ಪದ್ಯ ೨೨: ಕೃಷ್ಣನ ಬೀಳ್ಕೊಡುಗೆ ಹೇಗೆ ನಡೆಯಿತು?

ಆ ಶುಭಗ್ರಹದುದಯದಲಿ ತಿಥಿ
ರಾಶಿ ನಕ್ಷತ್ರಾದಿ ಪುಣ್ಯೋ
ದ್ಭಾಸಮಾನ ಮುಹೂರ್ತದಲಿ ಸುಸ್ವರ ವಿಳಾಸದಲಿ
ಭೂಸುರಾಶೀರ್ವಾದದಲಿ ಲ
ಕ್ಷ್ಮೀಶ ಪಯಣವ ಮಾಡಿದನು ಕ
ಟ್ಟಾಸುರದಲೊದರಿದವು ಘನಗಂಭೀರ ಭೇರಿಗಳು (ಸಭಾ ಪರ್ವ, ೧೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಒಂದು ಶುಭದಿನದಂದು, ಶುಭ ನಕ್ಷತ್ರ, ತಿಥಿ, ವಾರ, ರಾಶಿ, ಮುಹೂರ್ತದಲ್ಲಿ ಶ್ರೀಕೃಷ್ಣನು ದ್ವಾರಕೆಗೆ ಇಂದ್ರಪ್ರಸ್ಥನಗರದಿಂದ ಪ್ರಯಾಣಕ್ಕೆ ಸಿದ್ಧನಾದನು. ಬ್ರಾಹ್ಮಣರು ಆಶೀರ್ವಾದ ಮಾಡಿದರು, ಆಗ ಭಯಂಕರವಾದ ಭೇರಿಯ ನಿನಾದವು ಎಲ್ಲಡೆ ಗರ್ಜಿಸಿತು.

ಅರ್ಥ:
ಶುಭ: ಮಂಗಳ; ಗ್ರಹ: ಆಕಾಶಚರಗಳು; ಉದಯ: ಹುಟ್ಟು; ತಿಥಿ: ದಿನ; ರಾಶಿ: ಮೇಶ ಇತ್ಯಾದಿ ನಕ್ಷತ್ರಗಳ ಗುಂಪು; ನಕ್ಷತ್ರ: ತಾರ; ಪುಣ್ಯ: ಒಳ್ಳೆಯ; ಭಾಸ: ಹೊಳಪು, ಕಾಂತಿ, ತೋರು; ಮುಹೂರ್ತ: ಸಮಯ; ಸುಸ್ವರ: ನಿನಾದ, ನಾದ; ವಿಳಾಸ: ಉಲ್ಲಾಸ, ಅಂದ, ಸೊಬಗು; ಭೂಸುರ: ಬ್ರಾಹ್ಮಣ; ಆಶೀರ್ವಾದ: ಅನುಗ್ರಹ; ಪಯಣ: ಪ್ರಯಾಣ; ಕಟ್ಟಾಸುರ: ಅತ್ಯಂತ ಭಯಂಕರ; ಒದರು: ಕಿರುಚು, ಗರ್ಜಿಸು; ಘನ: ಶ್ರೇಷ್ಠ; ಗಂಭೀರ: ಆಳವಾದ, ಗಹನವಾದ; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ, ದುಂದುಭಿ;

ಪದವಿಂಗಡಣೆ:
ಆ +ಶುಭ+ಗ್ರಹದ್+ಉದಯದಲಿ +ತಿಥಿ
ರಾಶಿ +ನಕ್ಷತ್ರಾದಿ +ಪುಣ್ಯೋದ್
ಭಾಸಮಾನ +ಮುಹೂರ್ತದಲಿ+ ಸುಸ್ವರ +ವಿಳಾಸದಲಿ
ಭೂಸುರ+ಆಶೀರ್ವಾದದಲಿ +ಲ
ಕ್ಷ್ಮೀಶ +ಪಯಣವ +ಮಾಡಿದನು +ಕ
ಟ್ಟಾಸುರದಲ್+ಒದರಿದವು +ಘನಗಂಭೀರ+ ಭೇರಿಗಳು