ಪದ್ಯ ೪೧: ದ್ರೋಣರನ್ನು ಯಾರು ಕೆಣಕಿದರು?

ಅವರ ಹರಿಬವ ಬೇಡಿ ಸೃಂಜಯ
ರವಗಡಿಸಿದರು ಕೈಕೆಯರು ನೃಪ
ನಿವಹದಗಣಿತ ಚೈದ್ಯಯಾದವ ಮಗಧ ಮಾಳವರು
ವಿವಿಧ ವಾದ್ಯ ನಿನಾದ ಗಡಹಯ
ರವ ರಥಧ್ವನಿ ಜಗದ ಜಂತ್ರವ
ತಿವಿದು ಕೆದರೆ ವಿರೋಧಿ ಬಲ ಕೆಣಕಿದುದು ಕಳಶಜನ (ದ್ರೋಣ ಪರ್ವ, ೧೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಈ ಮೂವರ ಸೇಡನ್ನು ತೀರಿಸಿಕೊಳ್ಳಲು ಸೃಂಜಯ, ಕೈಕೆಯ, ಚೈದ್ಯ, ಯಾದವ, ಮಗಧ, ಮಾಳವರು ರಣವಾದ್ಯಗಳು ಬ್ರಹ್ಮಾಂಡವನ್ನೇ ತಿವಿಯುತ್ತಿರಲು ದ್ರೋಣನನ್ನು ಕೆಣಕಿದರು.

ಅರ್ಥ:
ಹರಿಬ: ಕೆಲಸ, ಕಾರ್ಯ; ಬೇಡು: ಯಾಚಿಸು; ಅವಗಡಿಸು: ಕಡೆಗಣಿಸು; ನಿವಹ: ಗುಂಪು; ಅಗಣಿತ: ಲೆಕ್ಕವಿಲ್ಲದ, ಎಣಿಕೆಗೆ ಮೀರಿದ; ವಿವಿಧ: ಹಲವಾರು; ನಿನಾದ: ಉಲಿವು; ಸದ್ದು; ಗಡ: ಅಲ್ಲವೆ; ಹಯ: ಕುದುರೆ; ರವ: ಶಬ್ದ; ಧ್ವನಿ: ಶಬ್ದ; ರಥ: ಬಂಡಿ; ಜಗ: ಪ್ರಪಂಚ; ಜಂತ್ರ: ಯಂತ್ರ, ವಾದ್ಯ; ತಿವಿ: ಚುಚ್ಚು; ಕೆದರು: ಹರಡು; ವಿರೋಧಿ: ಶತ್ರು; ಬಲ: ಸೈನ್ಯ; ಕೆಣಕು: ರೇಗಿಸು; ಕಳಶ: ಕುಂಭ;

ಪದವಿಂಗಡಣೆ:
ಅವರ +ಹರಿಬವ +ಬೇಡಿ +ಸೃಂಜಯರ್
ಅವಗಡಿಸಿದರು +ಕೈಕೆಯರು +ನೃಪ
ನಿವಹದ್+ಅಗಣಿತ +ಚೈದ್ಯ+ಯಾದವ +ಮಗಧ +ಮಾಳವರು
ವಿವಿಧ +ವಾದ್ಯ +ನಿನಾದ +ಗಡ+ಹಯ
ರವ +ರಥ+ಧ್ವನಿ +ಜಗದ +ಜಂತ್ರವ
ತಿವಿದು+ ಕೆದರೆ +ವಿರೋಧಿ +ಬಲ +ಕೆಣಕಿದುದು +ಕಳಶಜನ

ಅಚ್ಚರಿ:
(೧) ನಿನಾದ, ರವ, ಧ್ವನಿ – ಸಾಮ್ಯಾರ್ಥ ಪದಗಳು

ಪದ್ಯ ೨೦: ಶಿಶುಪಾಲನು ಭೀಷ್ಮನಿಗೆ ಕೃಷ್ಣನ ಗುಣಗಾನವನ್ನು ನಿಲ್ಲಿಸಲು ಏಕೆ ಹೇಳಿದ?

ಓಡಿ ಕೊಲಿಸಿದ ಕಾಲಯವನನ
ಮೂಡಿದವೆ ಹುಲುಕಲುಗಳಕಟಾ
ವೋಡುಕುಳಿ ಹೋದಲ್ಲಿ ಮಗಧನ ರಾಜಕಾರ್ಯದಲಿ
ಆಡಲರಿಯೆ ವಿಜಾತಿ ರತ್ನದ
ಖೋಡಿಗಳ ಹಳಿವಾತನೇ ಹರಿ
ತೋಡಿ ಬಡಿಸುವೆ ಕಿವಿಗರೋಚಕವಾಯ್ತು ತೆಗೆಯೆಂದ (ಸಭಾ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಈ ಕೃಷ್ಣನು ಓಡಿಹೋಗಿ ಕಾಲಯವನನನ್ನು ಮುಚುಕುಂದನಿಂದ ಕೊಲ್ಲಿಸಿದನಲ್ಲವೇ? ಜರಾಸಂಧನಿಗೆ ಹೆದರಿ ಓಡಿಹೋದ ದಾರಿಯಲ್ಲಿ ಇನ್ನಾದರೂ ಹುಲ್ಲು ಕಲ್ಲು ಇವೆಯೋ, ಅಥವ ನಿನ್ನ ಕಾಲುಸೋಕಿ ದಾರಿಯೇ ಹಾಳಾಯಿತೋ? ಅದನ್ನು ಹೇಳುವುದಿಲ್ಲ. ಬೇರೆ ಜಾತಿಯ ರತ್ನದ ದೋಷಗಳನ್ನು ಹಳಿಯುವ ಭೀಷ್ಮನೇ ಶ್ರೀಕೃಷ್ಣನ ಗುಣಗಳನ್ನು ತೋಡಿ ತೋಡಿ ಬಡಿಸುತ್ತೀಯೆ? ಕಿವಿಗಳು ಇದನ್ನು ಕೇಳಿ ಕಿವುಡಾಗಿವೆ, ಸಾಕು ನಿಲ್ಲಿಸು ಎಂದು ಶಿಶುಪಾಲನು ಜರೆದನು.

ಅರ್ಥ:
ಓಡು: ಪಲಾಯನ; ಕೊಲಿಸು: ಸಾಯಿಸು; ಮೂಡು: ಉದಯಿಸು, ತುಂಬು; ಹುಲುಕಲು: ಹುಲ್ಲು ಕಲ್ಲು; ಅಕಟ: ಅಯ್ಯೋ; ಓಡುಕುಳಿ: ಅಂಜುಪುರಕ; ಮಗಧ: ಜರಾಸಂಧ; ರಾಜಕಾರ್ಯ: ರಾಜಕಾರಣ; ಅರಿ: ತಿಳಿ; ವಿಜಾತಿ: ಬೇರೆ ಜಾತಿಯಿಂದ ಹುಟ್ಟಿದುದು; ರತ್ನ; ಬೆಲೆಬಾಳುವ ಮಣಿ, ಮಾಣಿಕ್ಯ; ಖೋಡಿ: ದುರುಳತನ; ಹಳಿ: ದೂಷಿಸು, ನಿಂದಿಸು; ಹರಿ: ವಿಷ್ಣು; ತೋಡು: ತೆಗೆ, ಹೊರಕ್ಕೆ ಹೋಗು, ವ್ಯಕ್ತಪಡಿಸು; ಬಡಿಸು: ಉಣಿಸು, ಇಡು; ಕಿವಿ: ಕರ್ಣ; ರೋಚಕ: ರೋಮಾಂಚನ; ತೆಗೆ: ಅತ್ತಸರಿ, ಬಿಡು; ಆಡಲು: ಹೇಳಲು;

ಪದವಿಂಗಡಣೆ:
ಓಡಿ+ ಕೊಲಿಸಿದ +ಕಾಲಯವನನ
ಮೂಡಿದವೆ +ಹುಲುಕಲುಗಳ್+ಅಕಟಾ
ವೋಡುಕುಳಿ+ ಹೋದಲ್ಲಿ +ಮಗಧನ +ರಾಜಕಾರ್ಯದಲಿ
ಆಡಲ್+ಅರಿಯೆ +ವಿಜಾತಿ +ರತ್ನದ
ಖೋಡಿಗಳ +ಹಳಿವಾತನೇ +ಹರಿ
ತೋಡಿ +ಬಡಿಸುವೆ +ಕಿವಿಗ್+ಅರೋಚಕವಾಯ್ತು +ತೆಗೆಯೆಂದ

ಅಚ್ಚರಿ:
(೧) ಕೃಷ್ಣನ ಗುಣಗಾನ ಸಾಕೆನ್ನುವ ಪರಿ – ಕಿವಿಗರೋಚಕವಾಯ್ತು ತೆಗೆಯೆಂದ

ಪದ್ಯ ೪೯: ಯಾರ ಮಕ್ಕಳು ಕೃಷ್ಣನಿಂದ ಪಟ್ಟಾಭಿಷಿಕ್ತರಾದರು?

ಮಗಧಸುತನೀ ಸಾಲ್ವ ಹಂಸನ
ಮಗ ನಿಶುಂಭನ ಸೂನು ನರಕನ
ಮಗನು ಪೌಂಡ್ರಕ ದಂತವಕ್ತ್ರನ ತನುಜರಿವರೆಲ್ಲ
ಹಗೆಯ ಮಾಡಿ ಮುರಾಂತಕನ ಕಾ
ಳಗದೊಳೆಲ್ಲರನಿಕ್ಕಿ ಪಟ್ಟವ
ಬಿರಿಸಿಕೊಂಡವರಲ್ಲವೇ ಹೇಳೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಜರಾಸಂಧನ ಮಗ, ಸಾಲ್ವ, ಹಂಸ, ನಿಶುಂಭ, ನರಕ, ಪೌಂಡ್ರಕ, ದಂತವಕ್ತ್ರ ಇವರ ಮಕ್ಕಳೂ ಯುದ್ಧದಲ್ಲಿ ಕೃಷ್ಣನಿಂದ ತಮ್ಮ ತಂದೆಯರನ್ನು ಕಳೆದುಕೊಂಡ ನಂತರ ಕೃಷ್ಣನಿಂದಲೇ ಪಟ್ಟಕ್ಕೆ ಬಂದವರಲ್ಲವೇ ಎಂದು ಭೀಷ್ಮರು ಕೇಳಿದರು.

ಅರ್ಥ:
ಸುತ: ಮಗ; ಮಗಧಸುತ: ಜರಾಸಂಧ; ಹಗೆ: ವೈರತ್ವ; ಮುರಾಂತಕ: ಕೃಷ್ಣ; ಕಾಳಗ: ಯುದ್ಧ;ಇಕ್ಕು: ಸಾಯಿಸು; ಪಟ್ಟ: ಪದವಿ; ಬಿರಿಸು: ಕಟ್ಟು; ಹೇಳು: ತಿಳಿಸು;

ಪದವಿಂಗಡಣೆ:
ಮಗಧಸುತನ್+ಈ+ ಸಾಲ್ವ +ಹಂಸನ
ಮಗ +ನಿಶುಂಭನ+ ಸೂನು +ನರಕನ
ಮಗನು +ಪೌಂಡ್ರಕ +ದಂತವಕ್ತ್ರನ+ ತನುಜರ್+ಇವರೆಲ್ಲ
ಹಗೆಯ +ಮಾಡಿ +ಮುರಾಂತಕನ+ ಕಾ
ಳಗದೊಳ್+ಎಲ್ಲರನ್+ಇಕ್ಕಿ +ಪಟ್ಟವ
ಬಿರಿಸಿಕೊಂಡವರ್+ಅಲ್ಲವೇ +ಹೇಳೆಂದನಾ +ಭೀಷ್ಮ

ಅಚ್ಚರಿ:
(೧) ಮಗ, ಸೂನು, ತನುಜ – ಸಮನಾರ್ಥಕ ಪದ
(೨) ಮಗ – ೧-೩ ಸಾಲಿನ ಮೊದಲ ಪದ

ಪದ್ಯ ೭: ಕರ್ಣನನ್ನು ಯಾವ ರಾಜರು ಮೂದಲಿಸಿದರು?

ಮುಂದುಗೆಟ್ಟುದು ದೊರೆಗಳೆನೆ ರವಿ
ನಂದನನ ರಥಕಾಗಿ ಸೇನಾ
ವೃಂದ ಕವಿದುದು ಚೈದ್ಯ ಸೃಂಜಯ ಮತ್ಸ್ಯ ಕೈಕೆಯರು
ಸಂದಣಿಸಿ ಪಾಂಚಾಲ ಕೇರಳ
ವಿಂದ ಮಗಧ ದ್ರವಿಡ ವಂಗ ಪು
ಳಿಂದ ಬಲ ಬಹಳಾಬ್ಧಿ ಮುತ್ತಿತು ಮತ್ತೆ ಮೂದಲಿಸಿ (ಕರ್ಣ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ದೊರೆಗಳು ಮುಂದುಗೆಟ್ಟರೂ, ಚೈದ್ಯ, ಸೃಂಜಯ, ಮತ್ಸ್ಯ, ಕೈಕೆಯರ ಸೇನೆಗಳು ಕವಿದವು. ಪಾಂಚಾಲ, ಕೇರಳ, ವಿಂದ, ಮಗಧ, ದ್ರವಿಡ, ವಂಗ, ಪುಳಿಂದರ ಸೇನಾ ಸಮುದ್ರಗಳು ಕರ್ಣನನ್ನು ಮುತ್ತಿ ಮೂದಲಿಸಿದವು.

ಅರ್ಥ:
ಮುಂದು: ಮುಂಚೂಣಿ; ದೊರೆ: ರಾಜ; ರವಿನಂದನ: ಸೂರ್ಯಪುತ್ರ (ಕರ್ಣ); ರಥ: ತೇರು; ಸೇನಾವೃಂದ: ಸೈನ್ಯದ ಗುಂಪು; ಕವಿದು: ಆವರಿಸು, ತೊಡು, ಧರಿಸು; ಸಂದಣಿ: ಗುಂಪು, ಸಮೂಹ; ಬಲ: ಸೈನ್ಯ; ಅಬ್ಧಿ: ಸಾಗರ; ಮುತ್ತು: ಆವರಿಸು, ಕವಿ; ಮೂದಲಿಸು: ಹಂಗಿಸು;

ಪದವಿಂಗಡಣೆ:
ಮುಂದುಗೆಟ್ಟುದು+ ದೊರೆಗಳೆನೆ+ ರವಿ
ನಂದನನ +ರಥಕಾಗಿ +ಸೇನಾ
ವೃಂದ +ಕವಿದುದು +ಚೈದ್ಯ +ಸೃಂಜಯ +ಮತ್ಸ್ಯ +ಕೈಕೆಯರು
ಸಂದಣಿಸಿ +ಪಾಂಚಾಲ +ಕೇರಳ
ವಿಂದ +ಮಗಧ +ದ್ರವಿಡ +ವಂಗ +ಪು
ಳಿಂದ +ಬಲ +ಬಹಳಾಬ್ಧಿ +ಮುತ್ತಿತು +ಮತ್ತೆ +ಮೂದಲಿಸಿ

ಅಚ್ಚರಿ:
(೧) ಚೈದ್ಯ, ಸೃಂಜಯ, ಮತ್ಸ್ಯ, ಕೈಕೆಯ, ಪಾಂಚಾಲ, ಕೇರಳ, ವಿಂಗ, ಮಗಧ, ದ್ರವಿಡ, ವಂಗ, ಪುಳಿಂದ – ಕರ್ಣನನ್ನು ಮುತ್ತಿದ ಸೈನ್ಯ

ಪದ್ಯ ೨೫: ಧರ್ಮರಾಯನು ಕೃಷ್ಣನಿಗೆ ಯಾವ ಪ್ರಶ್ನೆಯನ್ನು ಕೇಳಿದನು?

ಈಸು ಘನವೇ ಕೃಷ್ಣ ಯಾಗ
ದ್ವೇಷಿಗಳು ಪಿರಿದಾಗಲೆವಗಿ
ಸ್ನೈಸಲೇ ವರರಾಜಸೂಯಾಧ್ವರಕೆ ಸಂನ್ಯಾಸ
ಈಸು ದೈತ್ಯರು ನಿನ್ನ ಕೈಯಲಿ
ಘಾಸಿಯಾದರು ಮಗಧನೊಬ್ಬನು
ಮೀಸಲಳಿಯನು ಗಡ ಮಹಾದೇವೆಂದನಾ ಭೂಪ (ಸಭಾ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಧರ್ಮರಾಯನು ಆಶ್ಚರ್ಯಚಕಿತನಾಗಿ, “ಕೃಷ್ಣ, ಜರಾಸಂಧನು ಅಷ್ಟು ಬಲಶಾಲಿಯೆ? ಯಾಗಕ್ಕೆ ಇಂತಹವರು ಹೆಚ್ಚಾದರೆ, ಯಾಗಕ್ಕೆ ವಿರೋಧವೇ ಹೆಚ್ಚಾಗಿ, ನಾವು ಯಾಗವನ್ನು ಕೈಬಿಡುವ ಹಾಗೆಯೆ, ಆದರೆ ಇಷ್ಟು ರಾಕ್ಷಸರನ್ನು ನೀನು ಸಂಹರಿಸಿದ ಬಳಿಕ ಜರಾಸಂಧನನ್ನು ನೀನು ವಧಿಸಲಾಗದಿರುವುದಾದರು ಹೇಗೆ ಶಿವಾ ಶಿವಾ” ಎಂದು ಧರ್ಮರಾಯನು ಹೇಳಿದನು.

ಅರ್ಥ:
ಈಸು: ಇಷ್ಟು; ಘನ: ಶ್ರೇಷ್ಠ; ಯಾಗ: ಕ್ರತು; ದ್ವೇಷ: ಅಸೂಯೆ; ಪಿರಿ: ಹಿರಿದು; ಐಸಲೇ: ಅಲ್ಲವೆ; ವರ: ಶ್ರೇಷ್ಠ; ಸಂನ್ಯಾಸ: ವಿರಕ್ತ, ಎಲ್ಲವನ್ನು ತ್ಯಜಿಸಿದವ; ದೈತ್ಯ: ರಾಕ್ಷಸ; ಕೈ: ಹಸ್ತ, ಕರ; ಘಾಸಿ: ವಿಘ್ನ; ಮೀಸಲು:ಮುಡಿಪು; ಗಡ:ಅಲ್ಲವೆ; ಭೂಪ: ರಾಜ;

ಪದವಿಂಗಡಣೆ:
ಈಸು +ಘನವೇ +ಕೃಷ್ಣ +ಯಾಗ
ದ್ವೇಷಿಗಳು +ಪಿರಿದಾಗಲ್+ಎವಗಿಸ್
ಎನ್+ಐಸಲೇ +ವರ+ರಾಜಸೂಯಾಧ್ವರಕೆ+ ಸಂನ್ಯಾಸ
ಈಸು +ದೈತ್ಯರು +ನಿನ್ನ +ಕೈಯಲಿ
ಘಾಸಿಯಾದರು +ಮಗಧನ್+ ಒಬ್ಬನು
ಮೀಸಲ್+ಅಳಿಯನು +ಗಡ +ಮಹಾದೇವೆಂದನಾ +ಭೂಪ

ಅಚ್ಚರಿ:
(೧) ಈಸು – ೧, ೪ ಸಾಲಿನ ಮೊದಲ ಪದ
(೨) ಘಾಸಿ, ಘನ – “ಘ” ಕಾರದ ಪದಗಳ ಬಳಕೆ
(೩) ಘನ, ವರ – ಸಮನಾರ್ಥಕ ಪದ

ಪದ್ಯ ೧೯: ಜರಾಸಂಧನು ಯುಧಿಷ್ಠಿರನ ಮೇಲೆ ಕೋಪಗೊಳ್ಳಲು ಕಾರಣವೇನು?

ಮಾವದೇವನ ಮುರಿದೊಡಾತನ
ದೇವಿಯರು ಬಳಿಕೆಮ್ಮ ದೂರಿದ
ರಾ ವಿಗಡ ಮಗಧಂಗೆ ಮಧುರೆಯ ಮೇಲೆ ದಂಡಾಯ್ತು
ನಾವು ನಾನಾ ದುರ್ಗದಲಿ ಸಂ
ಭಾವಿಸಿದೆವಾತನನು ನಿಮ್ಮೊಡ
ನಾವು ಕೂಡಿದೊಡಾತ ಮುನಿಯನೆ ಭೂಪ ಕೇಳೆಂದ (ಸಭಾ ಪರ್ವ, ೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕಂಸನನು ನಾನು ಸಂಹಾರಮಾಡಿದ ನಂತರ, ಅವನ ಪತ್ನಿಯರಾದ ಅಸ್ತಿ, ಪ್ರಪ್ತಿ ಯರು ತಮ್ಮ ತಂದೆಯಾದ ಜರಾಸಂಧನ ಬಳಿ ದೂರಿದರು. ಕೋಪಗೊಂಡ ಜರಾಸಂಧನು ಮಧುರೆಯ ಮೇಳೆ ದಂಡೆತ್ತಿ ಬಂದನು. ನಾನು ಓಡಿಹೋಗಿ ಅನೇಕ ಕೋಟೆಗಳಲ್ಲಿ ಸೇರಿಕೊಂಡು ಅವನೊಡನೆ ಯುದ್ಧಮಾಡಿ ಓಡಿಹೋಗೆ ದ್ವಾರಕೆಯನ್ನು ಕಟ್ಟಿಕೊಂಡೆ. ಈಗ ನಾನು ನಿಮ್ಮೊಡನೆ ಸೇರಿದರೆ ಅವನು ನಿಮ್ಮ ಮೇಲೆ ಕೋಪಗೊಳ್ಳುವುದಿಲ್ಲವೆ ಎಂದು ಶ್ರೀಕೃಷ್ಣನು ಯುಧಿಷ್ಠಿರನನ್ನು ಕೇಳಿದ.

ಅರ್ಥ:
ಮಾವ: ತಾಯಿಯ ತಮ್ಮ; ಮುರಿ: ಕೊಲ್ಲು, ಹೊಡೆ; ದೇವಿ: ರಾಣಿ; ದೂರು: ಮೊರೆ, ಅಹವಾಲು; ವಿಗಡ:ಶೌರ್ಯ, ಪರಾಕ್ರಮ; ದಂಡೆತ್ತು: ಸೇನೆಯಿಂದ ಆಕ್ರಮಿಸು; ನಾನಾ: ಹಲವಾರು; ದುರ್ಗ: ಕೋಟೆ; ಸಂಭಾವಿಸು:ನಿಭಾಯಿಸು; ಕೂಡು: ಸೇರು; ಮುನಿಸು: ಕೋಪಗೊಳ್ಳು; ಭೂಪ: ರಾಜ;

ಪದವಿಂಗಡಣೆ:
ಮಾವ+ದೇವನ +ಮುರಿದೊಡ್+ಆತನ
ದೇವಿಯರು +ಬಳಿಕ+ಎಮ್ಮ +ದೂರಿದರ್
ಆ +ವಿಗಡ +ಮಗಧಂಗೆ +ಮಧುರೆಯ +ಮೇಲೆ +ದಂಡಾಯ್ತು
ನಾವು+ ನಾನಾ +ದುರ್ಗದಲಿ +ಸಂ
ಭಾವಿಸಿದೆವ್+ಆತನನು +ನಿಮ್ಮೊಡ
ನಾವು +ಕೂಡಿದೊಡ್+ಆತ +ಮುನಿಯನೆ+ ಭೂಪ +ಕೇಳೆಂದ

ಅಚ್ಚರಿ:
(೧) ಕಂಸನನ್ನು ಮಾವದೇವ ಎಂದು ಕರೆದಿರುವುದು
(೨) ೧ ಸಾಲಿನ ೨ ಪದಗಳು “ಮ” ಕಾರದಿಂದಿರುವುದು – ಮಾವದೇವನ ಮುರಿದೊಡಾತನ
(೩) ನಾವು – ೪, ೬ ಸಾಲಿನ ಮೊದಲ ಪದ