ಜಾಳಿಸಿದ ವೇದನೆಯ ಝೊಮ್ಮಿನ
ಜಾಳಿಗೆಯ ಜವ ಹರಿದುದೆಚ್ಚರ
ಮೇಲುಮರವೆಯ ಮುಸುಕು ಜಾರಿತು ಹಾರಿತತಿಭೀತಿ
ಬೇಳುವೆಯ ಕರಣೇಂದ್ರಿಯದ ವೈ
ಹಾಳಿ ನಿಂದುದು ಬಿಗಿದ ಬಳಲಿಕೆ
ಯೂಳಿಗದ ಮೊನೆ ಮುರಿಯೆ ಸಂತೈಸಿದನು ಕುರುರಾಯ (ಗದಾ ಪರ್ವ, ೭ ಸಂಧಿ, ೩೦ ಪದ್ಯ)
ತಾತ್ಪರ್ಯ:
ಕೌರವನಿಗೆ ಮೈತುಂಬ ಹರಡಿದ ನೋವಿನ ಜಾಲವು ಸ್ವಲ್ಪ ಹೊತ್ತಿನಲ್ಲೇ ಕಡಿಮೆಯಾಯಿತು. ಮೂರ್ಛೆ ತೊಲಗಿ ಎಚ್ಚರವಾಯಿತು. ಭೀತಿ ಬಿಟ್ಟು ಹೋಯಿತು, ಇಂದ್ರಿಯಗಳ ತೊಳಲಾಟ ನಿಂತು ಸ್ಥಿಮಿತಕ್ಕೆ ಬಂತು. ಬಳಲಿಕೆಯ ಕಾಟ ನಿಲ್ಲಲು ಕೌರವನು ಸಂತೈಸಿಕೊಂಡನು.
ಅರ್ಥ:
ಜಾಳಿಸು: ಚಲಿಸು, ನಡೆ; ವೇದನೆ: ನೋವು; ಝೊಮ್ಮು:ಝೊಂಪು, ಮರವೆ; ಜಾಲ: ಬಲೆ; ಜವ: ವೇಗ, ರಭಸ; ಹರಿ: ಚಲಿಸು; ಎಚ್ಚರ: ನಿದ್ರೆಯಿಂದ ಏಳುವುದು; ಮರವೆ: ಜ್ಞಾಪಕವಿಲ್ಲದ ಸ್ಥಿತಿ; ಮುಸುಕು:ಹೊದಿಕೆ; ಜಾರು: ಬೀಳು; ಹಾರು: ದೂರಹೋಗು; ಭೀತಿ: ಭಯ; ಬೇಳುವೆ: ಮೋಸ, ವಂಚನೆ, ಮೈಮರೆವು; ಕರಣೇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ವೈಹಾಳಿ: ಕುದುರೆ ಸವಾರಿ, ಸಂಚಾರ; ನಿಂದು: ನಿಲ್ಲು; ಬಿಗಿ: ಬಂಧಿಸು; ಬಳಲಿಕೆ: ಆಯಾಸ; ಊಳಿಗ: ಕೆಲಸ, ಕಾರ್ಯ; ಮೊನೆ: ತುದಿ, ಕೊನೆ; ಮುರಿ: ಸೀಳು; ಸಂತೈಸು: ಸಮಾಧಾನಪಡಿಸು; ರಾಯ: ರಾಜ;
ಪದವಿಂಗಡಣೆ:
ಜಾಳಿಸಿದ +ವೇದನೆಯ +ಝೊಮ್ಮಿನ
ಜಾಳಿಗೆಯ +ಜವ +ಹರಿದುದ್+ಎಚ್ಚರ
ಮೇಲು+ಮರವೆಯ +ಮುಸುಕು +ಜಾರಿತು +ಹಾರಿತ್+ಅತಿಭೀತಿ
ಬೇಳುವೆಯ +ಕರಣೇಂದ್ರಿಯದ+ ವೈ
ಹಾಳಿ +ನಿಂದುದು +ಬಿಗಿದ +ಬಳಲಿಕೆ
ಯೂಳಿಗದ+ ಮೊನೆ +ಮುರಿಯೆ +ಸಂತೈಸಿದನು +ಕುರುರಾಯ
ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಝೊಮ್ಮಿನ ಜಾಳಿಗೆಯ ಜವ
(೨) ಜ ಕಾರದ ಪದಗಳು – ಜಾಳಿಸಿ, ಜವ, ಝೊಮ್ಮು, ಜಾರು
(೩) ರೂಪಕದ ಪ್ರಯೋಗ – ಬೇಳುವೆಯ ಕರಣೇಂದ್ರಿಯದ ವೈಹಾಳಿ ನಿಂದುದು