ಅವರ ಹರಿಬವ ಬೇಡಿ ಸೃಂಜಯ
ರವಗಡಿಸಿದರು ಕೈಕೆಯರು ನೃಪ
ನಿವಹದಗಣಿತ ಚೈದ್ಯಯಾದವ ಮಗಧ ಮಾಳವರು
ವಿವಿಧ ವಾದ್ಯ ನಿನಾದ ಗಡಹಯ
ರವ ರಥಧ್ವನಿ ಜಗದ ಜಂತ್ರವ
ತಿವಿದು ಕೆದರೆ ವಿರೋಧಿ ಬಲ ಕೆಣಕಿದುದು ಕಳಶಜನ (ದ್ರೋಣ ಪರ್ವ, ೧೭ ಸಂಧಿ, ೪೧ ಪದ್ಯ)
ತಾತ್ಪರ್ಯ:
ಈ ಮೂವರ ಸೇಡನ್ನು ತೀರಿಸಿಕೊಳ್ಳಲು ಸೃಂಜಯ, ಕೈಕೆಯ, ಚೈದ್ಯ, ಯಾದವ, ಮಗಧ, ಮಾಳವರು ರಣವಾದ್ಯಗಳು ಬ್ರಹ್ಮಾಂಡವನ್ನೇ ತಿವಿಯುತ್ತಿರಲು ದ್ರೋಣನನ್ನು ಕೆಣಕಿದರು.
ಅರ್ಥ:
ಹರಿಬ: ಕೆಲಸ, ಕಾರ್ಯ; ಬೇಡು: ಯಾಚಿಸು; ಅವಗಡಿಸು: ಕಡೆಗಣಿಸು; ನಿವಹ: ಗುಂಪು; ಅಗಣಿತ: ಲೆಕ್ಕವಿಲ್ಲದ, ಎಣಿಕೆಗೆ ಮೀರಿದ; ವಿವಿಧ: ಹಲವಾರು; ನಿನಾದ: ಉಲಿವು; ಸದ್ದು; ಗಡ: ಅಲ್ಲವೆ; ಹಯ: ಕುದುರೆ; ರವ: ಶಬ್ದ; ಧ್ವನಿ: ಶಬ್ದ; ರಥ: ಬಂಡಿ; ಜಗ: ಪ್ರಪಂಚ; ಜಂತ್ರ: ಯಂತ್ರ, ವಾದ್ಯ; ತಿವಿ: ಚುಚ್ಚು; ಕೆದರು: ಹರಡು; ವಿರೋಧಿ: ಶತ್ರು; ಬಲ: ಸೈನ್ಯ; ಕೆಣಕು: ರೇಗಿಸು; ಕಳಶ: ಕುಂಭ;
ಪದವಿಂಗಡಣೆ:
ಅವರ +ಹರಿಬವ +ಬೇಡಿ +ಸೃಂಜಯರ್
ಅವಗಡಿಸಿದರು +ಕೈಕೆಯರು +ನೃಪ
ನಿವಹದ್+ಅಗಣಿತ +ಚೈದ್ಯ+ಯಾದವ +ಮಗಧ +ಮಾಳವರು
ವಿವಿಧ +ವಾದ್ಯ +ನಿನಾದ +ಗಡ+ಹಯ
ರವ +ರಥ+ಧ್ವನಿ +ಜಗದ +ಜಂತ್ರವ
ತಿವಿದು+ ಕೆದರೆ +ವಿರೋಧಿ +ಬಲ +ಕೆಣಕಿದುದು +ಕಳಶಜನ
ಅಚ್ಚರಿ:
(೧) ನಿನಾದ, ರವ, ಧ್ವನಿ – ಸಾಮ್ಯಾರ್ಥ ಪದಗಳು