ಪದ್ಯ ೨೨: ಊರಿನ ಜನರು ಬ್ರಹ್ಮನನ್ನೇಕೆ ಬಯ್ದರು?

ಗಣಿಕೆಯರನೇಕಾದಶಾಕ್ಷೊ
ಹಿಣಿಯ ನೃಪರಾಣಿಯರನಾ ಪ
ಟ್ಟಣ ಜನದ ಪರಿಜನದ ಬಹುಕಾಂತಾ ಕದಂಬಕವ
ರಣಮಹೀದರುಶನಕೆ ಬಹು ಸಂ
ದಣಿಯ ಕಂಡರು ಧರ್ಮಸುತನಿ
ನ್ನುಣಲಿ ಧರಣಿಯನೆಂದು ಸುಯ್ದರು ಬಯ್ದು ಕಮಲಜನ (ಗದಾ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಏಕಾದಶಾಕ್ಷೋಣಿಯ ಸೈನ್ಯದಲ್ಲಿದ್ದ ರಾಜರೆಲ್ಲರ ರಾಣಿಯರು, ಪಟ್ಟಣದ ಸ್ತ್ರೀಗಳ ಗುಂಪು, ಗಣಿಕೆಯರು ಇವರೆಲ್ಲರೂ ರಣರಮ್ಗಕ್ಕೆ ಬರುವುದನ್ನು ಅವರು ಕಂಡು, ಇನ್ನು ಧರ್ಮಜನೇ ಈ ಭೂಮಿಯನ್ನು ಅನುಭವಿಸಲಿ, ಎಂದು ಉದ್ಗರಿಸಿ, ನಿಟ್ಟುಸಿರು ಬಿಟ್ಟು ಹಣೆಯ ಬರಹವನ್ನು ಬರೆದ ಚತುರ್ಮುಖ ಬ್ರಹ್ಮನನ್ನು ಬೈದರು.

ಅರ್ಥ:
ಗಣಿಕೆ: ವೇಶ್ಯೆ; ಏಕಾದಶ: ಹನ್ನೊಂದು ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನೃಪ: ರಾಜ; ರಾಣಿ: ರಸೈ; ಪಟ್ಟಣ: ಊರು; ಜನ: ಮನುಷ್ಯರ ಗುಂಪು; ಪರಿಜನ: ಬಂಧುಜನ; ಬಹು: ಬಹಳ; ಕಾಂತಾ: ಹೆಣ್ಣು; ಕದಂಬ: ಗುಂಪು; ರಣ: ಯುದ್ಧ; ರಣಮಹೀ: ರಣಭೂಮಿ; ; ದರುಶನ: ನೋಟ; ಸಂದಣಿ: ಗುಂಪು; ಕಂಡು: ನೋಡು; ಸುತ: ಮಗ; ಉಣು: ಊಟಮಾಡು; ಧರಣಿ: ಭೂಮಿ; ಸುಯ್ದು: ನಿಟ್ಟುಸಿರು; ಬಯ್ದು: ಜರಿ, ಹಂಗಿಸು; ಕಮಲಜ: ಬ್ರಹ್ಮ ;

ಪದವಿಂಗಡಣೆ:
ಗಣಿಕೆಯರನ್+ಏಕಾದಶ+ಅಕ್ಷೊ
ಹಿಣಿಯ +ನೃಪ+ರಾಣಿಯರನ್ +ಆ+ ಪ
ಟ್ಟಣ +ಜನದ +ಪರಿಜನದ +ಬಹು+ಕಾಂತಾ +ಕದಂಬಕವ
ರಣಮಹೀ+ದರುಶನಕೆ +ಬಹು +ಸಂ
ದಣಿಯ+ ಕಂಡರು +ಧರ್ಮಸುತನಿನ್
ಉಣಲಿ +ಧರಣಿಯನೆಂದು +ಸುಯ್ದರು +ಬಯ್ದು +ಕಮಲಜನ

ಅಚ್ಚರಿ:
(೧) ಸುಯ್ದರು, ಬಯ್ದು – ಪದಗಳ ಬಳಕೆ
(೨) ಜನ, ಪರಿಜನ – ಜನ ಪದದ ಬಳಕೆ

ಪದ್ಯ ೩೯: ದೇವತೆಗಳು ಯಾರ ಮುಡಿಗೆ ಹೂ ಮಳೆಗರೆದರು?

ಅರಸ ಕೇಳಾಶ್ಚರಿಯವನು ನಿ
ಮ್ಮರಸನಾಹವ ಸಫಲ ಸುರಕುಲ
ವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ
ಅರಿನೃಪರು ತಲೆಗುತ್ತಿದರು ಮುರ
ಹರ ಯುಧಿಷ್ಠಿರ ಪಾರ್ಥ ಯಮಳರು
ಬೆರಲ ಮೂಗಿನಲಿದ್ದು ಸುಯ್ದರು ಬಯ್ದು ದುಷ್ಕೃತವ (ಗದಾ ಪರ್ವ, ೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ಆಶ್ಚರ್ಯಕರವಾದ ಸಂಗತಿಯನ್ನು ಕೇಳು. ಕೌರವನು ಯುದ್ಧದಲ್ಲಿ ಸಫಲನಾದನು. ಕೌರವನ ಸಿರಿಮುಡಿಗೆ ದೇವತೆಗಳು ಹೂ ಮಳೆಗರೆದರು. ವೈರಿರಾಜರು ತಲೆ ತಗ್ಗಿಸಿದರು. ಶ್ರೀಕೃಷ್ಣನೂ, ಪಾಂಡವರೂ ಮೂಗಿನ ಮೇಲೆ ಬೆರಳಿಟ್ಟು ನಿಟ್ಟುಸಿರುಗರೆದು ತಮ್ಮ ಪಾಪ ಕರ್ಮವನ್ನು ಬೈದುಕೊಂಡರು.

ಅರ್ಥ:
ಅರಸ: ರಾಜ; ಆಶ್ಚರಿಯ: ಅದ್ಭುತ; ಅರಸ: ರಾಜ; ಆಹವ: ಯುದ್ಧ; ಸಫಲ: ಫಲಕಾರಿಯಾದ; ಸುರಕುಲ: ದೇವತೆಗಳ ಗುಂಪು; ಅರಳ: ಹೂವು; ಮಳೆ: ವರ್ಶ; ಸಿರಿಮುಡಿ: ಶ್ರೇಷ್ಠವಾದ ಶಿರ; ಅರಿ: ವೈರಿ; ನೃಪ: ರಾಜ; ತಲೆ: ಶಿರ; ಕುತ್ತು: ತಗ್ಗಿಸು; ಮುರಹರ: ಕೃಷ್ಣ; ಯಮಳ: ಅವಳಿ ಮಕ್ಕಳು; ಬೆರಳು: ಅಂಗುಲಿ; ಮೂಗು: ನಾಸಿಕ; ಸುಯ್ದು: ನಿಟ್ಟುಸಿರು; ಬಯ್ದು: ಜರೆದು; ದುಷ್ಕೃತ: ಕೆಟ್ಟ ಕೆಲಸ, ಕರ್ಮ;

ಪದವಿಂಗಡಣೆ:
ಅರಸ +ಕೇಳ್+ಆಶ್ಚರಿಯವನು +ನಿ
ಮ್ಮರಸನ್+ಆಹವ +ಸಫಲ+ ಸುರಕುಲವ್
ಅರಳ +ಮಳೆಗರೆದುದು +ಕಣಾ +ಕುರುಪತಿಯ +ಸಿರಿಮುಡಿಗೆ
ಅರಿ+ನೃಪರು +ತಲೆಗುತ್ತಿದರು +ಮುರ
ಹರ +ಯುಧಿಷ್ಠಿರ +ಪಾರ್ಥ +ಯಮಳರು
ಬೆರಳ+ ಮೂಗಿನಲಿದ್ದು+ ಸುಯ್ದರು+ ಬಯ್ದು +ದುಷ್ಕೃತವ

ಅಚ್ಚರಿ:
(೧) ಅರಸ, ನೃಪ -ಸಮಾನಾರ್ಥಕ ಪದ
(೨) ಜಯವನ್ನು ಆಚರಿಸಿದ ಪರಿ – ಸುರಕುಲವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ

ಪದ್ಯ ೧೪: ಸಂಜಯನು ಯಾರ ನಡಿಗೆಯನ್ನು ನೋಡಿದನು – ೭?

ಕಡಿದ ಕೈದುಗಳೊಟ್ಟಿಲಲಿ ತನಿ
ಗೆಡೆದ ಗಾಲಿಯ ಹಾಯ್ಕಿ ಮೆಲ್ಲಡಿ
ಯಿಡುತ ಹಜ್ಜೆಯ ನೆಣದ ಕೆಸರಿಗೆ ಛತ್ರಚಮರಿಗಳ
ಅಡಸಿ ಹಜ್ಜೆಯನಿಡುತ ರಕುತದ
ಮಡುವನೆಡಬಲಕಿಕ್ಕಿ ಮೆಲ್ಲನೆ
ನಡೆದು ದೈವವ ಬಯ್ದು ಬಯ್ದಡಿಗಡಿಗೆ ಸುಯ್ವವನ (ಗದಾ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಮುರಿದು ಬಿದ್ದ ಆಯುಧಗಳ ರಾಶಿಯಲ್ಲಿ ಗಾಲಿಯನ್ನು ಹಾಕಿ ಅದರ ಮೇಲೆ ಕಾಲಿಡುತ್ತಾ, ಎರಡು ಹೆಜ್ಜೆ ದೂರದಲ್ಲಿ ಕೆಸರಿರಲು ಅಲ್ಲಿ ಛತ್ರ ಚಾಮರಗಳನ್ನು ಹಾಕಿ ಕಾಲಿಡುತ್ತಾ, ರಕ್ತದ ಮಡುಗಳನ್ನು ಎಡಕ್ಕೆ ಬಲಕ್ಕೆ ಬಿಟ್ಟು ಮೆಲ್ಲನೆ ನಡೆಯುತ್ತಾ, ಹೆಜ್ಜೆ ಹೆಜ್ಜೆಗೂ ದೈವ ವಿಧಿಯನ್ನು ಬಯ್ಯುತ್ತಾ ನಿಟ್ಟುಸಿರು ಬಿಡುವವನನ್ನು ಸಂಜಯನು ನೋಡಿದನು.

ಅರ್ಥ:
ಕಡಿ: ಸೀಳು; ಕೈದು: ಆಯುಧ; ತನಿ: ಹೆಚ್ಚಾಗು, ಅತಿಶಯವಾಗು; ಕೆಡೆ: ಬೀಳು, ಕುಸಿ; ಗಾಲಿ: ಚಕ್ರ; ಹಾಯ್ಕು: ಹೊಡೆ; ಮೆಲ್ಲಡಿ: ಮೃದುವಾದ ಪಾದ, ಕೋಮಲವಾದ ಅಡಿ; ಹಜ್ಜೆ: ಪಾದ; ನೆಣ: ಕೊಬ್ಬು, ಮೇದಸ್ಸು; ಕೆಸರು: ರಾಡಿ, ಪಂಕ; ಛತ್ರ: ಕೊಡೆ; ಚಮರಿ: ಚಾಮರ; ಅಡಸು: ಬಿಗಿಯಾಗಿ ಒತ್ತು; ರಕುತ: ನೆತ್ತರು; ಮಡು: ಕೊಳ, ಸರೋವರ; ಎಡಬಲ: ಅಕ್ಕಪಕ್ಕ; ಮೆಲ್ಲನೆ: ನಿಧಾನ; ದೈವ: ಭಗವಂತ; ಬಯ್ದು: ಜರೆ; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ಸುಯ್: ನಿಟ್ಟುಸಿರು;

ಪದವಿಂಗಡಣೆ:
ಕಡಿದ +ಕೈದುಗಳ್+ಒಟ್ಟಿಲಲಿ +ತನಿ
ಕೆಡೆದ +ಗಾಲಿಯ +ಹಾಯ್ಕಿ +ಮೆಲ್ಲಡಿ
ಯಿಡುತ +ಹಜ್ಜೆಯ +ನೆಣದ +ಕೆಸರಿಗೆ+ ಛತ್ರ+ಚಮರಿಗಳ
ಅಡಸಿ +ಹಜ್ಜೆಯನಿಡುತ +ರಕುತದ
ಮಡುವನ್+ಎಡಬಲಕಿಕ್ಕಿ +ಮೆಲ್ಲನೆ
ನಡೆದು +ದೈವವ +ಬಯ್ದು +ಬಯ್ದ್+ಅಡಿಗಡಿಗೆ+ ಸುಯ್ವವನ

ಅಚ್ಚರಿ:
(೧) ಎಡಬಲ, ಅಡಿಗಡಿ, ಅಡಿಯಿಡು – ಪದಗಳ ಬಳಕೆ

ಪದ್ಯ ೬೦: ಕೃಷ್ಣನು ಧರ್ಮಜನಿಗೆ ಏನು ಹೇಳಿದನು?

ಕೈದಣಿಯೆ ವಸುದೇವನಳಿಯನ
ಮೈದಡವಿದನು ಮಗನೆ ಬನದೊಳ
ಗೊಯ್ದು ವಿಧಿ ಬಂಧಿಸಿತಲಾ ಸಾಕಿನ್ನು ದೈವವನು
ಬಯ್ದು ಮಾಡುವುದೇನು ದ್ರೌಪದಿ
ಯೈದೆತನವುಂಟಾಗೆ ದುರಿತವ
ಕೊಯ್ದು ನರಲೋಕಕ್ಕೆ ಸುಳಿದಿರಿ ಎಮ್ಮ ಪುಣ್ಯದೊಳು (ವಿರಾಟ ಪರ್ವ, ೧೧ ಸಂಧಿ, ೬೦ ಪದ್ಯ)

ತಾತ್ಪರ್ಯ:
ವಸುದೇವನು ಮತ್ತೆ ಮತ್ತೆ ಯುಧಿಷ್ಥಿರನ ಮೈದಡವಿ ಮಗು, ವಿಧಿಯು ನಿನ್ನನ್ನು ವನವಾಸದಲ್ಲಿ ಬಂಧಿಸಿ ಬಿಟ್ಟಿತು, ದೈವವನ್ನು ಬೈದು ಏನು ಪ್ರಯೋಜನ! ದ್ರೌಪದಿಯ ಮುತ್ತೈದೆ ಭಾಗ್ಯದ ದೆಸೆಯಿಮ್ದ ನೀವು ನಿಮ್ಮ ಪೂರ್ವಜನ್ಮದ ಪಾಪ ಫಲವನ್ನು ಮೀರಿ, ನಮ್ಮ ಪುಣ್ಯದ ದೆಸೆಯಿಂದ ಮತ್ತೆ ಬಂದಿರಿ ಎಂದನು.

ಅರ್ಥ:
ಕೈ: ಹಸ್ತ; ದಣಿ: ಆಯಾಸ; ಅಳಿಯ: ಸೋದರಿಯ ಮಗ; ಮೈದಡವಿ: ಮೈಯನ್ನು ತಟ್ಟು; ಮಗ: ಸುತ; ಬನ: ಕಾಡು; ಒಯ್ದು: ತೆರಳು; ವಿಧಿ: ಆಜ್ಞೆ, ಆದೇಶ, ನಿಯಮ; ಬಂಧಿಸು: ಕಟ್ಟು, ಬಂಧ; ಸಾಕು: ನಿಲ್ಲು; ದೈವ: ಭಗವಂತ; ಬಯ್ದು: ತೆಗಳು; ಐದು: ಬಂದು ಸೇರು; ದುರಿತ: ಪಾಪ, ಪಾತಕ; ನರಲೋಕ: ಪಾತಾಳಲೋಕ; ಸುಳಿ: ತೀಡು, ತೆರಳು; ಪುಣ್ಯ: ಸದಾಚಾರ;

ಪದವಿಂಗಡಣೆ:
ಕೈ+ದಣಿಯೆ +ವಸುದೇವನ್+ಅಳಿಯನ
ಮೈದಡವಿದನು +ಮಗನೆ+ ಬನದೊಳಗ್
ಒಯ್ದು +ವಿಧಿ +ಬಂಧಿಸಿತಲಾ +ಸಾಕಿನ್ನು +ದೈವವನು
ಬಯ್ದು +ಮಾಡುವುದೇನು +ದ್ರೌಪದಿ
ಯೈದೆತನವುಂಟಾಗೆ +ದುರಿತವ
ಕೊಯ್ದು +ನರಲೋಕಕ್ಕೆ +ಸುಳಿದಿರಿ +ಎಮ್ಮ +ಪುಣ್ಯದೊಳು

ಅಚ್ಚರಿ:
(೧) ಯುಧಿಷ್ಠಿರನನ್ನು ವಸುದೇವನಳಿಯ ಎಂದು ಕರೆದಿರುವುದು