ಭೀಮ ಹಾ ಹಾ ಕಷ್ಟವಿದು ಸಂ
ಗ್ರಾಮಜಯವೇ ಸಾಲದೇ ಕುರು
ಭೂಮಿಪತಿಯಶ್ಲಾಘ್ಯನೇ ಲೋಕೈಕಮಾನ್ಯನಲಾ
ನೀ ಮರುಳಲಾ ಸಾರೆನುತ ತ
ತ್ಸೀಮೆಗೈತಂದನಿಲತನುಜನ
ನಾ ಮಹೀಪತಿ ನೂಕಿ ಸಂತೈಸಿದನು ಕುರುಪತಿಯ (ಗದಾ ಪರ್ವ, ೮ ಸಂಧಿ, ೧೬ ಪದ್ಯ)
ತಾತ್ಪರ್ಯ:
ಆಗ ಧರ್ಮಜನು ಭೀಮನಿದ್ದೆಡೆಗೆ ಹೋಗಿ, ಅವನನ್ನು ನೂಕಿ, ಭೀಮ ಇದು ಮಾಡಬಾರದ ಕೆಲಸ. ಯುದ್ಧದಲ್ಲಿ ಗೆದ್ದುದು ಸಾಲದೇ? ಕೌರವನು ಹೊಗಳಿಕೆಗೆ ಬಾಹಿರನೇ? ಅವನು ಲೋಕೈಕ ಮಾನ್ಯನು. ನೀನು ಮಾಡಿದ್ದು ಮೂಢತನದ ಕೆಲಸ ಎಂದು ಕೌರವನನ್ನು ಸಂತೈಸಿದನು.
ಅರ್ಥ:
ಕಷ್ಟ: ಕಠಿಣ; ಸಂಗ್ರಾಮ: ಯುದ್ಧ; ಜಯ: ಗೆಲುವು; ಸಾಲದೇ: ಸಾಕಾಗದೆ; ಭೂಮಿಪತಿ: ರಾಜ; ಶ್ಲಾಘ್ಯ: ಹೊಗಳು; ಲೋಕ: ಜಗತ್ತು; ಮಾನ್ಯ: ಗೌರವ, ಮನ್ನಣೆ; ಮರುಳ: ತಿಳಿಗೇಡಿ, ದಡ್ಡ; ಸಾರು: ಪ್ರಕಟಿಸು, ಘೋಷಿಸು; ಸೀಮೆ: ಎಲ್ಲೆ, ಗಡಿ; ಐತಂದು: ಬಂದು ಸೇರು; ಅನಿಲತನುಜ: ವಾಯು ಪುತ್ರ; ಮಹೀಪತಿ: ರಾಜ; ನೂಕು: ತಳ್ಳು; ಸಂತೈಸು: ಸಮಾಧಾನ ಪಡಿಸು;
ಪದವಿಂಗಡಣೆ:
ಭೀಮ +ಹಾ +ಹಾ +ಕಷ್ಟವಿದು+ ಸಂ
ಗ್ರಾಮ+ಜಯವೇ +ಸಾಲದೇ +ಕುರು
ಭೂಮಿಪತಿ+ಅಶ್ಲಾಘ್ಯನೇ +ಲೋಕೈಕ+ಮಾನ್ಯನಲಾ
ನೀ +ಮರುಳಲಾ +ಸಾರೆನುತ +ತತ್
ಸೀಮೆಗ್+ಐತಂದ್+ಅನಿಲತನುಜನನ್
ಆ+ ಮಹೀಪತಿ+ ನೂಕಿ +ಸಂತೈಸಿದನು +ಕುರುಪತಿಯ
ಅಚ್ಚರಿ:
(೧) ಮಹೀಪತಿ, ಭೂಮಿಪತಿ – ಸಮಾನಾರ್ಥಕ ಪದ