ಪದ್ಯ ೨೩: ಶಿವನು ಅಶ್ವತ್ಥಾಮನನ್ನು ಹೇಗೆ ರಕ್ಷಿಸಿದನು?

ಮೆಚ್ಚಿದನು ಮದನಾರಿ ಹೋಮದ
ಕಿಚ್ಚು ತುಡುಕದ ಮುನ್ನ ತೆಗೆದನು
ಬಿಚ್ಚು ಜಡೆಗಳ ಜಹ್ನು ಸುತೆಯಲಿ ನಾದಿದನು ಭಟನ
ಎಚ್ಚ ಶರವಿದೆ ಖಡ್ಗವಿದೆ ಕೋ
ಮುಚ್ಚು ಮರೆಯೇಕಿನ್ನು ಸುತರಲಿ
ಚೊಚ್ಚಿಲವ ನೀನೆಂದು ಮೈದಡವಿದನು ಶಶಿಮೌಳಿ (ಗದಾ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶಿವನು ಮೆಚ್ಚಿ ಅವನ ದೇಹವನ್ನು ಬೆಂಕಿ ಸುಡುವ ಮೊದಲೇ ಮೇಲಕ್ಕೆತ್ತಿ ಗಂಗಾಜಲದಿಂದ ದೇಹವನ್ನು ತೊಳೆದನು. ನೀನು ಬಿಟ್ಟ ಬಾಣವಿದು, ನಿನ್ನ ಕತ್ತಿ ಇಲ್ಲಿದೆ ತೆಗೆದುಕೋ ಎಂದು ಅವನಿಗೆ ನೀಡಿದನು. ನೀನು ನನ್ನ ಮೊದಲ ಮಗ, ನಿನ್ನನ್ನು ಮೆಚ್ಚಿದ್ದೇನೆ ಎಂದು ಹೇಳಿ ಅಶ್ವತ್ಥಾಮನ ಮೈಯನ್ನು ಸವರಿದನು.

ಅರ್ಥ:
ಮೆಚ್ಚು: ಹೊಗಳು; ಮದನಾರಿ: ಶಿವ; ಹೋಮ: ಯಜ್ಞ; ಕಿಚ್ಚು: ಬೆಂಕಿ, ಅಗ್ನಿ; ತುಡುಕು: ಬೇಗನೆ ಹಿಡಿಯುವುದು, ಹೋರಾಡು; ಮುನ್ನ: ಮೊದಲು; ತೆಗೆ: ಹೊರತರು; ಬಿಚ್ಚು: ಹರಡು; ಜಡೆ: ಜಟೆ; ಜಹ್ನುಸುತೆ: ಗಂಗೆ; ನಾದು: ಕಲಸು, ಒದ್ದೆ ಮಾಡು; ಭಟ: ಪರಾಕ್ರಮಿ; ಎಚ್ಚ: ಬಾಣ ಪ್ರಯೋಗ ಮಾಡು; ಶರ: ಬಾಣ; ಖಡ್ಗ: ಕತ್ತಿ; ಕೋ: ನೀಡು, ಪಡೆ; ಮುಚ್ಚು: ಅಡಗು; ಸುತ: ಮಕ್ಕಳು; ಚೊಚ್ಚಿಲ: ಮೊದಲನೆಯ; ಮೈದಡವು: ದೇಹವನ್ನು ತಟ್ಟು, ಪ್ರೀತಿಯಿಂದ ಸವರು; ಶಶಿಮೌಳಿ: ಶಿವ; ಶಶಿ: ಚಂದ್ರ; ಮೌಳಿ: ಶಿರ;

ಪದವಿಂಗಡಣೆ:
ಮೆಚ್ಚಿದನು+ ಮದನಾರಿ +ಹೋಮದ
ಕಿಚ್ಚು+ ತುಡುಕದ +ಮುನ್ನ+ ತೆಗೆದನು
ಬಿಚ್ಚು +ಜಡೆಗಳ +ಜಹ್ನುಸುತೆಯಲಿ +ನಾದಿದನು +ಭಟನ
ಎಚ್ಚ+ ಶರವಿದೆ +ಖಡ್ಗವಿದೆ +ಕೋ
ಮುಚ್ಚುಮರೆ+ ಏಕಿನ್ನು +ಸುತರಲಿ
ಚೊಚ್ಚಿಲವ +ನೀನೆಂದು +ಮೈದಡವಿದನು +ಶಶಿಮೌಳಿ

ಅಚ್ಚರಿ:
(೧) ಮದನಾರಿ, ಶಶಿಮೌಳಿ – ಶಿವನನ್ನು ಕರೆದ ಪರಿ
(೨) ಕಿಚ್ಚು, ಬಿಚ್ಚು,ಮುಚ್ಚು – ಪ್ರಾಸ ಪದಗಳು
(೩) ಗಂಗೆಯನ್ನು ಜಹ್ನುಸುತೆ ಎಂದು ಕರೆದಿರುವುದು

ಪದ್ಯ ೧೫: ಅರ್ಜುನನಿಗೆ ಭೂರಿಶ್ರವನು ಏನನ್ನು ಕೇಳಿದನು?

ಆರು ಕೊಟ್ಟರು ಶರವನಿದ ಮದ
ನಾರಿಯೋ ನಿಮ್ಮಯ್ಯನಹ ಜಂ
ಭಾರಿಯೋ ಮೇಣ್ ಕೃಷ್ಣ ದ್ರೋನರೊ ಹೇಳು ಹುಸಿಯದಿರು
ವೀರನಹೆಯೋ ಪಾರ್ಥ ನಿನ್ನವೊ
ಲಾರು ಬಿಲುಗಾರರು ಮಹಾಸ್ತ್ರವಿ
ದಾರು ಕಲಿಸಿದ ವಿದ್ಯವುಪಯೋಗಿಸಿತು ನಿನಗೆಂದ (ದ್ರೋಣ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂರಿಶ್ರವನು ಮಾತನಾಡುತ್ತಾ, ಅರ್ಜುನ, ನಿನಗೆ ಈ ಭಾಣವನ್ನು ಕೊಟ್ಟವರಾರು? ಶಿವನೋ, ದೇವೇಂದ್ರನೋ, ಕೃಷ್ಣನೋ, ದ್ರೋಣನೋ, ಹೇಳು, ಸುಳ್ಳನ್ನು ಹೇಳಬೇಡ, ನೀನು ಶ್ರೇಷ್ಠ ಧನುರ್ಧರ, ನಿನ್ನ ಸಮಾನದ ವೀರನಾರು, ನೀನು ಬಳಸಿದ ಈ ಮಹಾಸ್ತ್ರವು ಯಾರು ಕಲಿಸಿದ ವಿದ್ಯೆ ಈ ದಿನ ನಿನ್ನ ಉಪಯೋಗಕ್ಕೆ ಬಂದಿತಲ್ಲವೇ ಎಂದು ಕೇಳಿದನು.

ಅರ್ಥ:
ಕೊಟ್ಟರು: ನೀಡಿದರು; ಶರ: ಬಾಣ; ಮದನಾರಿ: ಶಿವ; ಅಯ್ಯ: ತಂದೆ; ಜಂಭಾರಿ: ದೇವೇಂದ್ರ; ಮೇಣ್: ಅಥವ; ಹೇಳು: ತಿಳಿಸು; ಹುಸಿ: ಸುಳ್ಳು; ವೀರ: ಶೂರ; ಬಿಲುಗಾರ: ಬಿಲ್ವಿದ್ಯೆಯಲ್ಲಿ ನಿಪುಣ; ಅಸ್ತ್ರ: ಶಸ್ತ್ರ; ಕಲಿಸು: ಹೇಳಿಕೊಡು; ಉಪಯೋಗಿಸು: ಪ್ರಯೋಗಿಸು;

ಪದವಿಂಗಡಣೆ:
ಆರು +ಕೊಟ್ಟರು +ಶರವನ್+ ಇದ+ ಮದ
ನಾರಿಯೋ +ನಿಮ್ಮಯ್ಯನಹ ಜಂ
ಭಾರಿಯೋ +ಮೇಣ್ +ಕೃಷ್ಣ+ ದ್ರೋಣರೊ+ ಹೇಳು +ಹುಸಿಯದಿರು
ವೀರನಹೆಯೋ +ಪಾರ್ಥ +ನಿನ್ನವೊಲ್
ಆರು +ಬಿಲುಗಾರರು +ಮಹಾಸ್ತ್ರವಿದ್
ಆರು +ಕಲಿಸಿದ +ವಿದ್ಯ+ಉಪಯೋಗಿಸಿತು +ನಿನಗೆಂದ

ಅಚ್ಚರಿ:
(೧) ಶಿವ ಮತ್ತು ಇಂದ್ರನನ್ನು ಕರೆದ ಪರಿ – ಮದನಾರಿ, ಜಂಭಾರಿ

ಪದ್ಯ ೩೬: ಶಿವನು ಮರುಗಲು ಕಾರಣವೇನು?

ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯೊಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ
ನೋಯೆನೊಂದನು ಮೀರಿ ಮುನಿಯಲಿ
ಪಾಯವಾದುದಕಟಕಟಾ ತ
ಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ (ಅರಣ್ಯ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನ ಘಾತದಿಂದ ಆದ ಪೆಟ್ಟನ್ನು ಸೈರಿಸಿ, ಶಿವನು ಅರ್ಜುನನನ್ನು ಪೂರ್ಣ ಶಕ್ತಿಯಿಂದ ಮೆಟ್ಟಿದನು. ಅರ್ಜುನನ ಬಾಯಲ್ಲಿ ಮೂಗಿನ ಎರಡು ಹೊಳ್ಳೆಗಳಲ್ಲಿ ರಕ್ತ ಬಂದಿತು. ಅರ್ಜುನನಿಗೆ ನೋವಾಯಿತೆಂದುಕೊಂಡು ಶಿವನು ಬಹಳವಾಗಿ ನೊಂದನು. ನಾನು ಸ್ವಲ್ಪ ಕೋಪಗೊಂಡುದರಿಂದ ತಪ್ಪಾಯಿತೇ, ನನ್ನಿಂದೇನಾದರೂ ತಪ್ಪಾಯಿತೇ ಎಂದು ಶಿವನು ಮರುಗಿದನು.

ಅರ್ಥ:
ಗಾಯ: ಪೆಟ್ಟು; ಮನ್ನಿಸು: ಒಪ್ಪು, ಅಂಗೀಕರಿಸು; ಶಿವ: ಶಂಕರ; ಪೂರಾಯ: ಪರಿಪೂರ್ಣ; ಮೆಟ್ಟು: ತುಳಿತ; ಬಾಯಿ: ಮುಖದ ಅವಯವ; ಉಕ್ಕು: ಹೊಮ್ಮಿ ಬರು; ರುಧಿರ: ರಕ್ತ; ನಾಸಿಕ: ಮೂಗು; ಬಾಹೆ: ಪಾರ್ಶ್ವ, ಹೊರವಲಯ; ಮೀರು: ಉಲ್ಲಂಘಿಸು; ಮುನಿ: ಸಿಟ್ಟಾಗು, ಕೋಪಗೊಳ್ಳು; ಅಪಾಯ: ಕೇಡು, ತೊಂದರೆ; ಅಕಟಕಟಾ: ಅಯ್ಯೋ; ತಪ್ಪು: ಸುಳ್ಳಾಗು; ಮರುಗು: ತಳಮಳ, ಸಂಕಟ; ಮದನಾರಿ: ಶಿವ, ಮದನ ವೈರಿ;

ಪದವಿಂಗಡಣೆ:
ಗಾಯವನು +ಮನ್ನಿಸುತ +ಶಿವ +ಪೂ
ರಾಯದಲಿ+ ಮೆಟ್ಟಿದನು +ಪಾರ್ಥನ
ಬಾಯೊಳ್+ಉಕ್ಕುದು +ರುಧಿರ +ನಾಸಿಕದ್+ಎರಡು+ ಬಾಹೆಯಲಿ
ನೋಯೆನೊಂದನು +ಮೀರಿ +ಮುನಿಯಲಿ
ಪಾಯವಾದುದ್+ಅಕಟಕಟಾ+ ತ
ಪ್ಪಾಯಿತೇ +ತಪ್ಪಾಯ್ತೆನುತ +ಮರುಗಿದನು +ಮದನಾರಿ

ಅಚ್ಚರಿ:
(೧) ಶಿವನು ದುಃಖಿಸಿದ ಪರಿ – ನೋಯೆನೊಂದನು ಮೀರಿ ಮುನಿಯಲಿ ಪಾಯವಾದುದಕಟಕಟಾ ತಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ

ಪದ್ಯ ೩೪: ಶಿವನು ಪಾರ್ವತಿಗೆ ಅರ್ಜುನನ ಸಾಹಸದ ಬಗ್ಗೆ ಏನು ಹೇಳಿದ?

ತ್ರಾಣವೆಂತುಟೊ ಶಿವ ಶಿವಾ ಸ
ತ್ರಾಣನಹೆ ಬಹುದಿವಸ ಭುವನ
ಪ್ರಾಣವೇ ಪೋಷಣವಲಾ ಮಝಪೂತು ಜಗಜಟ್ಟಿ
ಕಾಣೆ ನಿನಗೆ ಸಮಾನರನು ಶಿವ
ನಾಣೆ ಗುಣದಲಸೂಯ ತವೇ
ನ್ನಾಣೆ ನೋಡೌ ಶಬರಿಯೆಂದನು ನಗುತ ಮದನಾರಿ (ಅರಣ್ಯ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಶಿವ ಶಿವಾ ನಿನಗೆ ಶಕ್ತಿ ಎಷ್ಟು ಇದೆಯೋ ಏನೋ? ನೀನು ಮಹಾ ಸತ್ವಶಾಲಿ, ಬಹು ದಿವಸ ನಿನಗೆ ಗಾಳಿಯೇ ಆಹಾರವಲ್ಲವೇ? ಭಲೇ ಭಲೇ ಎಲೈ ಜಗಜಟ್ಟಿ, ನಿನಗೆ ಸಮಾನರಿಲ್ಲ ಎಂದು ಅರ್ಜುನನಿಗೆ ಹೇಳಿ ಪಾರ್ವತಿಯ ಕಡೆಗೆ ತಿರುಗಿ, ಶಬರೀ ನನ್ನಾಣೆ, ಶಿವನಾಣೆ ಇವನ ಗುಣಕ್ಕೆ ಮತ್ಸರವೇ ಎಂದು ನಗುತ್ತಾ ಹೇಳಿದನು.

ಅರ್ಥ:
ತ್ರಾಣ: ಶಕ್ತಿ, ಬಲ; ಸತ್ರಾಣ: ಸಶಕ್ತ, ಬಲಶಾಲಿ; ಬಹು: ಬಹಳ; ದಿವಸ: ದಿನ; ಭುವನ: ಜಗತ್ತು, ಪ್ರಪಂಚ; ಪ್ರಾಣ: ವಾಯು; ಪೋಷಣ: ಆಹಾರ; ಮಝುಪೂತು: ಭಲೇ, ಕೊಂಡಾಟದ ನುಡಿ; ಜಗಜಟ್ಟಿ: ವೀರ; ಕಾಣೆ: ತೋರದು; ಸಮಾನ: ಸರಿಹೊಂದುವ; ಆಣೆ: ಪ್ರಮಾಣ; ಗುಣ: ನಡತೆ, ಸ್ವಭಾವ; ಅಸೂಯೆ: ಮತ್ಸರ; ನೋಡು: ವೀಕ್ಷಿಸು; ಶಬರಿ: ಬೇಡತಿ; ನಗು: ಸಂತಸ; ಮದನಾರಿ: ಶಿವ, ಮದನ ವೈರಿ;

ಪದವಿಂಗಡಣೆ:
ತ್ರಾಣವೆಂತುಟೊ+ ಶಿವ +ಶಿವಾ +ಸ
ತ್ರಾಣನಹೆ+ ಬಹುದಿವಸ +ಭುವನ
ಪ್ರಾಣವೇ +ಪೋಷಣವಲಾ+ ಮಝಪೂತು +ಜಗಜಟ್ಟಿ
ಕಾಣೆ+ ನಿನಗೆ+ ಸಮಾನರನು+ ಶಿವ
ನಾಣೆ +ಗುಣದಲ್+ಅಸೂಯ +ತವ
ಎನ್ನಾಣೆ +ನೋಡೌ +ಶಬರಿ+ಎಂದನು +ನಗುತ+ ಮದನಾರಿ

ಅಚ್ಚರಿ:
(೧) ತ್ರಾಣ, ಸತ್ರಾಣ, ಪ್ರಾಣ; ಆಣೆ, ಕಾಣೆ – ಪ್ರಾಸ ಪದಗಳು