ಬೊಪ್ಪನವರೇ ಯೆಮ್ಮ ದೂರದೆ
ಯಿಪ್ಪವರು ತಾವಲ್ಲ ಸಾಕಿ
ನ್ನೊಪ್ಪದಲಿ ಬಾಯೆಂದು ಮುರರಿಪು ಕರೆದನವನಿಪನ
ಚಪ್ಪರಿಸಿ ಕೌರವರು ತುರುಗಳ
ತಪ್ಪಿಸಿದುದೇನಾಯ್ತು ಪಾರ್ಥನ
ದರ್ಪದನುವೆಂತೆಂದು ಬೆಸಗೊಂಡನು ಮುರಧ್ವಂಸಿ (ವಿರಾಟ ಪರ್ವ, ೧೧ ಸಂಧಿ, ೬೫ ಪದ್ಯ)
ತಾತ್ಪರ್ಯ:
ವಸುದೇವನು ಹೀಗೆ ಹೇಳುತ್ತಿರಲು ಶ್ರೀಕೃಷ್ಣನು ನಮ್ಮ ತಂದೆಯವರು ನನ್ನ ಮೇಲೆ ದೂರು ಹೇಳದೆ ಬಿಡುವವರಲ್ಲ. ಯುಧಿಷ್ಠಿರ, ಇಲ್ಲಿ ಬಾ ಅರ್ಜುನನು ಗೋಧನವನ್ನು ಹೇಗೆ ಬಿಡಿಸಿದ, ಏನೇನಾಯಿತು ಹೇಳು ಎಂದು ಕೇಳಿದನು.
ಅರ್ಥ:
ಬೊಪ್ಪ: ತಂದೆ; ದೂರು: ಆರೋಪ ಮಾಡು; ಸಾಕು: ಕೊನೆ; ಮುರರಿಪು: ಕೃಷ್ಣ; ಕರೆ: ಬರೆಮಾಡು; ಅವನಿಪ: ರಾಜ; ಚಪ್ಪರಿಸು: ಸವಿ, ರುಚಿನೋಡು; ತುರು: ಆಕಳು; ದರ್ಪ: ಹೆಮ್ಮೆ, ಗರ್ವ; ಬೆಸ: ಅಪ್ಪಣೆ, ಆದೇಶ; ಮುರಧ್ವಂಸಿ: ಕೃಷ್ಣ;
ಪದವಿಂಗಡಣೆ:
ಬೊಪ್ಪನವರೇ+ ಎಮ್ಮ +ದೂರದೆ
ಯಿಪ್ಪವರು +ತಾವಲ್ಲ+ ಸಾಕಿನ್
ಒಪ್ಪದಲಿ +ಬಾಯೆಂದು +ಮುರರಿಪು+ ಕರೆದನ್+ಅವನಿಪನ
ಚಪ್ಪರಿಸಿ+ ಕೌರವರು+ ತುರುಗಳ
ತಪ್ಪಿಸಿದುದ್+ಏನಾಯ್ತು +ಪಾರ್ಥನ
ದರ್ಪದನುವ್+ಎಂತೆಂದು +ಬೆಸಗೊಂಡನು +ಮುರಧ್ವಂಸಿ
ಅಚ್ಚರಿ:
(೧) ಮುರರಿಪು, ಮುರಧ್ವಂಸಿ – ಕೃಷ್ಣನನ್ನು ಕರೆದ ಪರಿ
(೨) ಕೌರವರನ್ನು ಸೋಲಿಸಿ ಎಂದು ಹೇಳಲು – ಚಪ್ಪರಿಸಿ ಕೌರವರು ತುರುಗಳ ತಪ್ಪಿಸಿದುದೇನಾಯ್ತು