ತಲೆಯ ಕೊಂಬವಗಡದ ಭಾಷೆಯ
ಸಲಿಸಲೆಂದಾ ದ್ರೋಣತನುಜನ
ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ
ಗೆಲಿದು ತಿರುಗಿದರಿದರು ಸಾಹಸ
ವಳುಕಿಸದೆ ಮೂಜಗದ ಯದುಕುಲ
ತಿಲಕ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೧೦ ಸಂಧಿ, ೨೭ ಪದ್ಯ)
ತಾತ್ಪರ್ಯ:
ಅಶ್ವತ್ಥಾಮನ ತಲೆಯನ್ನುರುಳಿಸುವೆವೆಂದು ಮಾಡಿದ ಭಾಷೆಯನ್ನುಳಿಸಿಕೊಳ್ಳಲು ಭೀಮಾರ್ಜುನರು ಅಶ್ವತ್ಥಾಮನ ಕಿರೀಟದ ಮಾಣಿಕ್ಯವನ್ನು ತೆಗೆದುಕೊಂಡು ಹೋದರು. ಪಾಂಡವರು ವಿಜಯಶಾಲಿಗಳಾದರು. ಯದುಕುಲ ತಿಲಕನಾದ ವೀರನಾರಾಯಣನ ಕರುಣೆಯಿರಲು ಅವರ ಪರಾಕ್ರಮಕ್ಕೆ ಮೂರು ಲೋಕಗಳೂ ಅಳುಕದಿರುವುದೇ?
ಅರ್ಥ:
ತಲೆ: ಶಿರ; ಕೊಂಬು: ತೆಗೆದುಕೋ; ಅವಗಡ: ಅಸಡ್ಡೆ; ಭಾಷೆ: ನುಡಿ; ಸಲಿಸು: ದೊರಕಿಸಿ ಕೊಡು, ಪೂರೈಸು; ತನುಜ: ಮಗ; ಹೊಳೆ: ಪ್ರಕಾಶಿಸು; ಮಕುಟ: ಕಿರೀಟ; ಮಾಣಿಕ: ಮಾಣಿಕ್ಯ; ಕೊಂಡು: ಪಡೆದು; ಗೆಲಿದು: ಜಯಶಾಲಿ; ತಿರುಗು: ಸುತ್ತು, ಸಂಚರಿಸು; ಸಾಹಸ: ಪರಾಕ್ರಮ, ಶೌರ್ಯ; ಅಳುಕು: ಹೆದರು; ಮೂಜಗ: ತ್ರಿಜಗತ್ತು; ತಿಲಕ: ಶ್ರೇಷ್ಥ; ಕರುಣ: ದಯೆ; ಉತ್ತರಾಯ: ಜವಾಬುದಾರಿ;
ಪದವಿಂಗಡಣೆ:
ತಲೆಯ +ಕೊಂಬ್+ಅವಗಡದ +ಭಾಷೆಯ
ಸಲಿಸಲೆಂದ್+ಆ+ ದ್ರೋಣ+ತನುಜನ
ಹೊಳೆವ +ಮಕುಟದ +ಮಾಣಿಕವ +ಕೊಂಡ್+ಉತ್ತರಾಯದಲಿ
ಗೆಲಿದು +ತಿರುಗಿದ್+ಅರಿದರು+ ಸಾಹಸವ್
ಅಳುಕಿಸದೆ +ಮೂಜಗದ +ಯದುಕುಲ
ತಿಲಕ +ಗದುಗಿನ +ವೀರನಾರಾಯಣನ +ಕರುಣದಲಿ
ಅಚ್ಚರಿ:
(೧) ಭಾಷೆಯನ್ನು ತೀರಿಸಿದ ಪರಿ – ದ್ರೋಣತನುಜನ ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ