ಪದ್ಯ ೨೩: ಕರ್ಣನು ಸಂಧಿಯನ್ನರಿಯೆ ಎಂದು ಏಕೆ ಹೇಳಿದ

ಮಸೆದುದಿತ್ತಂಡಕೆ ಮತ್ಸರ
ವಸಮಸಂಗರರೀಗ ಸಂಧಿಯ
ನುಸಿರಿದೊಡೆ ಮನಗಾಣನೇ ಕೌರವ ಮಹೀಶ್ವರನು
ವಿಷಮನಹ ಕಟ್ಟಾಳು ಮಂತ್ರವ
ನೆಸಗಲಾಗದು ತನ್ನ ಬೀರಕೆ
ಮಸುಳಹುದು ಮುರವೈರಿ ಸಂಧಿಯನರಿಯೆ ನಾನೆಂದ (ಉದ್ಯೋಗ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಷ್ಣ ನೀನು ಎರಡು ತಂಡಗಳಿಗೂ ಮತ್ಸರವನ್ನು ಮಸೆದು ಅಸಮಾನ ವೀರನು ಸಂಧಿಯನ್ನು ಪ್ರತಿಪಾದಿಸಿದರೆ ಕೌರವನು ಏನೆಂದು ಕೊಂಡಾನು? ಯುದ್ಧವೇ ಇಲ್ಲದ ವೀರನು ಮಂತ್ರಾಲೋಚನೆ ಮಾಡಬಾರದು; ಹಾಗೆ ಮಾಡಿದರೆ ಅದು ನನ್ನ ಪರಾಕ್ರಮಕ್ಕೆ ಮಂಕುಬಡಿದಂತೆ ಆದುದರಿಂದ ನಾನು ಸಂಧಿಯನ್ನು ಅರಿಯೆ ಎಂದು ಕರ್ಣನು ಹೇಳಿದನು.

ಅರ್ಥ:
ಮಸೆ:ಹರಿತವಾದುದು; ತಂಡ: ಗುಂಪು; ಮತ್ಸರ: ಹೊಟ್ಟೆಕಿಚ್ಚು; ಅಸಮ:ಅಸದೃಶವಾದ; ಸಂಗರ:ಯುದ್ಧ, ಕಾಳಗ; ಸಂಧಿ: ಸಂಯೋಗ; ಉಸಿರು: ಸದ್ದು ಮಾಡು; ಮನ: ಮನಸ್ಸು; ಮನಗಾಣು: ತಿಳಿದುಕೊ; ಮಹೀಶ್ವರ: ರಾಜ; ವಿಷಮ: ಕಷ್ಟಕರವಾದುದು; ಕಟ್ಟಾಳು: ಶೂರ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಎಸಗು: ಕೆಲಸ, ಉದ್ಯೋಗ; ಬೀರ: ವೀರ; ಮಸುಳ:ಕಾಂತಿಹೀನವಾಗು; ಮುರವೈರಿ: ಕೃಷ್ಣ; ಅರಿ: ತಿಳಿ;

ಪದವಿಂಗಡನೆ:
ಮಸೆದುದ್+ಇತ್+ತಂಡಕೆ +ಮತ್ಸರವ್
ಅಸಮ+ಸಂಗರರ್+ಈಗ +ಸಂಧಿಯನ್
ಉಸಿರಿದೊಡೆ+ ಮನಗಾಣನೇ +ಕೌರವ +ಮಹೀಶ್ವರನು
ವಿಷಮನಹ +ಕಟ್ಟಾಳು +ಮಂತ್ರವನ್
ಎಸಗಲಾಗದು +ತನ್ನ +ಬೀರಕೆ
ಮಸುಳಹುದು+ ಮುರವೈರಿ+ ಸಂಧಿಯನ್+ಅರಿಯೆ +ನಾನೆಂದ

ಅಚ್ಚರಿ:
(೧) ಮಸೆದು, ಮತ್ಸರ, ಮಹೀಶ್ವರ, ಮಂತ್ರ, ಮಸುಳ, ಮುರವೈರಿ, ಮನಗಾಣು – ಮ ಕಾರದ ಪದಗಳ ಬಳಕೆ