ಬಲಿದ ಮರವೆಯ ಕರಣವೃತ್ತಿಯ
ಕಳವಳದ ಪಂಚೇಂದ್ರಿಯದ ಪರಿ
ಚಲನಸಂಚದ ಶಿಥಿಲಮೂಲಾಧಾರಮಾರುತನ
ಅಲಘುತರಪರಿವೇದನಾವಿ
ಹ್ವಳಿತಕಂಠಗತಾತ್ಮನೂರ್ಧ್ವ
ಸ್ಖಲಿತದೀರ್ಘಶ್ವಾಸನಿದ್ದನು ಕೌರವರ ರಾಯ (ಗದಾ ಪರ್ವ, ೧೦ ಸಂಧಿ, ೨ ಪದ್ಯ)
ತಾತ್ಪರ್ಯ:
ಕೌರವನಿಗೆ ಮೂರ್ಛೆ ಬಲಿದಿತ್ತು. ಪಂಚೇಂದ್ರಿಯಗಳು ಕಳವಳಿಸುತ್ತಿದ್ದವು. ಮೂಲಾಧಾರ ಮಾರುತವು ಶಿಥಿಲವಾಗಿ ಚಲಿಸುತ್ತಿತ್ತು. ಅತಿಶಯವಾದ ನೋವಿನಿಮ್ದ ವಿಹ್ವಲನಾಗಿದ್ದ ಅವನ ಪ್ರಾಣವು ಮೇಲಕ್ಕೆ ಚಲಿಸುತ್ತಿತ್ತು. ಅವನ ಉಸಿರಾಟವು ಸಮವಾಗಿರಲಿಲ್ಲ.
ಅರ್ಥ:
ಬಲಿ: ಗಟ್ಟಿಯಾದ; ಮರವೆ: ಮೂರ್ಛೆ; ಕರಣ: ಜ್ಞಾನೇಂದ್ರಿಯ; ವೃತ್ತಿ: ಸ್ಥಿತಿ; ಕಳವಳ: ಗೊಂದಲ; ಪಂಚೇಂದ್ರಿಯ: ಕಣ್ಣು, ಕಿವಿ, ಮೂಗು, ನಾಲಗೆ, ಬಾಯಿ ಎಂಬ ಐದು ಇಂದ್ರಿಯಗಳು; ಚಲನ: ಅಲುಗಾಟ; ಸಂಚ: ಮೊತ್ತ, ರಾಶಿ; ಶಿಥಿಲ: ನಿಶ್ಶಕ್ತವಾದುದು, ಬಲಹೀನವಾದುದು; ಮೂಲಾಧಾರ: ಕುಂಡಲಿನಿಯ ಮೂಲ ಸ್ಥಾನ; ಮಾರುತ: ವಾಯು; ಅಲಗು: ಆಯುಧಗಳ ಹರಿತವಾದ ಅಂಚು; ವೇದನೆ: ನೋವು; ವಿಹ್ವಲ: ಹತಾಶ; ಕಂಠ: ಗಂಟಲು; ಆತ್ಮ: ಜೀವ; ಊರ್ಧ್ವ: ಮೇಲೆ; ಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ದೀರ್ಘ: ಉದ್ದ; ಶ್ವಾಸ: ಉಸಿರು; ರಾಯ: ರಾಜ;
ಪದವಿಂಗಡಣೆ:
ಬಲಿದ +ಮರವೆಯ +ಕರಣ+ವೃತ್ತಿಯ
ಕಳವಳದ +ಪಂಚೇಂದ್ರಿಯದ +ಪರಿ
ಚಲನ+ಸಂಚದ +ಶಿಥಿಲ+ಮೂಲಾಧಾರ+ಮಾರುತನ
ಅಲಘುತರ+ಪರಿ+ವೇದನಾ+ವಿ
ಹ್ವಳಿತ+ಕಂಠ+ ಗತ+ಆತ್ಮನ್+ಊರ್ಧ್ವ
ಸ್ಖಲಿತ+ದೀರ್ಘ+ಶ್ವಾಸನಿದ್ದನು+ ಕೌರವರ +ರಾಯ
ಅಚ್ಚರಿ:
(೧) ಒಂದೇ ಪದವಾಗಿ ರಚನೆ – ಅಲಘುತರಪರಿವೇದನಾವಿಹ್ವಳಿತಕಂಠಗತಾತ್ಮನೂರ್ಧ್ವ
ಸ್ಖಲಿತದೀರ್ಘಶ್ವಾಸನಿದ್ದನು