ಪದ್ಯ ೧೭: ಧರ್ಮರಾಜನ ನಾಡಿನ ವೈಶಿಷ್ಟ್ಯವೇನು?

ಕಳುಹಿದನು ಪಾಂಚಾಲರನು ಯದು
ತಿಲಕ ಮೊದಲಾದಖಿಳ ಬಾಂಧವ
ಕುಲವನುತ್ಸಾಹದಲಿ ಹೊರೆದನು ನಾಡುಬೀಡುಗಳ
ಬೆಳುಗವತೆಯನ್ಯಾಯವಾರಡಿ
ಕಳವು ದಳವುಳ ಬಂದಿ ಡಾವರ
ಕೊಲೆ ಹುಸಿಗಳಿಲ್ಲಿವರ ರಾಜ್ಯದೊಳರಸ ಕೇಳೆಂದ (ಆದಿ ಪರ್ವ, ೧೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ತನ್ನ ಜೊತೆ ಬಂದಿದ್ದ ಪಾಂಚಾಲ ರಾಜ ದ್ರುಪದ ಮತ್ತು ಧೃಷ್ಟದ್ಯುಮ್ನ, ಶ್ರೀಕೃಷ್ಣ ಮುಂತಾದ ಬಾಂಧವರನ್ನು ಕಳುಹಿಸಿ, ಅತ್ಯಂತ ಉತ್ಸಾಹದಿಂದ ತನ್ನ ನಾಡಿನ ಯೋಗಕ್ಷೇಮಕ್ಕೆ ದುಡಿಯಲು ಪ್ರಾರಂಭಿಸಿದನು. ಅವನಾಳುವ ನೆಲದಲ್ಲಿ ಕೊರೆ, ದರೋಡೆ, ಮೋಸ, ಕಳವು, ಬರ, ಸುಳ್ಳು ಅನ್ಯಾದದಿಂದಾದ ದೋಷಗಳು ಇರಲಿಲ್ಲ.

ಅರ್ಥ:
ಕಳುಹು: ಬೀಳ್ಕೊಡು; ತಿಲಕ: ಶ್ರೇಷ್ಠ, ಮುಕುಟಪ್ರಾಯ;ಅಖಿಳ: ಸರ್ವ; ಬಾಂಧವ: ಬಂಧುವರ್ಗ; ಕುಲ: ವಂಶ; ಉತ್ಸಾಹ: ಹುರುಪು, ಆಸಕ್ತಿ; ಹೊರೆ: ಹೊಣೆ, ಜವಾಬ್ದಾರಿ; ನಾಡು: ರಾಜ್ಯ; ಬೀಡು: ಮನೆ; ಬೆಳಗುವತೆ: ಹಗಲುದರೋಡೆ; ಅನ್ಯಾಯ:ಅಕ್ರಮ; ಆರಡಿ: ಮೋಸ; ಕಳವು: ಅಪಹಾರ, ವಂಚನೆ; ದಳ:ಸೈನ್ಯ,ಪಡೆ, ತುಂಡು; ಬಂದಿ:ಸೆರೆ, ಬಂಧನ; ಡಾವರ:ಹಿಂಸೆ, ಕೊಳ್ಳೆ, ಸೂರೆ; ಕೊಲೆ: ವಧೆ, ಸಾಯಿಸು; ಹುಸಿ: ಸುಳ್ಳು;ಅರಸ: ರಾಜ;

ಪದವಿಂಗಡಣೆ:
ಕಳುಹಿದನು +ಪಾಂಚಾಲರನು+ ಯದು
ತಿಲಕ+ ಮೊದಲಾದ್+ಅಖಿಳ+ ಬಾಂಧವ
ಕುಲವನ್+ಉತ್ಸಾಹದಲಿ +ಹೊರೆದನು +ನಾಡು+ಬೀಡುಗಳ
ಬೆಳುಗವತೆ +ಅನ್ಯಾಯವ್ + ಆರಡಿ
ಕಳವು +ದಳವುಳ+ ಬಂದಿ +ಡಾವರ
ಕೊಲೆ +ಹುಸಿಗಳ್+ಇಲ್ಲ್+ಇವರ +ರಾಜ್ಯದೊಳ್+ಅರಸ +ಕೇಳೆಂದ

ಅಚ್ಚರಿ:
(೧) ದೋಷಗಳ ಪಟ್ಟಿ ಕೊನೆಯ ೩ ಸಾಲುಗಳಲ್ಲಿ ವಿವರಿಸಿರುವುದು