ದುಗುಡವನು ಬಿಡು ಮೋಹಬಂಧ
ಸ್ಥಗಿತ ಚಿತ್ತದ ಕದಡು ಹಣಿಯಲಿ
ಮಗಳೆ ಮರುಳಾದೌ ವಿಳಾಸದ ವಿಹಿತವಿಹಪರಕೆ
ಅಗಡುಮಕ್ಕಳ ತಾಯ್ಗೆ ತಪ್ಪದು
ಬೆಗಡುಬೇಗೆ ಸುಯೋಧನಾದ್ಯರ
ವಿಗಡತನವನು ನೆನೆದು ನೀ ನೋಡೆಂದನಾ ಮುನಿಪ (ಗದಾ ಪರ್ವ, ೧೧ ಸಂಧಿ, ೪೭ ಪದ್ಯ)
ತಾತ್ಪರ್ಯ:
ವೇದವ್ಯಾಸರು ಗಾಂಧಾರಿಯನ್ನು ಸಮಾಧಾನ ಪಡಿಸಲು ಮುಂದಾದರು. ಗಾಂಧಾರಿ, ದುಃಖವನ್ನು ಬಿಡು, ಮೋಹದಂದ ಕಟ್ಟುವಡೆದ ಚಿತ್ತದ ಕೊಳೆಯನ್ನು ತೆಗೆದುಹಾಕು. ಇಹ ಪರಗಳಲ್ಲಿ ಸಂಭವಿಸುವ ಇಂತಹದಕ್ಕೆ ನೀನು ಚಿಂತಿಸಬಾರದು. ಇಂತಹ ಮಕ್ಕಳ ತಾಯಿಗೆ ಅಂಜಿಕೆ, ನೋವುಗಳು ಎಂದೂ ತಪ್ಪಲಾರವು. ನಿನ್ನ ಮಕ್ಕಳು ಮಾದಿದ ಅಕಾರ್ಯಗಳನ್ನು ನೆನೆಸಿಕೊಂಡು ವಿಚಾರಿಸು ಎಂದು ನುಡಿದರು.
ಅರ್ಥ:
ದುಗುಡ: ದುಃಖ; ಬಿಡು: ತೊರೆ; ಮೋಹ: ಆಸೆ; ಬಂಧ: ಕಟ್ಟು, ಬಂಧನ, ಪಾಶ; ಸ್ಥಗಿತ: ನಿಂತು ಹೋದುದು; ಚಿತ್ತ: ಮನಸ್ಸು; ಕದಡು: ಕಲಕಿದ ದ್ರವ, ಕಲ್ಕ; ಹಣಿ: ಬಾಗು, ಮಣಿ; ಮಗಳೆ: ಪುತ್ರಿ; ಮರುಳ: ತಿಳಿಗೇಡಿ, ದಡ್ಡ; ಆದೌ: ಹಿಂದೆ; ವಿಲಾಸ: ಕ್ರೀಡೆ, ವಿಹಾರ; ವಿಹಿತ: ಯೋಗ್ಯವಾದುದು; ಇಹಪರ: ಈ ಲೋಕ ಮತ್ತು ಪರಲೋಕ; ಅಗಡು: ತುಂಟತನ; ಮಕ್ಕಳು: ಪುತ್ರರು; ತಾಯಿ: ಮಾತೆ; ತಪ್ಪದು: ಬೇರ್ಪಡಿಸಲಾಗದು; ಬೆಗಡು: ಭಯ, ಅಂಜಿಕೆ; ಬೇಗೆ: ಬೆಂಕಿ, ಕಿಚ್ಚು; ಆದಿ: ಮುಂತಾದ; ವಿಗಡ: ಶೌರ್ಯ, ಪರಾಕ್ರಮ; ನೆನೆ: ಜ್ಞಾಪಿಸು; ನೋಡು: ವೀಕ್ಷಿಸು; ಮುನಿ: ಋಷಿ;
ಪದವಿಂಗಡಣೆ:
ದುಗುಡವನು +ಬಿಡು +ಮೋಹ+ಬಂಧ
ಸ್ಥಗಿತ +ಚಿತ್ತದ +ಕದಡು +ಹಣಿಯಲಿ
ಮಗಳೆ +ಮರುಳ್+ಆದೌ +ವಿಳಾಸದ +ವಿಹಿತವ್+ಇಹಪರಕೆ
ಅಗಡು+ಮಕ್ಕಳ+ ತಾಯ್ಗೆ +ತಪ್ಪದು
ಬೆಗಡು+ಬೇಗೆ +ಸುಯೋಧನಾದ್ಯರ
ವಿಗಡತನವನು +ನೆನೆದು +ನೀ +ನೋಡೆಂದನಾ +ಮುನಿಪ
ಅಚ್ಚರಿ:
(೧) ಲೋಕ ನೀತಿ – ಅಗಡುಮಕ್ಕಳ ತಾಯ್ಗೆ ತಪ್ಪದು ಬೆಗಡುಬೇಗೆ