರೆನಲು ತಾಂ ಯಕ್ಷನೀಸಾ
ರಸವು ನನ್ನದು ನಿನ್ನ ತಮ್ಮದಿ
ರಸುವನೆಳೆದವ ನಾನು ಕೇಳೈ ಧರ್ಮಸುತಯೆಂದ (ಅರಣ್ಯ ಪರ್ವ, ೨೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಧರ್ಮಜನು ಆಗಸವಾಣಿಯನ್ನು ಕೇಳಿದ ಮೇಲೆ ತನ್ನ ಕೈಯಲ್ಲಿದ್ದ ನೀರನ್ನು ಚೆಲ್ಲಿದನು, ಆಗಸದ ಮಾತಿಗೆ ಉತ್ತರಿಸುತ್ತಾ, ನೀನು ಯಾರು? ಆಕಾಶದಲ್ಲೇಕಿರುವೆ? ನೀನು ರಾಕ್ಷಸನೋ, ಕಿನ್ನರನೋ, ದೇವತೆಯೋ ಹೇಳೆ ಎಂದು ಕೇಳಲು, ಆಗಸ ವಾಣಿಯು, ನಾನು ಯಕ್ಷ, ಈ ಸರೋವರ ನನ್ನದು, ನಿನ್ನ ತಮ್ಮಂದಿರ ಪ್ರಾಣವನ್ನು ತೆಗೆದವನು ನಾನೇ ಎಂದು ಉತ್ತರಿಸಿತು.

ಅರ್ಥ:
ಬಿಸುಟು: ಹೊರಹಾಕು; ನುಡಿ: ಮಾತು; ಆಲಿಸು: ಕೇಳು; ಆಗಸ: ಅಭ್ರ; ಅಸುರ: ರಾಕ್ಷಸ; ಕಿನ್ನರ: ದೇವತೆಗಳ ಒಂದು ವರ್ಗ; ನಿರ್ಜರ: ದೇವತೆ; ಉಸುರು: ಹೇಳು; ಸಾರಸ: ಸರೋವರ; ಅಸು: ಪ್ರಾಣ; ಎಳೆ: ತನ್ನ ಕಡೆಗೆ ಸೆಳೆದುಕೊ; ಕೇಳು: ಆಲಿಸು; ಸುತ: ಪುತ್ರ;

ಪದವಿಂಗಡಣೆ:
ಬಿಸುಟನ್+ಉದಕವನ್+ಆ+ ನುಡಿಯನ್
ಆಲಿಸಿದನ್ + ಆರೈ +ನೀನು+ ನಿನಗ್
ಆಗಸದಲ್+ಇರವ್+ಏನ್+ಅಸುರನೋ +ಕಿನ್ನರನೊ+ ನಿರ್ಜರನೊ
ಉಸುರೆನಲು+ ತಾಂ +ಯಕ್ಷನ್+ಈ+ಸಾ
ರಸವು +ನನ್ನದು +ನಿನ್ನ +ತಮ್ಮದಿರ್
ಅಸುವನ್+ಎಳೆದವ+ ನಾನು +ಕೇಳೈ +ಧರ್ಮಸುತಯೆಂದ

ಅಚ್ಚರಿ:
(೧) ಹೇಳು ಎನಲು ಉಸುರು ಪದದ ಬಳಕೆ
(೨) ನೊ ಪದದ ಬಳಕೆ – ಅಸುರನೊ, ಕಿನ್ನರನೊ, ನಿರ್ಜರನೊ

ಪದ್ಯ ೨೩: ಗಂಧರ್ವರು ಕರ್ಣನ ಜೊತೆ ಹೇಗೆ ಯುದ್ಧ ಮಾಡಿದರು?

ಕಡಿದು ಗಂಧರ್ವನ ಶರೌಘವ
ನಡಸಿ ನೆಟ್ಟವು ಕರ್ಣಶರ ಸೈ
ಹೆಡಹಿದವು ಕಿಂಪುರುಷ ಗುಹ್ಯಕ ಯಕ್ಷರಾಕ್ಷಸರ
ಹೊಡಕರಿಸಿ ಹೊದರೆದ್ದು ಬಲ ಸಂ
ಗಡಸಿ ತಲೆವರಿಗೆಯಲಿ ಕರ್ಣನ
ಬಿಡು ಸರಳ ಬೀದಿಯಲಿ ಬೆದರದೆ ನೂಕಿತಳವಿಯಲಿ (ಅರಣ್ಯ ಪರ್ವ, ೨೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಗಂಧರ್ವನ ಬಾಣಗಳನ್ನು ಕಡಿದ ಕರ್ಣನ ಬಾಣಗಳು ಗಂಧರ್ವನ ಪಡೆಯಲ್ಲಿದ್ದ ಕಿಂಪುರುಷ, ಗುಹ್ಯಕ, ರಾಕ್ಷಸರನ್ನು ಸಂಹರಿಸಿದವು. ಆದರೆ ಗಂಧರ್ವ ಸೈನ್ಯವು ಕರ್ಣನ ಬಾಣಗಳಿಗೆ ಹೆದರದೆ ತಲೆಗಳನ್ನೇ ಗುರಾಣಿಯಾಗಿ ಒಡ್ಡಿ ಯುದ್ಧ ಮಾಡಿದರು.

ಅರ್ಥ:
ಕಡಿ: ಸೀಳು; ಗಂಧರ್ವ: ಖಚರ, ದೇವತೆಗಳ ವರ್ಗ; ಶರ: ಬಾಣ; ಔಘ: ಗುಂಪು, ಸಮೂಹ; ಅಡಸು: ಬಿಗಿಯಾಗಿ ಒತ್ತು, ತುರುಕು; ನೆಟ್ಟು: ಹೂಳು, ನಿಲ್ಲಿಸು; ಕೆಡಹು: ಹಾಳುಮಾಡು; ಹೊಡಕರಿಸು: ಕಾಣಿಸು, ಬೇಗಬೆರೆಸು; ತಲೆ: ಶಿರ; ಹೊದರು: ತೊಡಕು, ತೊಂದರೆ; ಬಲ: ಶಕ್ತಿ, ಸೈನ್ಯ; ಸಂಗಡ: ಜೊತೆ; ಬಿಡು: ತೊರೆ; ಸರಳ: ಬಾಣ; ಬೀದಿ: ಮಾರ್ಗ; ಬೆದರು: ಹೆದರು, ಅಂಜಿಕೆ; ನೂಕು: ತಳ್ಳು; ತಳ: ಸಮತಟ್ಟಾದ ಪ್ರದೇಶ;

ಪದವಿಂಗಡಣೆ:
ಕಡಿದು +ಗಂಧರ್ವನ +ಶರೌಘವನ್
ಅಡಸಿ +ನೆಟ್ಟವು +ಕರ್ಣ+ಶರ+ ಸೈ
ಹೆಡಹಿದವು +ಕಿಂಪುರುಷ +ಗುಹ್ಯಕ +ಯಕ್ಷ+ರಾಕ್ಷಸರ
ಹೊಡಕರಿಸಿ+ ಹೊದರೆದ್ದು+ ಬಲ+ ಸಂ
ಗಡಸಿ+ ತಲೆವರಿಗೆಯಲಿ +ಕರ್ಣನ
ಬಿಡು+ ಸರಳ+ ಬೀದಿಯಲಿ +ಬೆದರದೆ +ನೂಕಿ+ತಳವಿಯಲಿ

ಅಚ್ಚರಿ:
(೧) ಗಂಧರ್ವರ ಸೈನ್ಯದಲ್ಲಿದ್ದ ಪಂಗಡಗಳು – ಕಿಂಪುರುಷ, ಗುಹ್ಯಕ, ಯಕ್ಷ, ರಾಕ್ಷಸ

ಪದ್ಯ ೧೪: ಪಾಂಡವರನ್ನು ಗಂಧಮಾದನದಲ್ಲಿ ಯಾರು ಸ್ವಾಗತಿಸಿದರು?

ಕೊಂದನವನನು ವಿಗತಶಾಪನು
ನಿಂದನಿದಿರಲಿ ಯಕ್ಷರೂಪಿನ
ಲಂದಗಸ್ತ್ಯನ ಶಾಪ ವೃತ್ತಾಂತವನು ವಿವರಿಸಿದ
ಬಂದನಲ್ಲಿಗೆ ಯಕ್ಷಪತಿ ನಲ
ವಿಂದಲಿವರನು ವಿವಿಧ ವಸ್ತುಗ
ಳಿಂದ ಸತ್ಕರಿಸಿದನು ಕೊಂಡಾಡಿದನು ಪಾಂಡವರ (ಅರಣ್ಯ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನು ಮಣಿಮಂತನನ್ನು ಸಂಹರಿಸಿದನು. ಆಗ ಅವನು ತನ್ನ ಶಾಪವನ್ನು ಕಳೆದುಕೊಂಡು ಯಕ್ಷರೂಪಿನಿಂದ ನಿಂತು ತನ್ನ ವೃತ್ತಾಂತವನ್ನು ಹೇಳಿಕೊಂಡನು. ಆ ವೇಳೆಗೆ ಯಕ್ಷರೊಡೆಯನಾದ ಕುಬೇರನು ಅಲ್ಲಿಗೆ ಬಂದು ಪಾಂಡವರನ್ನು ಹೊಗಳಿ ಅವರಿಗೆ ಅನೇಕ ಉತ್ತಮ ವಸ್ತುಗಳನ್ನು ಕೊಟ್ಟು ಸತ್ಕರಿಸಿದನು.

ಅರ್ಥ:
ಕೊಂದು: ಸಾಯಿಸು; ವಿಗತ: ಕಳೆದುಹೋದ; ಶಾಪ: ನಿಷ್ಠುರದ ನುಡಿ; ನಿಂದು: ನಿಲ್ಲು; ಇದಿರು: ಎದುರು; ಯಕ್ಷ: ದೇವತೆಗಳ ವರ್ಗ; ರೂಪ: ಆಕಾರ; ಅಂದು: ಹೇಳು; ವೃತ್ತಾಂತ: ಘಟನೆ, ಸಂಗತಿ; ವಿವರ: ವಿಸ್ತಾರ; ಬಂದು: ಆಗಮಿಸು; ಯಕ್ಷಪತಿ: ಕುಬೇರ; ನಲವು: ಸಂತೋಷ; ವಿವಿಧ: ಹಲವಾರು; ವಸ್ತು: ಪದಾರ್ಥ; ಸತ್ಕರಿಸು: ಗೌರವಿಸು; ಕೊಂಡಾಡು: ಹೊಗಳು;

ಪದವಿಂಗಡಣೆ:
ಕೊಂದನ್+ಅವನನು +ವಿಗತ+ಶಾಪನು
ನಿಂದನ್+ಇದಿರಲಿ +ಯಕ್ಷರೂಪಿನಲ್
ಅಂದ್+ಅಗಸ್ತ್ಯನ +ಶಾಪ +ವೃತ್ತಾಂತವನು +ವಿವರಿಸಿದ
ಬಂದನಲ್ಲಿಗೆ +ಯಕ್ಷಪತಿ +ನಲ
ವಿಂದಲ್+ಇವರನು +ವಿವಿಧ +ವಸ್ತುಗ
ಳಿಂದ +ಸತ್ಕರಿಸಿದನು +ಕೊಂಡಾಡಿದನು +ಪಾಂಡವರ

ಅಚ್ಚರಿ:
(೧) ಅಗಸ್ತ್ಯ ಶಾಪದ ಕಥೆ: ಹಿಂದೆ ಕುಬೇರನು ತನ್ನ ಸೈನ್ಯದೊಡನೆ ಯುದ್ಧಕ್ಕೆ ಹೋಗುತ್ತಿರುವಾಗ ಮಣಿಮಂತನು ಅಗಸ್ತ್ಯ ಋಷಿಗಳ ಮೇಲೆ ಉಗುಳಲು ಅವನು ನಿನ್ನ ಸೈನ್ಯವನ್ನು ಒಬ್ಬ ಮನುಷ್ಯನು ಸಂಹರಿಸುವವರೆಗೆ ನೀನು ರಾಕ್ಷಸನಾಗಿರು ಎಂದು ಶಪಿಸಿದ್ದನು.

ಪದ್ಯ ೫೫: ಯಕ್ಷಸೈನಿಕರು ಏನೆಂದು ಚಿಂತಿಸಿದರು?

ಚೆಲ್ಲಿದರು ರಕ್ಕಸರು ಯಕ್ಷರು
ಬಿಲ್ಲ ಬಿಸುಟರು ಗುಹ್ಯಕರು ನಿಂ
ದಲ್ಲಿ ನಿಲ್ಲರು ಕಿನ್ನರರನಿನ್ನೇನು ಹೇಳುವೆನು
ಗೆಲ್ಲವಿದು ಲೇಸಾಯ್ತು ಮಾನವ
ನಲ್ಲ ನಮಗೀ ಭಂಗ ಭಯರಸ
ವೆಲ್ಲಿ ಭಾಪುರೆ ವಿಧಿಯೆನುತ ಚಿಂತಿಸಿತು ಭಟನಿಕರ (ಅರಣ್ಯ ಪರ್ವ, ೧೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ರಾಕ್ಷಸರು ಓಡಿದರು, ಯಕ್ಷರು ಬಿಲ್ಲುಗಳನ್ನು ಬಿಸಾಡಿದರು, ಗುಹ್ಯಕರು ನಿಂತಲ್ಲಿ ನಿಲ್ಲಲಿಲ್ಲ, ಕಿನ್ನರರ ಪಾಡನ್ನು ನಾನೇನು ಹೇಳಲಿ, ಇವನಾರೋ ನಮ್ಮನ್ನು ಜಯಿಸಿದ, ಖಂಡಿತವಾಗಿ ಇವನು ಮನುಷ್ಯನಲ್ಲ, ನಮಗೆ ಇಂತಹ ಭಯ ಅಪಮಾನಗಳು ವಿಧಿವಶದಿಂದಾದವು ಭಾಪುರೆ ವಿಧಿ ಎಂದು ಯಕ್ಷ ಯೋಧರು ಚಿಂತಿಸಿದರು.

ಅರ್ಥ:
ಚೆಲ್ಲು: ಹರಡು; ರಕ್ಕಸ: ರಾಕ್ಷಸ; ಯಕ್ಷ: ದೇವತೆಗಳ ಒಂದು ಗುಂಪು; ಬಿಲ್ಲು: ಚಾಪ; ಬಿಸುಟು: ಹೊರಹಾಕು; ಗುಹ್ಯಕ: ಯಕ್ಷ; ನಿಲ್ಲು: ಸ್ಥಿರವಾಗು; ಕಿನ್ನರ: ದೇವತೆಗಳ ಒಂದುವರ್ಗ, ಕುಬೇರನ ಪ್ರಜೆ; ಗೆಲುವು: ಜಯ; ಲೇಸು: ಒಳಿತು; ಮಾನವ: ನರ; ಭಂಗ: ಮುರಿ, ತುಂಡು; ಭಯ: ಭೀತಿ; ರಸ: ಸಾರ; ಭಾಪುರೆ: ಭಲೆ; ವಿಧಿ: ಸೃಷ್ಟಿಕರ್ತ, ಬ್ರಹ್ಮ; ಚಿಂತಿಸು: ಯೋಚಿಸು; ಭಟ: ಸೈನ್ಯ; ನಿಕರ: ಗುಂಪು;

ಪದವಿಂಗಡಣೆ:
ಚೆಲ್ಲಿದರು +ರಕ್ಕಸರು +ಯಕ್ಷರು
ಬಿಲ್ಲ +ಬಿಸುಟರು +ಗುಹ್ಯಕರು +ನಿಂ
ದಲ್ಲಿ +ನಿಲ್ಲರು +ಕಿನ್ನರರನ್+ಇನ್ನೇನು +ಹೇಳುವೆನು
ಗೆಲ್ಲವಿದು +ಲೇಸಾಯ್ತು +ಮಾನವ
ನಲ್ಲ +ನಮಗೀ +ಭಂಗ +ಭಯರಸ
ವೆಲ್ಲಿ +ಭಾಪುರೆ+ ವಿಧಿಯೆನುತ +ಚಿಂತಿಸಿತು +ಭಟನಿಕರ

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭಂಗ ಭಯರಸವೆಲ್ಲಿ ಭಾಪುರೆ

ಪದ್ಯ ೪೭: ಯಕ್ಷರು ಭೀಮನಲ್ಲಿ ಏನು ಕೇಳಿದರು?

ಎದ್ದರವರಿದಿರಾಗಿ ಭೀಮನ
ಹೊದ್ದಿದರು ನೀನಾರು ಹದ್ದಿಗೆ
ಬಿದ್ದಿನನೊ ಮೇಣ್ ಮಿತ್ರಭಾವದಲೆಮಗೆ ಬಿದ್ದಿನನೊ
ಉದ್ದುರುಟುತನ ನಿನ್ನ ಮೋರೆಯ
ಲುದ್ದುದೈ ನೀನಾರು ನಿನಗೇ
ನಿದ್ದುದಿಲ್ಲಿಯೆನುತ್ತ ನುಡಿದರು ಯಕ್ಷರನಿಲಜನ (ಅರಣ್ಯ ಪರ್ವ, ೧೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ಭೀಮನ ಆಗಮನವನ್ನು ಕಂಡ ಯಕ್ಷರು ಅವನಿಗೆ ಎದುರಾಗಿ ಬಂದು, ನೀನಾರು, ನಮ್ಮ ವೈರಿಯಾಗಿ ಹದ್ದಿಗೆ ಊಟವಾಗಲು ಬಂದಿರುವೆಯೋ ಸ್ನೇಹ ಭಾವದಿಂದ ನಮ್ಮ ಅತಿಥಿಯಾಗಿ ಬಂದಿರುವೆಯೋ? ನಿನ್ನ ಮುಖದ ಮೇಲೆ ಬಹಳ ದಿಟ್ಟತನವೆದ್ದು ಕಾಣಿಸುತ್ತಿದೆ, ನಿನಗೆ ಇಲ್ಲಿರುವ ಕೆಲಸವಾದರು ಏನು ಎಂದು ಯಕ್ಷರು ಭೀಮನನ್ನು ಕೇಳಿದರು.

ಅರ್ಥ:
ಎದ್ದು: ಮೇಲೇಳು; ಇದಿರಾಗು: ಎದುರಾಗು; ಹೊದ್ದು: ಆವರಿಸು; ಹದ್ದು: ಪಕ್ಷಿಯ ಜಾತಿ; ಬಿದ್ದು: ಬೀಳು; ಮೇಣ್: ಅಥವಾ; ಮಿತ್ರ: ಸ್ನೇಹ; ಉದ್ದುರುಟುತನ: ಒರಟುತನ, ಕಠೋರ; ಮೋರೆ: ಮುಖ; ನುಡಿ: ಮಾತಾಡು; ಅನಿಲಜ: ವಾಯು ಪುತ್ರ (ಭೀಮ);

ಪದವಿಂಗಡಣೆ:
ಎದ್ದರ್+ಅವರ್+ಇದಿರಾಗಿ+ ಭೀಮನ
ಹೊದ್ದಿದರು +ನೀನಾರು +ಹದ್ದಿಗೆ
ಬಿದ್ದಿನನೊ+ ಮೇಣ್+ ಮಿತ್ರಭಾವದಲ್+ಎಮಗೆ +ಬಿದ್ದಿನನೊ
ಉದ್ದುರುಟುತನ +ನಿನ್ನ +ಮೋರೆಯಲ್
ಉದ್ದುದೈ +ನೀನಾರು +ನಿನಗೇನ್
ಇದ್ದುದ್+ಇಲ್ಲಿ+ಎನುತ್ತ +ನುಡಿದರು +ಯಕ್ಷರ್+ಅನಿಲಜನ

ಅಚ್ಚರಿ:
(೧) ಬಿದ್ದಿನನೊ – ೩ ಸಾಲಿನ ಮೊದಲ ಹಾಗು ಕೊನೆ ಪದ
(೨) ನೀನಾರು – ೨, ೫ ಸಾಲಿನೆ ೨ನೇ ಪದ

ಪದ್ಯ ೨೮: ಅರ್ಜುನನಿಗೆ ಯಾರು ಶುಭ ನುಡಿಯಲೆಂದು ಧರ್ಮಜನು ಹೇಳಿದನು?

ಕರುಣಿಸಲಿ ಕಾಮಾರಿ ಕೃಪೆಯಿಂ
ವರ ಮಹಾಸ್ತ್ರವನಿಂದ್ರ ಯಮ ಭಾ
ಸ್ಕರ ಹುತಾಶನ ನಿರುತಿ ವರುಣ ಕುಬೇರ ಮಾರುತರು
ಸುರರು ವಸುಗಳು ಸಿದ್ಧ ವಿದ್ಯಾ
ಧರಮಹೋರಗ ಯಕ್ಷ ಮನುಕಿಂ
ಪುರುಷರೀಯಲಿ ನಿನಗೆ ವಿಮಳ ಸ್ವಸ್ತಿವಾಚನವ (ಅರಣ್ಯ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶಿವನು ನಿನಗೆ ದಯೆತೋರಿ ಶ್ರೇಷ್ಠವಾದ ಆಯುಧವನ್ನು ನೀಡಲಿ. ಇಂದ್ರ, ಯಮ, ಸೂರ್ಯ, ಅಗ್ನಿ, ನಿರುತಿ, ವರುಣ, ಕುಬೇರ, ವಾಯು, ವಸುಗಳು, ಸಿದ್ಧರು, ವಿದ್ಯಾಧರರು, ಮಹಾಸರ್ಪಗಳು, ಯಕ್ಷರು, ಮನುಗಳು, ದೇವತೆಗಳು, ಕಿಂಪುರುಷರು ನಿನಗೆ ಶುಭನುಡಿಗಳಿಂದ ಹರಸಲಿ ಎಂದು ಧರ್ಮಜನು ನುಡಿದನು.

ಅರ್ಥ:
ಕರುಣಿಸು: ದಯೆತೋರು, ಆಶೀರ್ವದಿಸು; ಕಾಮ: ಮನ್ಮಥ; ಅರಿ: ವೈರಿ; ಕಾಮಾರಿ: ಶಿವ; ಕೃಪೆ: ದಯೆ, ಕರುಣೆ; ವರ: ಶ್ರೇಷ್ಠ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಇಂದ್ರ: ಶಕ್ರ; ಭಾಸ್ಕರ: ಸೂರ್ಯ; ಹುತಾಶನ: ಹವಿಸ್ಸನ್ನು ಸೇವಿಸುವವನು, ಅಗ್ನಿ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಕುಬೇರ: ಅಷ್ಟದಿಕ್ಪಾಲಕರಲ್ಲಿ ಒಬ್ಬ, ಧನಪತಿ; ಮಾರುತ: ವಾಯುದೇವತೆ; ಸುರರು: ದೇವತೆಗಳು; ವಸು: ದೇವತೆಗಳ ಒಂದು ವರ್ಗ; ಸಿದ್ಧ: ದೇವತೆಗಳಲ್ಲಿ ಒಂದು ಪಂಗಡ; ವಿದ್ಯಾಧರ: ದೇವತೆಗಳ ಗುಂಪು; ಉರಗ: ಹಾವು; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ಮನು: ಬ್ರಹ್ಮನ ಹದಿನಾಲ್ಕು ಜನ ಮಾನಸಪುತ್ರರಲ್ಲಿ ಪ್ರತಿಯೊಬ್ಬ; ಕಿಂಪುರುಷ: ಕುದುರೆಯ ಮುಖ ಮತ್ತು ಮನುಷ್ಯನ ಶರೀರವನ್ನುಳ್ಳ ಒಂದು ದೇವತೆ, ಕಿನ್ನರ; ವಿಮಳ: ಶುದ್ಧ; ಸ್ವಸ್ತಿ: ಒಳ್ಳೆಯದು, ಶುಭ; ವಾಚನ: ನುಡಿ;

ಪದವಿಂಗಡಣೆ:
ಕರುಣಿಸಲಿ +ಕಾಮಾರಿ +ಕೃಪೆಯಿಂ
ವರ+ ಮಹಾಸ್ತ್ರವನ್+ಇಂದ್ರ +ಯಮ +ಭಾ
ಸ್ಕರ+ ಹುತಾಶನ+ ನಿರುತಿ +ವರುಣ +ಕುಬೇರ +ಮಾರುತರು
ಸುರರು +ವಸುಗಳು +ಸಿದ್ಧ +ವಿದ್ಯಾ
ಧರ+ಮಹ+ಉರಗ +ಯಕ್ಷ +ಮನು+ಕಿಂ
ಪುರುಷರ್+ಈಯಲಿ +ನಿನಗೆ +ವಿಮಳ +ಸ್ವಸ್ತಿ+ವಾಚನವ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರುಣಿಸಲಿ ಕಾಮಾರಿ ಕೃಪೆಯಿಂ
(೨) ಮಹಾಸ್ತ್ರ, ಮಹೋರಗ – ಮಹ ಪದದ ಬಳಕೆ

ಪದ್ಯ ೩೨: ಯಕ್ಷಕಿಂಪುರಷರು ಅರ್ಜುನನ ಜೊತೆ ಯುದ್ಧಮಾಡಿದರೆ?

ಅದು ಗಣನೆಗೊಂಬತ್ತು ಸಾವಿರ
ವರದೊಳಿದ್ದುದು ಯಕ್ಷಕಿನ್ನರ
ಸುದತಿಯರು ಕಿಂಪುರುಷರತಿರಾಗಿಗಳು ಸುಖಮಯರು
ಇದರ ಘಲ್ಲಣೆ+ಗಾನಲೇನ
ಪ್ಪುದು +ತದೀಯ +ಜನಂಗಳ್+ಇತ್ತುದು
ಸುದತಿಯರನಾಮಂಡಲಕೆ+ ಮೀಟಾದ +ವಸ್ತುಗಳ (ಸಭಾ ಪರ್ವ, ೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಹಿಮಾಲಯದ ಬೆಟ್ಟಗಳನ್ನು ತನ್ನ ವಶಕ್ಕೆ ತೆಗೆದುಕೊಂಡಮೇಲೆ, ಅರ್ಜುನನು ತನ್ನ ಸೈನ್ಯವನ್ನು ಕಿಂಪುರುಷರಿದ್ದ ಪ್ರದೇಶಕ್ಕೆ ಬಂದನು, ಅದು ಒಂಬತ್ತು ಸಾವಿರ ಯೋಜನದ ವಿಸ್ತಾರವುಳ್ಳ ಪ್ರದೇಶ. ಅಲ್ಲಿ ಯಕ್ಷಕಿನ್ನರ ಕಿಂಪುರುಷರಿದ್ದರು, ಅವರು ಸುಖವಾಗಿ, ಅತಿಶಯರಾಗದಿಂದ ಜೀವಿಸಿದವರು. ಈ ಸೈನ್ಯವನ್ನು ಎದುರಿಸದೆ ಅವರು ತಮ್ಮಲ್ಲಿದ್ದ ಉತ್ತಮ ವಸ್ತುಗಳನ್ನು ಕೊಟ್ಟರು.

ಅರ್ಥ:
ಗಣನೆ: ಎಣಿಕೆ; ಸಾವಿರ: ಸಹಸ್ರ; ಸುದತಿ: ಸುಂದರಿ, ಸುಂದರವಾದ ಹಲ್ಲುಗಳನ್ನುಳ್ಳವಳು; ರಾಗಿ: ಭೋಗಭಾಗ್ಯಗಳಲ್ಲಿ ಅನುರಾಗವುಳ್ಳ; ಅತಿ: ಹೆಚ್ಚು; ಸುಖ: ಸಂತೋಷ; ಮೀಟು: ಶ್ರೇಷ್ಠ; ತದೀಯ: ಅದಕ್ಕೆ ಸಂಬಂಧಪಟ್ಟ; ಜನ: ಗುಂಪು; ಇತ್ತು: ಕೊಡು; ಫಲ್ಲಣೆ: ಘಲ್ ಘಲ್ ಶಬ್ದ; ವಸ್ತು: ಸಾಮಾನು, ಸಾಮಗ್ರಿ; ಮಂಡಲ: ನಾಡಿನ ಒಂದು ಭಾಗ;

ಪದವಿಂಗಡಣೆ:
ಅದು +ಗಣನೆಗ್+ಒಂಬತ್ತು +ಸಾವಿರವ್
ಅರದೊಳ್+ಇದ್ದುದು +ಯಕ್ಷ+ಕಿನ್ನರ
ಸುದತಿಯರು +ಕಿಂಪುರುಷರ್+ಅತಿರಾಗಿಗಳು+ ಸುಖಮಯರು
ಇದರ+ ಫಲ್ಲಣೆಗಾನಲೇನ
ಪ್ಪುದು ತದೀಯ ಜನಂಗಳಿತ್ತುದು
ಸುದತಿಯರನಾಮಂಡಲಕೆ ಮೀಟಾದ ವಸ್ತುಗಳ

ಅಚ್ಚರಿ:
(೧) ಸುದತಿ – ೩, ೬ ಸಾಲಿನ ಮೊದಲ ಪದ
(೨) ಅದು ಇದರ – ೧, ೪ ಸಾಲಿನ ಮೊದಲ ಪದ, (ಅದು, ಇದು ಎಂದು ಹೇಳುವ ಪದಗಳು)

ಪದ್ಯ ೨೪: ದ್ರೌಪದಿಯ ಸ್ವಯಂವರವನ್ನು ಆಗಸದಿಂದ ಯಾರು ನೋಡುತ್ತಿದ್ದರು?

ಅರಸ ಕೇಳೈ ಮೇಲೆ ವಿದ್ಯಾ
ಧರ ಮಹೋರಗ ಯಕ್ಷರಾಕ್ಷಸ
ಗರುಡ ಕಿನ್ನರ ಸಿದ್ಧ ವಸುಗಂಧರ್ವ ಭೂತಗಣ
ವರಮರುದ್ಗಣ ರುದ್ರ ಮನು ಭಾ
ಸ್ಕರ ಸುಧಾಕರ ತಾರಕಾಗ್ರಹ
ಸುರಮುನಿಪ ದಿಕ್ಪಾಲತತಿ ನೆರೆದುದು ವಿಮಾನದಲಿ (ಆದಿ ಪರ್ವ, ೧೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಆ ದ್ರೌಪದಿಯ ಸ್ವಯಂವರ ಭೂಮಿಜನಗಳನ್ನು ಆಕರ್ಷಿಸಿದಂತೆ ಆಗಸದಲ್ಲಿ ದೇವತೆಗಳನ್ನು ಆಕರ್ಷಿಸಿತ್ತು. ಆಕಾಶದಲ್ಲಿ, ವಿದ್ಯಾಧರರು, ಹಾವುಗಳು, ಯಕ್ಷರು, ರಾಕ್ಷಸರು, ಗರುಡರು, ಕಿನ್ನರರು, ಸಿದ್ಧರು, ವಸುಗಳು, ಗಂಧರ್ವರು, ಭೂತಗಳು, ಮರುದ್ಗಣ, ರುದ್ರರು, ಮನುಗಳು, ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು, ದೇವರ್ಷಿಗಳು, ದಿಕ್ಪಾಲಕರು, ಎಲ್ಲರೂ ತಮ್ಮ ವಿಮಾನಗಳಲ್ಲಿ ಕುಳಿತು ನೋಡುತ್ತಿದ್ದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮೇಲೆ:ತುದಿ, ಅಗ್ರಭಾಗ; ವಿದ್ಯಾಧರ: ದೇವತೆಗಳ ಒಂದು ವರ್ಗ; ಮಹ: ದೊಡ್ಡ; ಉರಗ: ಹಾವು; ಯಕ್ಷ: ದೇವತೆಗಳ ಒಂದು ವರ್ಗ; ರಾಕ್ಷಸ: ರಕ್ಕಸ, ದನುಜ, ದೈತ್ಯ; ಗರುಡ: ವಿಷ್ಣುವಿನ ವಾಹನ; ಕಿನ್ನರ: ಕುದುರೆಯ ತಲೆ ಮನುಷ್ಯನ ಮುಖ ವಿರುವ ದೇವತೆ; ಸಿದ್ಧ: ಸಾಧಿಸಿದವನು, ದೇವತೆಗಳ ಒಂದು ವರ್ಗ; ವಸು: ದೇವತೆಗಳ ಒಂದು ವರ್ಗ;ಭೂತ: ಪಿಶಾಚಿ; ಗಣ: ಗುಂಪು; ಗಂಧರ್ವ: ದೇವಲೋಕದ ಸಂಗೀತಗಾರ; ಮರುದ್ಗಣ: ದೇವತೆಗಳ, ವಾಯುಗಳ ಸಮೂಹ; ರುದ್ರ: ಭಯಂಕರವಾದ, ಹನ್ನೊಂದು ಗಣದೇವತೆಗಳು; ಮನು: ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬ; ಭಾಸ್ಕರ: ಸೂರ್ಯ; ಸುಧಾಕರ: ಚಂದ್ರ; ತಾರಕ: ತಾರೆ, ನಕ್ಷತ್ರ; ಗ್ರಹ: ಹಿಡಿಯುವುದು, ಹಿಡಿತ, ನವಗ್ರಹಗಳನ್ನು ಸೂಚಿಸುವ ಪದ; ಸುರ: ದೇವತೆಗಳು; ಸುರಮುನಿ: ದೇವರ್ಷಿಗಳು; ದಿಕ್ಕು: ದಿಶೆ, ಎಂಟು ಎಂಬ ಸಂದೇಶ; ಪಾಲಕ: ಅಧಿಪತಿ; ನೆರೆದು: ಸೇರು; ವಿಮಾನ: ಹಾರಾಡುವ ಯಂತ್ರ;

ಪದವಿಂಗಡಣೆ:
ಅರಸ +ಕೇಳೈ +ಮೇಲೆ +ವಿದ್ಯಾ
ಧರ +ಮಹೋರಗ+ ಯಕ್ಷ+ರಾಕ್ಷಸ
ಗರುಡ+ ಕಿನ್ನರ +ಸಿದ್ಧ +ವಸು+ಗಂಧರ್ವ +ಭೂತಗಣ
ವರಮರುದ್ಗಣ +ರುದ್ರ+ ಮನು +ಭಾ
ಸ್ಕರ+ ಸುಧಾಕರ+ ತಾರಕಾ+ಗ್ರಹ
ಸುರ+ಮುನಿಪ+ ದಿಕ್ಪಾಲತತಿ +ನೆರೆದುದು +ವಿಮಾನದಲಿ

ಅಚ್ಚರಿ:
(೧) ಎಲ್ಲಾ ರೀತಿಯ ದೇವತೆಗಳ ಹೆಸರನ್ನು ಉಲ್ಲೇಖಿಸಿರುವುದು
(೨) ವಿಮಾನದ ಕಲ್ಪನೆ, ಈ ಹಿಂದೆ ಪದ್ಯ ೧೭ ರಲ್ಲಿ ರೊಬೋಟ್ ಕಲ್ಪನೆ ಇತ್ತು (ಯಂತ್ರಮಯ ಪುತ್ಥಳಿ)