ನರನ ರಥವದೆ ಮರೆಯಹೊಗು ಮುರ
ಹರನ ಮರೆವೊಗು ಭೀಮಸೇನನ
ಕರಸಿ ನೂಕು ಶಿಖಂಡಿ ಸಾತ್ಯಕಿ ಸೃಂಜಯಾದಿಗಳ
ಅರಸುಗುರಿಗಳ ಹೊಯ್ಸು ಗೆಲುವಿನ
ಗರುವನಾದಡೆ ನಿಲ್ಲೆನುತಲು
ಬ್ಬರಿಸಿ ಮಾದ್ರಾಧೀಶನೆಚ್ಚನು ಧರ್ಮನಂದನನ (ಶಲ್ಯ ಪರ್ವ, ೩ ಸಂಧಿ, ೪೨ ಪದ್ಯ)
ತಾತ್ಪರ್ಯ:
ಅಲ್ಲಿಯೇ ಅರ್ಜುನನ ರಥವಿದೆ, ಅದರ ಹಿಂದೆ ಹೋಗಿ ನಿಲ್ಲು, ಕೃಷ್ಣನ ಹಿಂದೆ ಅಡಗಿಕೋ, ನಿನ್ನ ಕೈಲಿ ಸಾಗುವುದಿಲ್ಲ, ಭೀಮನನ್ನು ಕರೆಸಿ ಯುದ್ಧಕ್ಕೆ ಬಿಡು. ಇಲ್ಲದಿದ್ದರೆ ಶಿಖಂಡಿ, ಸಾತ್ಯಕಿ, ಸೃಂಜಯನೇ ಮೊದಲಾದವರನ್ನು ಕಳಿಸಿ, ಕುರಿಯಂತಿರುವ ಅರಸರನ್ನು ನನ್ನ ಕೈಯಲ್ಲಿ ಕಡಿಸಿ ಹಾಕು, ಅಥವಾ ಗೆಲ್ಲುವೆನೆಂಬ ಸ್ವಾಭಿಮಾನವಿದ್ದರೆ ನನ್ನೆದುರಿನಲ್ಲಿ ನಿಲ್ಲು ಎಂದು ಶಲ್ಯನು ಧರ್ಮಜನನ್ನು ಬಾಣಗಳಿಂದ ಹೊಡೆದನು.
ಅರ್ಥ:
ನರ: ಅರ್ಜುನ; ರಥ: ಬಂಡಿ; ಮರೆ: ಕಾಣದಿರುವುದು; ಮುರಹರ: ಕೃಷ್ಣ; ಕರಸು: ಬರೆಮಾಡು; ನೂಕು: ತಳ್ಳು; ಆದಿ: ಮುಂತಾದ; ಅರಸು: ರಾಜ; ಕುರಿ: ಮೇಷ; ಹೊಯ್ಸು: ಹೊಡೆ; ಗೆಲುವು: ಜಯ; ಗರುವ: ಹಿರಿಯ, ಶ್ರೇಷ್ಠ; ನಿಲ್ಲು: ತಡೆ; ಉಬ್ಬರ: ಅತಿಶಯ, ಹೆಚ್ಚಳ; ಎಚ್ಚು: ಬಾಣ ಪ್ರಯೋಗ ಮಾಡು; ನಂದನ: ಮಗ;
ಪದವಿಂಗಡಣೆ:
ನರನ +ರಥವದೆ +ಮರೆಯಹೊಗು +ಮುರ
ಹರನ +ಮರೆವೊಗು +ಭೀಮಸೇನನ
ಕರಸಿ +ನೂಕು +ಶಿಖಂಡಿ +ಸಾತ್ಯಕಿ +ಸೃಂಜಯಾದಿಗಳ
ಅರಸು+ಕುರಿಗಳ+ ಹೊಯ್ಸು +ಗೆಲುವಿನ
ಗರುವನಾದಡೆ +ನಿಲ್ಲೆನುತಲ್+
ಉಬ್ಬರಿಸಿ +ಮಾದ್ರಾಧೀಶನ್+ಎಚ್ಚನು +ಧರ್ಮ+ನಂದನನ
ಅಚ್ಚರಿ:
(೧) ನರ, ಮುರಹರ – ಪ್ರಾಸ ಪದಗಳು
(೨) ಹಂಗಿಸುವ ಪರಿ – ಗೆಲುವಿನ ಗರುವನಾದಡೆ ನಿಲ್ಲೆನುತಲುಬ್ಬರಿಸಿ ಮಾದ್ರಾಧೀಶನೆಚ್ಚನು ಧರ್ಮನಂದನನ