ಬಲ್ಲೆನುಂಟುಂಟಖಿಳ ವೀರರೊ
ಳಿಲ್ಲ ಸರಿದೊರೆ ನಿನಗೆ ಬಾಯಲಿ
ಬಲ್ಲಿದನು ನೀನಹೆ ಭಟಾಂಗದ ಮಾತದಂತಿರಲಿ
ಒಳ್ಳೆ ಗಡ ಪಾವುಡವ ವಾಸುಗಿ
ಯಲ್ಲಿಗಟ್ಟಿತು ಗಡ ಮಹಾಹವ
ಮಲ್ಲ ಮಡಮುರಿಯದಿರೆನುತ ಹೊಕ್ಕೆಚ್ಚನಭಿಮನ್ಯು (ದ್ರೋಣ ಪರ್ವ, ೫ ಸಂಧಿ, ೫೩ ಪದ್ಯ)
ತಾತ್ಪರ್ಯ:
ಅಭಿಮನ್ಯುವು ಉತ್ತರಿಸುತ್ತಾ, ನನಗೆ ಗೊತ್ತು, ನಿನಗೆ ಸರಿಸಮಾನರಾದ ವೀರರು ಯಾರೂ ಇಲ್ಲ. ಮಾತಿನಲ್ಲಿ ನಿನಗೆ ಸರಿಸಮರೇ ಇಲ್ಲ, ಇನ್ನು ಪರಾಕ್ರಮ ಶಸ್ತ್ರಾಸ್ತ್ರ ಚಾತುರ್ಯಗಳ ಮಾತು ಹಾಗಿರಲಿ, ನೀರು ಹಾವು ವಾಸುಕಿಗೆ ಉಡುಗೊರೆ ಕೊಟ್ಟಹಾಗಾಯಿತು, ಎಳೊ ಸಾಹಸಮಲ್ಲ ಕೈಗುಂದಬೇಡ, ಎಂದು ಕರ್ಣನ ಮೇಲೆ ಅಭಿಮನ್ಯುವು ಬಾಣ ಪ್ರಯೋಗ ಮಾಡಿದನು.
ಅರ್ಥ:
ಬಲ್ಲೆ: ತಿಳಿದಿರುವೆ; ಅಖಿಳ: ಎಲ್ಲಾ; ವೀರ: ಶೂರ, ಪರಾಕ್ರಮಿ; ಸರಿ: ಸಮಾನ; ಬಲ್ಲಿದ: ಬಲಿಷ್ಠನಾದವನು; ಭಟ: ವೀರ, ಸೈನಿಕ; ಮಾತು: ವಾಣಿ; ಒಳ್ಳೆ: ನೀರು ಹಾವು; ಗಡ: ಅಲ್ಲವೆ; ಪಾವು: ಹಾವು; ವಾಸುಕಿ: ಅನಂತ, ವಾಸುಕಿ, ತಕ್ಷಕ, ಕರ್ಕೋಟಕ, ಪದ್ಮ, ಮಹಾಪದ್ಮ, ಶಂಖ ಹಾಗೂ ಕುಲಿಕ ಎಂಬ ಅಷ್ಟಕುಲ ನಾಗಗಳಲ್ಲಿ ಎರಡನೆಯವ; ಆಹವ: ಯುದ್ಧ; ಮಲ್ಲ: ವೀರ; ಮಡ: ಪಾದದ ಹಿಂಭಾಗ, ಹರಡು, ಹಿಮ್ಮಡಿ; ಮುರಿ: ಸೀಳು; ಹೊಕ್ಕು: ಸೇರು; ಎಚ್ಚು: ಬಾಣ ಪ್ರಯೋಗ ಮಾಡು;
ಪದವಿಂಗಡಣೆ:
ಬಲ್ಲೆನುಂಟುಂಟ್ +ಅಖಿಳ +ವೀರರೊಳ್
ಇಲ್ಲ +ಸರಿದೊರೆ+ ನಿನಗೆ +ಬಾಯಲಿ
ಬಲ್ಲಿದನು +ನೀನಹೆ +ಭಟಾಂಗದ +ಮಾತದಂತಿರಲಿ
ಒಳ್ಳೆ +ಗಡ +ಪಾವುಡವ+ ವಾಸುಗಿ
ಯಲ್ಲಿಗಟ್ಟಿತು +ಗಡ+ ಮಹಾಹವ
ಮಲ್ಲ +ಮಡಮುರಿಯದಿರ್+ಎನುತ +ಹೊಕ್ಕ್+ಎಚ್ಚನ್+ಅಭಿಮನ್ಯು
ಅಚ್ಚರಿ:
(೧) ಉಪಮಾನದ ಪ್ರಯೋಗ – ಒಳ್ಳೆ ಗಡ ಪಾವುಡವ ವಾಸುಗಿಯಲ್ಲಿಗಟ್ಟಿತು
(೨) ಕರ್ಣನನ್ನು ಮಹಾಹವಮಲ್ಲ ಎಂದು ಕರೆದಿರುವುದು