ಪದ್ಯ ೧೯: ರಾಣಿಯರ ಕೇಶಗಳಿಂದ ಮುತ್ತು ಹೇಗೆ ಬಿದ್ದವು?

ಉಡಿದು ಬಿದ್ದವು ಸೂಡಗವು ಬಿಗು
ಹಡಗಿ ಕಳೆದವು ತೋಳ ಬಂದಿಗ
ಳೊಡನೊಡನೆ ಚೆಲ್ಲಿದವು ಮುತ್ತಿನ ಹಾರಚಯ ಹರಿದು
ಬಿಡುಮುಡಿಯ ಕಡುತಿಮಿರ ಕಾರಿದು
ದುಡುಗಣವನೆನೆ ಸೂಸಕದ ಮು
ತ್ತಡಿಸಿ ಸುರಿದವು ನೆಲಕೆ ನೃಪವನಿತಾಕದಂಬದಲಿ (ಗದಾ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಆ ಸ್ತ್ರೀಯರು ಮುಡಿದ ಹೂಗಳು ಕೆಳಕ್ಕೆ ಬಿದ್ದವು. ತೋಳ ಬಂದಿಗಳು ಸಡಿಲಾಗಿ ಬಿದ್ದವು. ಮುತ್ತಿನ ಹಾರಗಳು ಹರಿದು, ಬೈತಲೆ ಬೊಟ್ಟು ಬಿದ್ದು, ಅದರ ಮಣಿಗಳು ರಾಣಿಯರ ಕೂದಲುಗಳ ಕತ್ತಲಿಂದ ನಕ್ಷತ್ರಗಳು ಸುರಿದಂತೆ ಕಾಣಿಸಿತು.

ಅರ್ಥ:
ಉಡಿ: ಸೊಂಟ; ಸೂಡು: ಮುಡಿ, ಧರಿಸು; ಬಿಗು: ಗಟ್ಟಿ, ಭದ್ರ; ಹಡಗಿ: ಸಡಲಿಸಿ; ಕಳೆದು: ಬೀಳು, ನಿವಾರಣೆಯಾಗು; ತೋಳು: ಭುಜ; ಬಂದಿ: ತೋಳಿಗೆ ಧರಿಸುವ ಒಂದು ಬಗೆಯ ಆಭರಣ, ವಂಕಿ; ಚೆಲ್ಲು: ಹರಡು; ಮುತ್ತು: ಬೆಲೆಬಾಳುವ ರತ್ನ; ಹಾರ: ಮಾಲೆ; ಚಯ: ಸಮೂಹ, ರಾಶಿ; ಹರಿ: ಕಡಿ, ಕತ್ತರಿಸು; ಬಿಡುಮುಡಿ: ಹರಡಿದ ಕೇಶ; ಕಡು: ತುಂಬ, ಬಹಳ; ತಿಮಿರ: ಕತ್ತಲೆ; ಕಾರು: ಚೆಲ್ಲು; ಉಡುಗಣ: ತಾರಾಗಣ, ನಕ್ಷತ್ರಗಳ ಸಮೂಹ; ಸುರಿ: ಹರಡು; ನೆಲ: ಭೂಮಿ; ನೃಪ: ರಾಜ; ವನಿತಾ: ಹೆಂಗಸು; ನೃಪವನಿತಾ: ರಾಣಿ; ಕದಂಬ: ಗುಂಪು;

ಪದವಿಂಗಡಣೆ:
ಉಡಿದು +ಬಿದ್ದವು +ಸೂಡಗವು +ಬಿಗು
ಹಡಗಿ +ಕಳೆದವು +ತೋಳ +ಬಂದಿಗಳ್
ಒಡನೊಡನೆ +ಚೆಲ್ಲಿದವು +ಮುತ್ತಿನ+ ಹಾರಚಯ +ಹರಿದು
ಬಿಡುಮುಡಿಯ +ಕಡು+ತಿಮಿರ +ಕಾರಿದುದ್
ಉಡುಗಣವವ್+ಎನೆ +ಸೂಸಕದ +ಮುತ್ತ್
ಅಡಿಸಿ +ಸುರಿದವು +ನೆಲಕೆ +ನೃಪವನಿತಾ+ಕದಂಬದಲಿ

ಅಚ್ಚರಿ:
(೧) ರಾಣಿಯನ್ನು ನೃಪವನಿತ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಬಿಡುಮುಡಿಯ ಕಡುತಿಮಿರ ಕಾರಿದು ದುಡುಗಣವನೆನೆ ಸೂಸಕದ ಮು
ತ್ತಡಿಸಿ ಸುರಿದವು ನೆಲಕೆ ನೃಪವನಿತಾಕದಂಬದಲಿ

ಪದ್ಯ ೧೫: ಭಾನುಮತಿಯನ್ನು ಯಾರು ಹಿಂಬಾಲಿಸಿದರು?

ಧರಣಿಪತಿ ಹೊರವಂಟನಂತಃ
ಪುರವ ಬಿಸುಟರು ಭಾನುಮತಿ ಸಹಿ
ತರಸಿಯರು ಹೊರವಂಟರೇಕಾಂಬರದ ಬಿಡುಮುಡಿಯ
ಕರದಬಸುರಿನ ಹೊಯ್ಲ ಕಜ್ಜಳ
ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು ನೆರೆದುದು ಲಕ್ಕ ಸಂಖ್ಯೆಯಲಿ (ಗದಾ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಭಾನುಮತಿಯೊಂದಿಗೆ ಅರಮನೆಯನ್ನು ಬಿಟ್ಟು ಹೊರಟನು. ರಾಣಿವಾಸದವರೆಲ್ಲರೂ ಏಕವಸ್ತ್ರವನ್ನು ಧರಿಸಿ ಮುಡಿಯನ್ನು ಬಿಚ್ಚಿಕೊಂಡು ಹೊರಟರು. ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿರಲು, ಕೈಯಿಂದ ಹೊಟ್ಟೆಯನ್ನು ಹೊಡೆದುಕೊಳ್ಳುತ್ತಾ ಲಕ್ಷ ಸಂಖ್ಯೆಯ ಸ್ತ್ರೀಯರು ಅವರನ್ನು ಹಿಂಬಾಲಿಸಿದರು.

ಅರ್ಥ:
ಧರಣಿಪತಿ: ರಾಜ; ಹೊರವಂಟ: ನಡೆ, ತೆರಳು; ಅಂತಃಪುರ: ರಾಣಿವಾಸದ ಅರಮನೆ; ಬಿಸುಟು: ಹೊರಹಾಕು; ಸಹಿತ: ಜೊತೆ; ಅರಸಿ: ರಾಣಿ; ಏಕ: ಒಂದೇ; ಅಂಬರ:ಬಟ್ಟೆ; ಬಿಡು: ತೆರೆದ; ಮುಡಿ: ಶಿರ, ಕೂದಲು; ಕರ: ಹಸ್ತ; ಬಸುರು: ಹೊಟ್ಟೆ; ಹೊಯ್ಲು: ಹೊಡೆತ; ಕಜ್ಜಳ: ಕಾಡಿಗೆ; ಲುಳಿ: ಸೊಗಸು, ಕಾಂತಿ; ನಯನ: ಕಣ್ಣು; ಅಂಬು: ನೀರು; ನಯನಾಂಬು: ಕಣ್ಣೀರು; ಕಾತರ: ಕಳವಳ, ಉತ್ಸುಕತೆ; ಕಮಲಾಕ್ಷಿ: ಕಮಲದಂತ ಕಣ್ಣುಳ್ಳ (ಹೆಣ್ಣು); ನೆರೆ: ಗುಂಪು; ಲಕ್ಕ: ಲಕ್ಷ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಧರಣಿಪತಿ+ ಹೊರವಂಟನ್+ಅಂತಃ
ಪುರವ +ಬಿಸುಟರು +ಭಾನುಮತಿ +ಸಹಿತ್
ಅರಸಿಯರು +ಹೊರವಂಟರ್+ಏಕ+ಅಂಬರದ +ಬಿಡು+ಮುಡಿಯ
ಕರದ+ಬಸುರಿನ +ಹೊಯ್ಲ+ ಕಜ್ಜಳ
ಪರಿಲುಳಿತ +ನಯನಾಂಬುಗಳ +ಕಾ
ತರಿಪ+ ಕಮಲಾಕ್ಷಿಯರು +ನೆರೆದುದು +ಲಕ್ಕ +ಸಂಖ್ಯೆಯಲಿ

ಅಚ್ಚರಿ:
(೧) ನೋವನ್ನು ಚಿತ್ರಿಸುವ ಪರಿ – ಕರದಬಸುರಿನ ಹೊಯ್ಲ ಕಜ್ಜಳ ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು

ಪದ್ಯ ೪೩: ಪಾಂಡವರು ಮುಂದೆ ಏನನ್ನು ನೋಡುತ್ತಾರೆಂದು ವಿದುರನು ಎಚ್ಚರಿಸಿದನು?

ಎಳೆದು ತರಿಸಾ ದ್ರೌಪದಿಯ ನೀ
ಕಳಕಳಕೆ ಕೈಗೊಟ್ಟವೋಲ
ಸ್ಖಲಿತರಿಹರಕ್ಷಮತೆಯಲಿ ತತ್ಸಮಯ ಪರಿಯಂತ
ಬಳಿಕ ನೂರ್ವರ ಸತಿಯರಕ್ಕೆಯ
ಕಳವಳದ ಬಿಡುಮುಡಿಯ ಬಿಸುರಿನ
ತಳದ ಬಿರುವೊಯ್ಲುಗಳ ಭಂಗವ ಕಾಂಬರಿವರೆಂದ (ಸಭಾ ಪರ್ವ, ೧೫ ಸಂಧಿ, ೪೩ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಎಳೆದು ತಾ ದ್ರೌಪದಿಯನ್ನು, ಇದರಿಂದ ನೀನು ದೊಡ್ಡ ಅನಾಹುತಕ್ಕೆ ದಾರಿಮಾಡಿಕೊಡುವೆ. ಕಾಲ ಬರುವವರೆಗೂ ತಮ್ಮ ನಿಲುಮೆಯಿಂದ ಜಾರದೆ ಅಸಹಾಯಕರಾಗಿ ಇವರಿರುತ್ತಾರೆ. ಆದರೆ ಮುಂದೊಂದು ಕಾಲ ಬರುತ್ತದೆ. ಆಗ ನೀವು ನೂರು ಜನರ ನಿಮ್ಮ ಹೆಂಡಂದಿರು ಕಳವಳಿಸ್ತುತ್ತಾ ಅಳುತ್ತಾ ತಮ್ಮ ಮುಡಿಗಳನ್ನು ಚದುರಿ ಕಿಬ್ಬೊಟ್ಟೆಯನ್ನು ಹೊಡೆದುಕೊಳ್ಳುತ್ತಾ ಜೋರಾಗಿ ಅಳುವ ಭಂಗಿಯನ್ನು ಈ ಪಾಂಡವರು ನೋಡುತ್ತಾರೆ ಎಂದು ವಿದುರನು ಮುಂದಾಗುವ ಅನಾಹುತವನ್ನು ಹೇಳಿದನು.

ಅರ್ಥ:
ಎಳೆ: ತನ್ನ ಕಡೆಗೆ ಸೆಳೆದುಕೊ; ತರಿಸು: ಬರೆಮಾಡು; ಕಳಕಳ: ಗೊಂದಲ; ಕೈಗೊಟ್ಟ: ದಾರಿಮಾದು; ಸ್ಖಲಿತ: ಜಾರಿಬಿದ್ದ; ಕ್ಷಮತೆ: ಶಕ್ತಿ, ಪರಾಕ್ರಮ; ಸಮಯ: ಕಾಲ; ಪರಿಯಂತ: ವರೆಗೆ, ತನಕ; ಬಳಿಕ: ನಂತರ; ನೂರು: ಶತ; ಸತಿ: ಹೆಂಡತಿ; ಅಕ್ಕೆ: ಅಳುವಿಕೆ, ವಿಲಾಪ; ಬಿಡು:ಚದರಿದ; ಮುಡಿ: ಕೂದಲು; ಬಸುರು: ಹೊಟ್ಟೆ; ತಳ: ಕೆಳಭಾಗ; ಉಯ್ಲು: ಸೆಳೆವು; ಬಿರು: ಗಟ್ಟಿಯಾದುದು; ಭಂಗ: ರೀತಿ, ಭಂಗಿ; ಕಾಂಬರು: ನೋಡುವರು;

ಪದವಿಂಗಡಣೆ:
ಎಳೆದು +ತರಿಸ್+ಆ+ ದ್ರೌಪದಿಯ +ನೀ
ಕಳಕಳಕೆ +ಕೈಗೊಟ್ಟವೋಲ್
ಅಸ್ಖಲಿತರ್+ಇಹರ್+ಅಕ್ಷಮತೆಯಲಿ+ ತತ್ಸಮಯ +ಪರಿಯಂತ
ಬಳಿಕ+ ನೂರ್ವರ +ಸತಿಯರ್+ಅಕ್ಕೆಯ
ಕಳವಳದ +ಬಿಡುಮುಡಿಯ +ಬಿಸುರಿನ
ತಳದ +ಬಿರುವೊಯ್ಲುಗಳ+ ಭಂಗವ+ ಕಾಂಬರಿವರೆಂದ

ಅಚ್ಚರಿ:
(೧) ಮುಂದಿನ ಘೋರ ದೃಶ್ಯದ ವಿವರಣೆ – ನೀವೆಲ್ಲರೂ ಸಾಯುತ್ತೀರ ಎಂದು ಹೇಳುವ ಪರಿ- ನೂರ್ವರ ಸತಿಯರಕ್ಕೆಯಕಳವಳದ ಬಿಡುಮುಡಿಯ ಬಿಸುರಿನ ತಳದ ಬಿರುವೊಯ್ಲುಗಳ ಭಂಗವ
(೨) ಪಾಂಡವರ ಸ್ಥಿತಿಯನ್ನು ಹೇಳುವ ಪರಿ – ಅಸ್ಖಲಿತರಿಹರಕ್ಷಮತೆಯಲಿ ತತ್ಸಮಯ ಪರಿಯಂತ