ಕಳವಳಿಸಿತರಿಸೇನೆ ಚೂಣಿಯ
ಕೊಳುಗಿಡಿಯ ಸೆಖೆ ತಾಗಿ ಸುಭಟಾ
ವಳಿಯ ಮೀಸೆಗಳುರಿಯೆ ನೆರೆ ಕಂದಿದವು ಮೋರೆಗಳು
ಬಲದ ಸುತ್ತಲು ಕಟ್ಟಿತುರಿ ಕೆಂ
ಬೆಳಗು ಕುಡಿದವು ಕರ್ಬೊಗೆಗಳ
ಗ್ಗಳದ ಬಾಣದ ಬಂದಿಯಲಿ ಸಿಲುಕಿತ್ತು ರಿಪುಸೇನೆ (ದ್ರೋಣ ಪರ್ವ, ೧೯ ಸಂಧಿ, ೩೫ ಪದ್ಯ)
ತಾತ್ಪರ್ಯ:
ಶತ್ರು ಸೈನ್ಯವು ಕಳವಳಿಸಿತು. ಕಿಡಿಗಳ ಶಾಖದಿಂದ ಯೋಧರ ಮೀಸೆಗಳು ಉರಿದುಹೋದವು, ಮೋರೆಗಳು ಬಾಡಿದವು. ಸೈನ್ಯದ ಸುತ್ತಲೂ ಉರಿಹೊಗೆಗಳು ಆವರಿಸಿದವು. ಶ್ರೇಷ್ಠವಾದ ನಾರಾಯಣಾಸ್ತ್ರದ ಕಪ್ಪು ಹೊಗೆಗಳು ವೈರಿಸೈನ್ಯವನ್ನು ಆವರಿಸಿತು.
ಅರ್ಥ:
ಕಳವಳ: ಗೊಂದಲ; ಅರಿ: ವೈರಿ; ಸೇನೆ: ಸೈನ್ಯ; ಚೂಣಿ: ಮುಂದೆ; ಕಿಡಿ: ಬೆಂಕಿ; ಸೆಖೆ: ಧಗೆ; ತಾಗು: ಮುಟ್ತು; ಭಟಾವಳಿ: ಸೈನಿಕರ ಗುಂಪು; ಉರಿ: ದಹಿಸು; ನೆರೆ: ಗುಂಪು; ಕಂದು: ಕಳಂಕ; ಮೊರೆ: ಮುಖ; ಬಲ: ಸೈನ್ಯ; ಸುತ್ತ: ಬಳಸಿಕೊಂಡು; ಉರಿ: ಬೆಂಕಿ; ಕೆಂಬೆಳಗು: ಕೆಂಪಾದ ಪ್ರಕಾಶ; ಕುಡಿ: ತುದಿ, ಕೊನೆ; ಕರ್ಬೊಗೆ: ಕಪ್ಪಾದ ಹೊಗೆ; ಅಗ್ಗ: ಶ್ರೆಷ್ಠ; ಬಾಣ: ಸರಳು; ಬಂದಿ: ಸೆರೆ, ಬಂಧನ; ಸಿಲುಕು: ಬಂಧನಕ್ಕೊಳಗಾಗು; ರಿಪು: ವೈರಿ; ಸೇನೆ: ಸೈನ್ಯ;
ಪದವಿಂಗಡಣೆ:
ಕಳವಳಿಸಿತ್+ಅರಿಸೇನೆ +ಚೂಣಿಯ
ಕೊಳುಕಿಡಿಯ +ಸೆಖೆ +ತಾಗಿ +ಸುಭಟ
ಆವಳಿಯ +ಮೀಸೆಗಳ್+ಉರಿಯೆ +ನೆರೆ +ಕಂದಿದವು +ಮೋರೆಗಳು
ಬಲದ +ಸುತ್ತಲು +ಕಟ್ಟಿತ್+ಉರಿ +ಕೆಂ
ಬೆಳಗು +ಕುಡಿದವು +ಕರ್ಬೊಗೆಗಳ್
ಅಗ್ಗಳದ +ಬಾಣದ +ಬಂದಿಯಲಿ +ಸಿಲುಕಿತ್ತು +ರಿಪುಸೇನೆ
ಅಚ್ಚರಿ:
(೧) ಪರಾಕ್ರಮ ಕಡಿಮೆಯಾಯಿತು ಎಂದು ಹೇಳಲು – ಸುಭಟಾವಳಿಯ ಮೀಸೆಗಳುರಿಯೆ ನೆರೆ ಕಂದಿದವು ಮೋರೆಗಳು