ಅದೆ ಸುಯೋಧನನೊಡ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ (ಗದಾ ಪರ್ವ, ೨ ಸಂಧಿ, ೧೨ ಪದ್ಯ)
ತಾತ್ಪರ್ಯ:
ಸ್ವಲ್ಪ ದೂರದಲ್ಲೇ ಅದೋ, ಸುಯೋಧನನ ಸೈನ್ಯ ಕಾಣುತ್ತಿದೆ. ಮುತ್ತಿರಿ ಎಂದು ಕೂಗುತ್ತಾ ಭೀಮಾರ್ಜುನಾರ ಚತುರಂಗ ಸೈನ್ಯವು ದಾಳಿಯಿಟ್ಟಿರು. ಶಕುನಿಯ ಸೈನ್ಯವು ಭುಜಬಲ ಪರಾಕ್ರಮದಿಂದ ಕಾದಿತು. ಆದರೆ ಅದರ ಮಾನ ಮೌನತಾಳಿತು (ಸೋತರು).
ಅರ್ಥ:
ಒಡ್ಡು: ರಾಶಿ, ಸಮೂಹ; ನಸು: ಸ್ವಲ್ಪ; ದೂರ: ಅಂತರ; ಕವಿ: ಆವರಿಸು; ಧಾಳಿ: ಲಗ್ಗೆ, ಮುತ್ತಿಗೆ; ರಥ: ಬಂಡಿ; ಚೂಣಿ: ಮೊದಲು; ಹೊದರು: ಗುಂಪು, ಸಮೂಹ; ಹಳಚು: ತಾಗು, ಬಡಿ; ಭಟ: ಸೈನಿಕ; ಭುಜ: ಬಾಹು; ಗರ್ವ: ಅಹಂಕಾರ; ಗರುವ: ಹಿರಿಯ, ಶ್ರೇಷ್ಠ; ಗಾಢ: ಹೆಚ್ಚಳ; ಶೌರ್ಯ: ಸಾಹಸ, ಪರಾಕ್ರಮ; ಮದ: ಅಹಂಕಾರ; ಮಡ: ಹಿಮ್ಮಡಿ, ಹರಡು; ಮುರಿ: ಸೀಳು; ಸಿಲುಕು: ಹಿಡಿ; ಮಾನ: ಮರ್ಯಾದೆ; ಮೋನ: ಮೌನ;
ಪದವಿಂಗಡಣೆ:
ಅದೆ+ ಸುಯೋಧನನ್+ಒಡ್ಡು +ನಸುದೂ
ರದಲಿ +ಕವಿಕವಿ+ಎನುತ +ಧಾಳಿ
ಟ್ಟುದು +ಚತುರ್ಬಲ +ಭೀಮಪಾರ್ಥರ +ರಥದ +ಚೂಣಿಯಲಿ
ಹೊದರು +ಹಳಚಿತು +ಭಟರು +ಭುಜ+ಗ
ರ್ವದಲಿ +ಗರುವರ +ಗಾಢ +ಶೌರ್ಯದ
ಮದಕೆ +ಮಡ+ಮುರಿಯಾಯ್ತು +ಸಿಲುಕಿತು+ ಮಾನ +ಮೋನದಲಿ
ಅಚ್ಚರಿ:
(೧) ಸೋತರು ಎಂದು ಹೇಳುವ ಪರಿ – ಗಾಢ ಶೌರ್ಯದ ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ