ಎನೆ ಹಸಾದವೆನುತ್ತ ಯಮನಂ
ದನನು ಕಳುಹಿಸಿಕೊಂಡು ಗಂಗಾ
ತನುಜನುಚಿತೋಕ್ತಿಗಳ ನೆನೆದಡಿಗಡಿಗೆ ಪುಳಕಿಸುತ
ವಿನುತಮತಿ ನಡೆತರಲು ಸುಭಟರು
ತನತನಗೆ ತೊಲಗಿದರು ಪಾಂಡವ
ಜನಪ ಮೈಯಿಕ್ಕಿದನು ದ್ರೋಣನ ಚರಣಕಮಲದಲಿ (ಭೀಷ್ಮ ಪರ್ವ, ೨ ಸಂಧಿ, ೩೦ ಪದ್ಯ)
ತಾತ್ಪರ್ಯ:
ಧರ್ಮಜನು ಭೀಷ್ಮನ ಮಾತುಗಳನ್ನು ಆಲಿಸಿ, ಮಹಾಪ್ರಸಾದ ವೆಂದು ತಿಳಿದು ಭೀಷ್ಮರಿಂದ ಬೀಳುಕೊಂಡು, ಆತನ ಮಾತನ್ನು ನೆನೆನೆನೆದು ರೋಮಾಂಚನಗೊಂಡನು. ಕೌರವ ಸೈನ್ಯದ ನಡುವೆ ಬರುತ್ತಿರಲು ಕೌರವ ವೀರರು ಅವನನ್ನು ತಡೆಯಲಿಲ್ಲ, ಅವನು ದ್ರೋಣರ ಬಳಿ ಬಂದು ಅವರಿಗೆ ವಂದಿಸಿದನು.
ಅರ್ಥ:
ಹಸಾದ: ಅನುಗ್ರಹ; ನಂದನ: ಮಗ; ಕಳುಹಿಸು: ತೆರಳು; ತನುಜ: ಮಗ; ಉಚಿತ: ಸರಿಯಾದ; ಉಕ್ತಿ: ಮಾತು; ನೆನೆದು: ಜ್ಞಾಪಿಸು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಪುಳಕ: ರೋಮಾಂಚನ; ವಿನುತ: ಸ್ತುತಿಗೊಂಡ; ಮತಿ: ಬುದ್ಧಿ; ನಡೆ: ಚಲಿಸು; ಸುಭಟ: ಪರಾಕ್ರಮಿ; ತೊಲಗು: ದೂರ ಸರಿ; ಜನಪ: ರಾಜ; ಮೈಯಿಕ್ಕು: ನಮಸ್ಕರಿಸು; ಚರಣ: ಪಾದ; ಕಮಲ: ಪದ್ಮ;
ಪದವಿಂಗಡಣೆ:
ಎನೆ+ ಹಸಾದವೆನುತ್ತ+ ಯಮ+ನಂ
ದನನು +ಕಳುಹಿಸಿಕೊಂಡು +ಗಂಗಾ
ತನುಜನ್ + ಉಚಿತ+ಉಕ್ತಿಗಳ +ನೆನೆದ್+ಅಡಿಗಡಿಗೆ+ ಪುಳಕಿಸುತ
ವಿನುತ+ಮತಿ +ನಡೆತರಲು+ ಸುಭಟರು
ತನತನಗೆ +ತೊಲಗಿದರು+ ಪಾಂಡವ
ಜನಪ +ಮೈಯಿಕ್ಕಿದನು +ದ್ರೋಣನ +ಚರಣ+ಕಮಲದಲಿ
ಅಚ್ಚರಿ:
(೧) ತನತನಗೆ, ಅಡಿಗದಿ – ಪದಗಳ ಬಳಕೆ
(೨) ನಂದನ, ತನುಜ – ಸಮನಾರ್ಥಕ ಪದ