ಪದ್ಯ ೨೫: ಶಂತನು ಕಾಡಿನಲ್ಲಿ ಯಾರನ್ನು ಕಂಡನು?

ಪರಿಮಳದ ಬಳಿವಿಡಿದು ಬಂದೀ
ತರುಣಿಯನು ಕಂಡಾರು ನೀನೆಂ
ದರಸ ಬೆಸಗೊಳುತೆಸುವ ಕಾಮನ ಶರಕೆ ಮೈಯೊಡ್ಡಿ
ಅರಮನೆಗೆ ನಡೆಯೆನಲು ತಂದೆಯ
ಪರಮವಚನವಲಂಘ್ಯವೆನೆ ಕಾ
ತರಿಸಿ ಭಗ್ನಮನೋರಥನು ಮರಳಿದನು ಮಂದಿರಕೆ (ಆದಿ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಂತನು ಬೇಟೆಯಾಡುತ್ತಿರುವಾಗ ಯೋಜನಗಮ್ಧಿಯ ಪದ್ಮಪುಷ್ಪದ ಸುವಾಸನೆಯು ಗಾಳಿಯಲ್ಲಿ ಬಂದಿತು. ಅವನು ಆ ದಾರಿಯನ್ನು ಹಿಡಿದು ಹೋಗಿ ಅವಳನ್ನು ಕಂಡು, ಮದನಶರಗಳಿಂದ ಗಾಯಗೊಂಡು ಅವಳಿಗೆ ನೀನು ಯಾರು? ಅರಮನೆಗೆ ಹೋಗೋಣ ಬಾ ಎಂದನು. ಅವಳು ನನ್ನ ತಂದೆಯ ಮಾತನ್ನು ದಾಟಲಾಗುವುದಿಲ್ಲ ಎಂದಳು. ಮನಸ್ಸು ಮುರಿದ ಶಂತನು ಕಾತರದಿಂದ ತನ್ನರಮನೆಗೆ ಹಿಂದಿರುಗಿದನು.

ಅರ್ಥ:
ಪರಿಮಳ: ಸುಗಂಧ; ಬಳಿ: ಹತ್ತಿರ; ಬಂದು: ಆಗಮಿಸು; ತರುಣಿ: ಹೆಣ್ಣು; ಕಂಡು: ನೋಡು; ಅರಸ: ರಾಜ; ಬೆಸಸು: ಹೇಳು; ಎಸು: ಬಾಣ ಪ್ರಯೋಗ; ಕಾಮ: ಮನ್ಮಥ; ಶರ: ಬಾಣ; ಮೈಯೊಡ್ಡು: ದೇಹವನ್ನು ತೋರು; ಅರಮನೆ: ರಾಜರ ಆಲಯ; ನಡೆ: ಚಲಿಸು; ತಂದೆ: ಪಿತ; ಪರಮ: ಶ್ರೇಷ್ಠ; ವಚನ: ಮಾತು; ಅಲಂಘ್ಯ: ದಾಟಲಸಾಧ್ಯವಾದ; ಕಾತರ: ಕಳವಳ; ಭಗ್ನ: ನಾಶ; ಮನೋರಥ: ಆಸೆ, ಬಯಕೆ; ಮರಳು: ಹಿಂದಿರುಗು; ಮಂದಿರ: ಆಲಯ, ಮನೆ;

ಪದವಿಂಗಡಣೆ:
ಪರಿಮಳದ +ಬಳಿವಿಡಿದು +ಬಂದ್ +ಈ
ತರುಣಿಯನು +ಕಂಡ್+ಆರು +ನೀನ್
ಎಂದ್+ಅರಸ +ಬೆಸಗೊಳುತ್+ಎಸುವ +ಕಾಮನ +ಶರಕೆ +ಮೈಯೊಡ್ಡಿ
ಅರಮನೆಗೆ +ನಡೆ+ಎನಲು +ತಂದೆಯ
ಪರಮ+ವಚನವ್+ಅಲಂಘ್ಯವ್+ಎನೆ +ಕಾ
ತರಿಸಿ +ಭಗ್ನ+ಮನೋರಥನು+ ಮರಳಿದನು +ಮಂದಿರಕೆ

ಅಚ್ಚರಿ:
(೧) ಮೋಹಗೊಂಡನು ಎಂದು ಹೇಳುವ ಪರಿ – ಎಸುವ ಕಾಮನ ಶರಕೆ ಮೈಯೊಡ್ಡಿ