ಪದ್ಯ ೨: ಸೇವಕರು ಯಾರನ್ನು ನೋಡಿದರು?

ಅವನಿಪನ ಖಂಡೆಯವ ನಕುಲನ
ಪವನಸುತನ ಕಠಾರಿಯನು ನೃಪ
ನಿವಹದಾಯುಧತತಿಯನೊಯ್ಯನೆ ತೆಗೆದು ಬೈಚಿಟ್ಟು
ಬವರದಲಿ ಸುತನಳಿದನೋ ಕೌ
ರವರ ಕೈವಶವಾದನೋ ಸಂ
ಭವಿಪ ಹದನೇನೆಂಬ ನೃಪತಿಯ ಕಂಡರೈತಂದು (ದ್ರೋಣ ಪರ್ವ, ೭ ಸಂಧಿ, ೨ ಪದ್ಯ)

ತಾತ್ಪರ್ಯ:
ಧರ್ಮಜನ ಖಡ್ಗ, ಭೀಮ ನಕುಲರ ಕಠಾರಿಗಳು, ಉಳಿದವರ ಆಯುಧಗಳನ್ನು ಮುಚ್ಚಿಟ್ಟರು. ಅಭಿಮನ್ಯುವು ಅಳಿದಣೊ, ಕೌರವರಿಗೆ ಸೆರೆಸಿಕ್ಕನೋ ಏನಾಯಿತು ಎಂದು ಕೊಳ್ಳುತ್ತಿದ್ದ ಧರ್ಮಜನನ್ನು ಕಂಡರು.

ಅರ್ಥ:
ಅವನಿಪ: ರಾಜ; ಖಂಡೆಯ: ಕತ್ತಿ, ಖಡ್ಗ; ಪವನಸುತ: ವಾಯುಪುತ್ರ (ಭೀಮ); ಕಠಾರಿ: ಚೂರಿ, ಕತ್ತಿ; ನೃಪ: ರಾಜ; ನಿವಹ: ಗುಂಪು; ಆಯುಧ: ಶಸ್ತ್ರ; ತತಿ: ಗುಂಪು; ಒಯ್ಯು: ತೆರಳು; ತೆಗೆ: ಹೊರತರು; ಬೈಚಿಟ್ಟು: ಮುಚ್ಚಿಟ್ಟು; ಬವರ: ಯುದ್ಧ; ಸುತ: ಪುತ್ರ; ಅಳಿ: ಮರಣ; ಸಂಭವಿಪ: ಸಾಧ್ಯತೆ, ಶಕ್ಯತೆ; ಹದ: ಸ್ಥಿತಿ; ನೃಪತಿ: ರಾಜ; ಕಂಡು: ನೋಡು; ಐತಂದು: ಬಂದು ಸೇರು;

ಪದವಿಂಗಡಣೆ:
ಅವನಿಪನ +ಖಂಡೆಯವ +ನಕುಲನ
ಪವನಸುತನ+ ಕಠಾರಿಯನು+ ನೃಪ
ನಿವಹದ್+ಆಯುಧ+ತತಿಯನ್+ಒಯ್ಯನೆ +ತೆಗೆದು +ಬೈಚಿಟ್ಟು
ಬವರದಲಿ +ಸುತನಳಿದನೋ +ಕೌ
ರವರ+ ಕೈವಶವಾದನೋ +ಸಂ
ಭವಿಪ +ಹದನೇನೆಂಬ+ ನೃಪತಿಯ +ಕಂಡರ್+ಐತಂದು

ಅಚ್ಚರಿ:
(೧) ಅವನಿಪ, ನೃಪ – ಸಮಾನಾರ್ಥಕ ಪದ