ಪದ್ಯ ೩೭: ಧರ್ಮಜನು ಭೀಮನಿಗೆ ಎಲ್ಲಿಗೆ ಹೋಗಲು ಹೇಳಿದ?

ಹಾ ನುಡಿಯದಿರು ನಿಲು ಪಿತಾಮಹ
ನೇನ ಬೆಸಸಿದುದಕೆ ಹಸಾದವು
ನೀನು ನಡೆ ಪಾಳಯಕೆ ಬಿಡುಗುರಿತನವ ಮಾಣೆಯಲ
ಮೌನಮುದ್ರೆಯ ಹಿಡಿಯೆನಲು ಪವ
ಮಾನನಂದನ ಖಾತಿಯಲಿ ಯಮ
ಸೂನುವನು ಬಿಡೆ ನೋಡಿ ಮೆಲ್ಲನೆ ಸರಿದನಲ್ಲಿಂದ (ಭೀಷ್ಮ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ಭೀಮನ ಮಾತನ್ನು ಕೇಳಿ ಧರ್ಮಜನು, ಸಾಕು, ಮಾತನಾಡಬೇಡ, ತಾತನು ಏನು ಹೇಳಿದರೂ ಅದೇ ನಮಗೆ ಪ್ರಸಾದ. ಛೇ ನೀನು ಉರಿತುಂಬಿದ ಮಾತಾಡುವುದನ್ನು ಬಿಡುವುದೇ ಇಲ್ಲವಲ್ಲ. ಸುಮ್ಮನೆ ಪಾಳೆಯಕ್ಕೆ ಹೋಗು, ಎನ್ನಲು ಭೀಮನು ಸಿಟ್ಟಿನಿಂದ ಅಣ್ಣನನ್ನು ನೋಡುತ್ತಾ ಅಲ್ಲಿಂದ ಹೊರಟು ಹೋದನು.

ಅರ್ಥ:
ನುಡಿ: ಮಾತು; ನಿಲು: ನಿಲ್ಲು, ತಾಳು; ಪಿತಾಮಹ: ತಾತ; ಬೆಸಸು: ಆಜ್ಞಾಪಿಸು, ಹೇಳು; ಹಸಾದ: ಪ್ರಸಾದ; ನಡೆ: ಹೋಗು; ಪಾಳಯ: ಸೀಮೆ; ಬಿಡು: ತೊರೆ, ಹೋಗು; ಉರಿ: ಬೆಂಕಿ; ಮಾಣು: ನಿಲ್ಲು, ಸ್ಥಗಿತಗೊಳ್ಳು; ಮೌನ: ಸುಮ್ಮನಿರುವಿಕೆ; ಮುದ್ರೆ: ಚಿಹ್ನೆ; ಹಿಡಿ: ಗ್ರಹಿಸು; ಪವಮಾನ: ವಾಯು; ನಂದನ: ಮಗ; ಖಾತಿ: ಕೋಪ; ಸೂನು: ಮಗ; ಬಿಡು: ತೊರೆ, ತ್ಯಜಿಸು; ನೋಡು: ತೋರು, ಗೋಚರಿಸು; ಮೆಲ್ಲನೆ: ನಿಧಾನವಾಗಿ; ಸರಿ: ಚಲಿಸು, ಗಮಿಸು;

ಪದವಿಂಗಡಣೆ:
ಹಾ +ನುಡಿಯದಿರು +ನಿಲು +ಪಿತಾಮಹನ್
ಏನ+ ಬೆಸಸಿದುದಕೆ+ ಹಸಾದವು
ನೀನು +ನಡೆ +ಪಾಳಯಕೆ +ಬಿಡುಗ್+ಉರಿತನವ +ಮಾಣೆಯಲ
ಮೌನಮುದ್ರೆಯ +ಹಿಡಿಯೆನಲು+ ಪವ
ಮಾನನಂದನ+ ಖಾತಿಯಲಿ +ಯಮ
ಸೂನುವನು+ ಬಿಡೆ +ನೋಡಿ +ಮೆಲ್ಲನೆ +ಸರಿದನಲ್ಲಿಂದ

ಅಚ್ಚರಿ:
(೧) ಸುಮ್ಮನಿರು ಎಂದು ಹೇಳುವ ಪರಿ – ಮೌನಮುದ್ರೆಯ ಹಿಡಿಯೆನಲು ಪವಮಾನನಂದನ ಖಾತಿಯಲಿ ಯಮ
ಸೂನುವನು ಬಿಡೆ