ಐದುವಡೆ ಮೆಣ್ಮಂತ್ರಸಿದ್ಧಿಯ
ಕೈದು ಮನೆಯಲಿ ಬೇಂಟೆಕಾರರ
ಕೈದು ಕೈಯಲಿ ಸಮಯವಲ್ಲ ಮಹಾಸ್ತ್ರಕರ್ಷಣಕೆ
ಮೈದುನನ ಮೈಸರಸಕೀ ಹುಲು
ಗೈದು ಸಾಲದೆ ತಂಗಿ ದುಶ್ಶಳೆ
ಯೈದೆತನ ಬಯಲಾಯ್ತೆನುತ ಬೆಂಬತ್ತಿದರು ಖಳನ (ಅರಣ್ಯ ಪರ್ವ, ೨೪ ಸಂಧಿ, ೨೫ ಪದ್ಯ)
ತಾತ್ಪರ್ಯ:
ಯುದ್ಧ ಮಾಡಲು ಹೊರಟಿದ್ದೇವೆ, ಮಂತ್ರಾಸ್ತ್ರಗಳು ಮನೆಯಲ್ಲಿವೆ, ಬೇಟೆಯಾಡುವ ಬಾಣಗಳು ಕೈಯಲ್ಲಿವೆ, ಮಹಾಸ್ತ್ರ ಪ್ರಯೋಗಕ್ಕೆ ಇದು ಸಮಯವಲ್ಲ, ಮೈದುನನ ಮೈ ಮೇಲೆ ಸರಸದಿಂದ ಪ್ರಯೊಗ ಮಾಡಲು ಈ ಬೇಟೆಯಾಡುವ ಬಾಣಗಳು ಸಾಕಲ್ಲವೇ? ತಂಗಿ ದುಶ್ಶಳೆಯ ಮುತ್ತೈದೆತನವಿಲ್ಲದಂತಾಗುತ್ತದೆ ಎಂದುಕೊಂಡು ಭೀಮಾರ್ಜುನರು ಸೈಂಧವನನ್ನು ಬೆನ್ನುಹತ್ತಿದರು.
ಅರ್ಥ:
ಐದು: ಬಂದು ಸೇರು; ಮೇಣ್: ಮತ್ತು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಕೈದು: ಆಯುಧ, ಶಸ್ತ್ರ; ಮನೆ: ಆಲಯ; ಬೇಂಟೆ: ಬೇಟೆ; ಕೈ: ಹಸ್ತ; ಸಮಯ: ಕಾಲ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಮೈದುನ: ತಂಗಿಯ ಗಂಡ; ಮೈ: ತನು; ಸರಸ: ಚೆಲ್ಲಾಟ; ಹುಲು: ಕ್ಷುಲ್ಲ; ಸಾಲದೆ: ಸಾಕಲ್ಲವೇ; ತಂಗಿ: ಸಹೋದರಿ; ಐದೆ: ಮುತ್ತೈದೆ; ಬಯಲು: ಬರಿದಾದ ಜಾಗ, ಶೂನ್ಯ; ಬೆಂಬತ್ತು: ಹಿಂಬಾಲಿಸು; ಖಳ: ದುಷ್ಟ;
ಪದವಿಂಗಡಣೆ:
ಐದುವಡೆ +ಮೆಣ್+ಮಂತ್ರ+ಸಿದ್ಧಿಯ
ಕೈದು+ ಮನೆಯಲಿ+ ಬೇಂಟೆಕಾರರ
ಕೈದು+ ಕೈಯಲಿ +ಸಮಯವಲ್ಲ+ ಮಹಾಸ್ತ್ರಕರ್ಷಣಕೆ
ಮೈದುನನ +ಮೈಸರಸಕ್+ಈ +ಹುಲು
ಕೈದು+ ಸಾಲದೆ+ ತಂಗಿ+ ದುಶ್ಶಳೆ
ಐದೆತನ+ ಬಯಲಾಯ್ತೆನುತ+ ಬೆಂಬತ್ತಿದರು +ಖಳನ
ಅಚ್ಚರಿ:
(೧) ಐದು, ಕೈದು, ಮೈದುನ, ಐದೆತನ – ಐ ಪದದ ಪ್ರಯೋಗ
(೨) ಬೇಟೆಯ ಬಾಣಗಳೇ ಸಾಕು ಎಂದು ಹೇಳುವ ಪರಿ – ಮೈದುನನ ಮೈಸರಸಕೀ ಹುಲು
ಗೈದು ಸಾಲದೆ