ನಿಲ್ಲು ಫಲುಗುಣ ನಿನ್ನ ಪರಿಯಂ
ತೆಲ್ಲಿಯದು ರಣವಕಟ ಹಾರುವ
ನಲ್ಲಿ ಕೆಲಬರ ಹೊಯ್ದು ಕೊಂದನು ಬಿನುಗು ಬಿಚ್ಚಟೆಯ
ಬಲ್ಲೆನಾತನ ಬಲುಹನೀಶ್ವರ
ನಲ್ಲಿ ಹರಿಮೇಖಳೆಯ ಸಾಕಿ
ನ್ನೆಲ್ಲವೇತಕೆಯೆನುತ ಧೃಷ್ಟದ್ಯುಮ್ನನನುವಾದ (ದ್ರೋಣ ಪರ್ವ, ೧೮ ಸಂಧಿ, ೧೧ ಪದ್ಯ)
ತಾತ್ಪರ್ಯ:
ಅರ್ಜುನ, ಈ ಯುದ್ಧಕ್ಕೆ ನೀನೇಕೆ ಹೋಗಬೇಕು. ಆ ಬ್ರಾಹ್ಮಣನು ನಿರ್ಬಲರನ್ನು ಕೊಂದು ಹಾಕಿದ. ಅವನ ಸತ್ವ ನನಗೆ ಗೊತ್ತು. ಈಶ್ವರನ ಮುಂದೆ ಇಂದ್ರಜಾಲ ವಿದ್ಯೆ ನಡೆದೀತೇ? ಬರಿಯ ಮಾತೇಕೆ ಎಂದು ಧೃಷ್ಟದ್ಯುಮ್ನನು ಯುದ್ಧಕ್ಕೆ ಹೊರಟನು.
ಅರ್ಥ:
ಪರಿ: ರೀತಿ; ರಣ: ಯುದ್ಧರಂಗ; ಅಕಟ: ಅಯ್ಯೋ; ಹಾರುವ: ಬ್ರಾಹ್ಮಣ; ಹೊಯ್ದು: ಹೊಡೆ; ಕೊಂದು: ಸಾಯಿಸು; ಬಿನುಗು: ಅಲ್ಪವ್ಯಕ್ತಿ; ಬಿಚ್ಚಟೆ: ವಿಸ್ತಾರ; ಬಲ್ಲೆ: ತಿಳಿ; ಬಲುಹು: ಶಕ್ತಿ; ಈಶ್ವರ: ಶಂಕರ; ಹರಿಮೇಖಳೆ: ರತ್ನದ ಡಾಬು; ಅನುವು: ಅನುಕೂಲ;
ಪದವಿಂಗಡಣೆ:
ನಿಲ್ಲು +ಫಲುಗುಣ +ನಿನ್ನ +ಪರಿಯಂತ್
ಎಲ್ಲಿಯದು +ರಣವ್+ಅಕಟ +ಹಾರುವನ್
ಅಲ್ಲಿ +ಕೆಲಬರ +ಹೊಯ್ದು +ಕೊಂದನು +ಬಿನುಗು +ಬಿಚ್ಚಟೆಯ
ಬಲ್ಲೆನಾತನ+ ಬಲುಹನ್+ಈಶ್ವರನ್
ಅಲ್ಲಿ +ಹರಿಮೇಖಳೆಯ+ ಸಾಕಿನ್
ಎಲ್ಲವೇತಕೆ+ಎನುತ +ಧೃಷ್ಟದ್ಯುಮ್ನನ್+ಅನುವಾದ
ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಿನುಗು ಬಿಚ್ಚಟೆಯ ಬಲ್ಲೆನಾತನ ಬಲುಹನೀಶ್ವರನಲ್ಲಿ