ಅರಸ ತಲೆಗುತ್ತಿದನು ದೃಗು ಜಲ
ವುರವಣಿಸಿ ಮೌನದಲಿ ಫಲುಗುಣ
ನಿರೆ ಮುರಾರಿ ಸುಯೋಧನನ ಸರ್ವಾವಗುಣ ಗಣವ
ಪರಿಪರಿಯಲೆಚ್ಚರಿಸಿ ದುಗುಡವ
ಪರಿಹರಿಸಿ ಸಂತೈಸಿದಡೆ ಮುರ
ಹರನ ಬೈದನು ನಿನ್ನ ಮಗ ನಾನಾ ವಿಡಂಬದಲಿ (ಗದಾ ಪರ್ವ, ೮ ಸಂಧಿ, ೩೭ ಪದ್ಯ)
ತಾತ್ಪರ್ಯ:
ಧರ್ಮಜನು ತಲೆ ತಗ್ಗಿಸಿ ಕಣ್ಣೀರಿಟ್ಟನು. ಅರ್ಜುನನು ಮೌನದಿಂದಿದ್ದನು. ಶ್ರೀಕೃಷ್ಣನು ದುರ್ಯೋಧನನ ಸಮಸ್ತ ದುರ್ಗುಣಗಳನ್ನು ನೆನಪಿಸಿ ಅವರ ದುಃಖವನ್ನು ಕಡಿಮೆ ಮಾಡುತ್ತಿರಲು, ನಿನ್ನ ಮಗನು ಕೃಷ್ಣನನ್ನು ಹಲವು ತೆರದಿಂದ ಬೈದನು.
ಅರ್ಥ:
ಅರಸ: ರಾಜ; ತಲೆ: ಶಿರ; ಕುತ್ತು: ಬಾಗು, ಕುಸಿ; ದೃಗುಜಲ: ಕಣ್ಣೀರು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಮೌನ: ಮಾತಿಲ್ಲದ ಸ್ಥಿತಿ; ಮುರಾರಿ: ಕೃಷ್ಣ; ಅವಗುಣ: ದುರ್ಗುಣ, ದೋಷ; ಗಣ: ಸಮೂಹ, ಗುಂಪು; ಪರಿಪರಿ: ಹಲವಾರು; ಎಚ್ಚರ: ಹುಷಾರಾಗಿರುವಿಕೆ; ದುಗುಡ: ದುಃಖ; ಪರಿಹರಿಸು: ನಿವಾರಿಸು; ಸಂತೈಸು: ಸಮಾಧಾನ ಪಡಿಸು; ಮುರಹರ: ಕೃಷ್ಣ; ಬೈದನು: ಜರೆದನು; ಮಗ: ಸುತ; ವಿಡಂಬ: ಅನುಸರಣೆ, ಅಣಕ, ಪರಿಹಾಸ್;
ಪದವಿಂಗಡಣೆ:
ಅರಸ +ತಲೆಗುತ್ತಿದನು +ದೃಗು +ಜಲವ್
ಉರವಣಿಸಿ +ಮೌನದಲಿ +ಫಲುಗುಣನ್
ಇರೆ+ ಮುರಾರಿ +ಸುಯೋಧನನ +ಸರ್ವಾವಗುಣ+ ಗಣವ
ಪರಿಪರಿಯಲ್+ಎಚ್ಚರಿಸಿ +ದುಗುಡವ
ಪರಿಹರಿಸಿ+ ಸಂತೈಸಿದಡೆ +ಮುರ
ಹರನ +ಬೈದನು +ನಿನ್ನ+ ಮಗ+ ನಾನಾ +ವಿಡಂಬದಲಿ
ಅಚ್ಚರಿ:
(೧) ಕಣ್ಣೀರು ಎಂದು ಹೇಳಲು ದೃಗುಜಲ ಪದದ ಬಳಕೆ
(೨) ದುಃಖವನ್ನು ಹೋಗಲಾಡಿಸುವ ಪರಿ – ಸುಯೋಧನನ ಸರ್ವಾವಗುಣ ಗಣವಪರಿಪರಿಯಲೆಚ್ಚರಿಸಿ ದುಗುಡವ ಪರಿಹರಿಸಿ ಸಂತೈಸಿ