ಆದರಿನೀ ಕೌರವನ ತೊಡೆಗಳ
ಸದೆದನನ್ಯಾಯದಲಿ ನಿನ್ನವ
ನಿದಕೆ ಸೈರಿಸಬಹುದೆ ಹೇಳೈ ಧರ್ಮನಿರ್ಣಯವ
ಮದಮುಖನ ಭುಜಬಲವ ನೋಡುವ
ವಿದು ವಿಕಾರವಲಾ ಎನುತ ಮುರು
ಚಿದನು ಬಲ ಬಲಗಯ್ಯನುರವಣಿಸಿದನು ಖಾತಿಯಲಿ (ಗದಾ ಪರ್ವ, ೮ ಸಂಧಿ, ೩೧ ಪದ್ಯ)
ತಾತ್ಪರ್ಯ:
ಬಲರಾಮನು ಕೃಷ್ಣನಿಗೆ ಉತ್ತರಿಸುತ್ತಾ, ಈ ಭೀಮನು ಅನ್ಯಾಯದಿಂದ ಕೌರವನ ತೊಡೆಗಳನ್ನು ಕತ್ತರಿಸಿದ್ದಾನೆ. ಈ ಅಧರ್ಮವನ್ನು ನಾನು ಹೇಗೆ ಸಹಿಸಲಿ? ಮದಿಸಿದ ಈ ಭೀಮನ ಭುಜಬಲವೆಷ್ಟಿದೆ ಎಂದು ನೋಡಿಕೊಳ್ಳುತ್ತೇನೆ. ಅವನ ವರ್ತನೆ ವಿಕಾರವಾದದ್ದು ಎಂದು ಬಲಗೈಯನ್ನು ಬಿಡಿಸಿಕೊಂಡು ಕೋಪದಿಂದ ಭೀಮನತ್ತ ಹೋದನು.
ಅರ್ಥ:
ತೊಡೆ: ಜಂಘೆ; ಸದೆದು: ನಾಶಮಾಡು; ಅನ್ಯಾಯ: ಸರಿಯಲ್ಲದ ರೀತಿ; ಸೈರಿಸು: ತಾಳು; ನಿರ್ಣಯ: ನಿರ್ಧಾರ; ಧರ್ಮ: ಧಾರಣೆ ಮಾಡಿದುದು; ಮದಮುಖ: ಅಹಂಕಾರಿ; ಭುಜಬಲ: ಶಕ್ತಿ, ಪರಾಕ್ರಮ; ನೋಡು: ವೀಕ್ಷಿಸು; ವಿಕಾರ: ರೂಪಾಂತರ; ಮುರುಚು: ಬಿಡಿಸಿಕೊಳ್ಳು; ಬಲ: ಬಲರಾಮ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಖಾತಿ: ಕೋಪ;
ಪದವಿಂಗಡಣೆ:
ಆದರಿನೀ +ಕೌರವನ +ತೊಡೆಗಳ
ಸದೆದನ್+ ಅನ್ಯಾಯದಲಿ +ನಿನ್ನವನ್
ಇದಕೆ +ಸೈರಿಸಬಹುದೆ +ಹೇಳೈ +ಧರ್ಮ+ನಿರ್ಣಯವ
ಮದಮುಖನ+ ಭುಜಬಲವ +ನೋಡುವವ್
ಇದು +ವಿಕಾರವಲಾ +ಎನುತ +ಮುರು
ಚಿದನು +ಬಲ +ಬಲಗಯ್ಯನ್+ಉರವಣಿಸಿದನು +ಖಾತಿಯಲಿ
ಅಚ್ಚರಿ:
(೧) ಭೀಮನನ್ನು ಮದಮುಖ (ಅಹಂಕಾರಿ) ಎಂದು ಕರೆದಿರುವುದು
(೨) ಬಲ ಪದದ ಬಳಕೆ – ಮುರುಚಿದನು ಬಲ ಬಲಗಯ್ಯನುರವಣಿಸಿದನು