ಭೃಗು ಪುಲಸ್ತ್ಯವಸಿಷ್ಠದಕ್ಷಾ
ದಿಗಳೆನಿಪ್ಪ ನವ ಪ್ರಜೇಶ್ವರ
ರೊಗುಮಿಗೆಯ ಮಾಡಿದರು ಸೃಷ್ಟಿಗೆ ಬೇರೆ ಬೇರವರು
ಜಗದ ಜೋಡಣೆಯಾಯ್ತು ಭೂತಾ
ಳಿಗೆ ಚತುರ್ವಿಧ ಸೃಷ್ಟಿಯೊಡ್ಡಣೆ
ನಿಗಮ ಮತದಲಿ ಹೂಡಿತವನೀಪಾಲ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೩೫ ಪದ್ಯ)
ತಾತ್ಪರ್ಯ:
ಭೃಗು, ಪುಲಸ್ತ್ಯ, ವಸಿಷ್ಠ, ದಕ್ಷರೇ ಮೊದಲಾದ ಒಂಬತ್ತು ಜನ ಪ್ರಜಾಪತಿಗಳು ವಿಧವಿಧ ಸೃಷ್ಟಿಯನ್ನು ಮಾದಿದರು. ಜಗತ್ತು ಹೊಸದಾಗಿ ಜೋಡಣೆಯಾಯಿತು. ನಾಲ್ಕು ವಿಧದ (ಸ್ವೇದಜ, ಅಂಡಜ, ಉದ್ಭಿಜ, ಜರಾಯಜ) ಪಾಣಿಗಳು ವೇದಮತದಂತೆ ಸೃಷ್ಟಿಯಾದವು.
ಅರ್ಥ:
ಆದಿ: ಮುಂತಾದ; ನವ: ಹೊಸ; ಪ್ರಜೇಶ್ವರ: ಪ್ರಜಾಪತಿ, ರಾಜ; ಒಗುಮಿಗೆ: ಆಧಿಕ್ಯ, ಹೆಚ್ಚಳ; ಸೃಷ್ಟಿ: ಉತ್ಪತ್ತಿ, ಹುಟ್ಟು; ಬೇರೆ: ಅನ್ಯ; ಜಗ: ಪ್ರಪಂಚ; ಜೋಡಣೆ: ಹೊಂದಿಸು; ಭೂತ: ಚರಾಚರಾತ್ಮಕ ಜೀವರಾಶಿ; ಆಳಿ: ಗುಂಪು; ಚತುರ್ವಿಧ: ನಾಲ್ಕು ಪ್ರಭೇದ; ಒಡ್ಡಣ: ಗುಂಪು, ಸಮೂಹ; ನಿಗಮ: ವೇದ; ಮತ: ವಿಚಾರ; ಹೂಡು: ಅಣಿಗೊಳಿಸು; ಅವನೀಪಾಲ: ರಾಜ; ಅವನೀ: ಭೂಮಿ; ಕೇಳು: ಆಲಿಸು;
ಪದವಿಂಗಡಣೆ:
ಭೃಗು+ ಪುಲಸ್ತ್ಯ+ವಸಿಷ್ಠ+ದಕ್ಷ
ಆದಿಗಳ್+ಎನಿಪ್ಪ +ನವ +ಪ್ರಜೇಶ್ವರರ್
ಒಗುಮಿಗೆಯ +ಮಾಡಿದರು +ಸೃಷ್ಟಿಗೆ +ಬೇರೆ +ಬೇರವರು
ಜಗದ+ ಜೋಡಣೆಯಾಯ್ತು +ಭೂತಾ
ಳಿಗೆ +ಚತುರ್ವಿಧ +ಸೃಷ್ಟಿಯೊಡ್ಡಣೆ
ನಿಗಮ +ಮತದಲಿ +ಹೂಡಿತ್+ಅವನೀಪಾಲ+ ಕೇಳೆಂದ
ಅಚ್ಚರಿ:
(೧) ಪ್ರಜೇಶ್ವರರು – ಭೃಗು, ಪುಲಸ್ತ್ಯ, ವಸಿಷ್ಠ, ದಕ್ಷ