ಆರವಂಗಡದಾಳಿವನು ನೀ
ನಾರುಹೆಸರೇನೆಂದು ಬಳಿಕ ವಿ
ಚಾರ ಮಿಗೆ ಹೊಯ್ದಾಡಿದರು ಕರೆಕರೆದು ಮೂದಲಿಸಿ
ಭಾರಿಸಿತು ಬಲುತಿಮಿರ ಬಲ ಸಂ
ಹಾರವನು ವಿವರಿಸುವನಾವನು
ಭೂರಿ ಭಟರಂಘವಣೆ ಬೀತುದು ಭೂಪ ಕೇಳೆಂದ (ದ್ರೋಣ ಪರ್ವ, ೧೫ ಸಂಧಿ, ೩೧ ಪದ್ಯ)
ತಾತ್ಪರ್ಯ:
ಇವನು ಯಾರ ಕಡೆಯ ಯೋಧ? ಇವನು ಯಾರು? ಹೆಸರೇನು? ಎಂದು ಕೇಳಿ ಬಳಿಕ ಕರೆಕರೆದು ಮೂದಲಿಸಿ ಹೊಯ್ದರು. ಕತ್ತಲು ದಟ್ಟವಾಗಿ ಹಬ್ಬಿತ್ತು. ವೀರರ ಶಕ್ತಿ ಕುಗ್ಗಿತ್ತು. ಎಷ್ಟು ಸೈನಿಕರು ಸತ್ತರೋ ತಿಳಿಯುವುದಾದರು ಹೇಗೆ ಹೇಳು ರಾಜನೇ ಎಂದು ಸಂಜಯನು ವಿವರಿಸಿದನು.
ಅರ್ಥ:
ದಾಳಿ: ಆಕ್ರಮಣ; ಹೆಸರು: ನಾಮಧೇಯ; ಬಳಿಕ: ನಂತರ; ವಿಚಾರ: ರ್ಯಾಲೋಚನೆ, ವಿಮರ್ಶೆ; ಮಿಗೆ: ಮತ್ತು, ಅಧಿಕ; ಹೊಯ್ದಾಡು: ಹೋರಾಡು; ಕರೆ: ಬರೆಮಾಡು; ಮೂದಲಿಸು: ಹಂಗಿಸು; ಭಾರಿಸು: ಹೊಡೆ; ತಿಮಿರ: ರಾತ್ರಿ; ಸಂಹಾರ: ನಾಶ, ಕೊನೆ; ವಿವರಿಸು: ಹೇಳು; ಭೂರಿ: ಹೆಚ್ಚು, ಅಧಿಕ; ಭಟ: ಸೈನಿಕ; ಅಂಘವಣೆ: ಉದ್ದೇಶ; ಬೀತು: ಕಳೆದು; ಭೂಪ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಆರವಂಗಡದಾಳ್+ಇವನು +ನೀನ್
ಆರು+ಹೆಸರೇನೆಂದು +ಬಳಿಕ +ವಿ
ಚಾರ +ಮಿಗೆ +ಹೊಯ್ದಾಡಿದರು +ಕರೆಕರೆದು +ಮೂದಲಿಸಿ
ಭಾರಿಸಿತು +ಬಲು+ತಿಮಿರ +ಬಲ +ಸಂ
ಹಾರವನು +ವಿವರಿಸುವನ್+ಆವನು
ಭೂರಿ +ಭಟರ್+ಅಂಘವಣೆ +ಬೀತುದು +ಭೂಪ +ಕೇಳೆಂದ
ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಭಾರಿಸಿತು ಬಲುತಿಮಿರ ಬಲ; ಭೂರಿ ಭಟರಂಘವಣೆ ಬೀತುದು ಭೂಪ