ಪದ್ಯ ೩೯: ಕೌರವರನ್ನು ಕೊಲ್ಲಿಸಲು ಯಾರು ಉಪಾಯ ಮಾಡಿದರೆಂದು ಕೌರವನು ಹೇಳಿದನು?

ಬಣಗುಗಳು ಭೀಮಾರ್ಜುನರು ಕಾ
ರಣಿಕ ನೀ ನಡುವಾಯಿ ಧರ್ಮದ
ಕಣಿ ಯುಧಿಷ್ಠಿರನೆತ್ತಬಲ್ಲನು ನಿನ್ನ ಮಾಯೆಗಳ
ಸೆಣಸನಿಕ್ಕಿದೆ ನಮ್ಮೊಳಗೆ ಧಾ
ರುಣಿಯ ಭಾರವ ಬಿಡಿಸಲೋಸುಗ
ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆಯೆಂದ (ಗದಾ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ಭೀಮಾರ್ಜುನರಾದರೋ ಅಲ್ಪ ವ್ಯಕ್ತಿಗಳು, ನೀನು ನಡುವೆ ಮಾತಾಡಿ ನಮ್ಮಲಿ ವೈರವನ್ನು ಬಿತ್ತಿಸಿದೆ. ಧರ್ಮದ ಗಣಿಯಾದ ಯುಧಿಷ್ಠಿರನಿಗೆ ನಿನ್ನ ಮೋಸವೇನು ತಿಳಿದುದು? ಭೂಮಿಯ ಭಾರವನ್ನು ಕಳೆಯಲು ನಮ್ಮಲ್ಲಿ ಯುದ್ಧವನ್ನು ಮಾಡಿಸಿ ನಮ್ಮನ್ನು ಬೇಟೆಯಾಡಿಸಿದೆ ಎಂದು ದುರ್ಯೋಧನನು ಕೃಷ್ಣನನ್ನು ಜರೆದನು.

ಅರ್ಥ:
ಬಣಗು: ಕೀಳು, ಅಲ್ಪ; ಕಾರಣಿಕ: ಅವತಾರ ಪುರುಷ, ವಿಮರ್ಶಕ; ನಡುವಾಯಿ: ಮಧ್ಯ ಮಾತಾಡು; ಕಣಿ: ಗಣಿ, ಆಕರ, ನೆಲೆ; ಬಲ್ಲನು: ತಿಳಿದನು; ಮಾಯೆ: ಗಾರುಡಿ; ಸೆಣಸು: ಹೋರಾಡು; ಧಾರುಣಿ: ಭೂಮಿ; ಭಾರ: ಹೊರೆ; ಬಿಡಿಸು: ಕಳಚು, ಸಡಿಲಿಸು; ಓಸುಗ: ಓಸ್ಕರ; ರಣ: ಯುದ್ಧ; ಹೊತ್ತಿಸು: ಹಚ್ಚು; ಬೇಂಟೆ: ಬೇಟೆ, ಕೊಲ್ಲು;

ಪದವಿಂಗಡಣೆ:
ಬಣಗುಗಳು +ಭೀಮಾರ್ಜುನರು +ಕಾ
ರಣಿಕ +ನೀ +ನಡುವಾಯಿ +ಧರ್ಮದ
ಕಣಿ +ಯುಧಿಷ್ಠಿರನ್+ಎತ್ತಬಲ್ಲನು+ ನಿನ್ನ+ ಮಾಯೆಗಳ
ಸೆಣಸನಿಕ್ಕಿದೆ +ನಮ್ಮೊಳಗೆ+ ಧಾ
ರುಣಿಯ +ಭಾರವ+ ಬಿಡಿಸಲೋಸುಗ
ರಣವ +ಹೊತ್ತಿಸಿ+ ನಮ್ಮ +ಬೇಂಟೆಯನ್+ಆಡಿಸಿದೆಯೆಂದ

ಅಚ್ಚರಿ:
(೧) ಯುಧಿಷ್ಠಿರನನ್ನು ಹೊಗಳುವ ಪರಿ – ಧರ್ಮದ ಕಣಿ
(೨) ಯುದ್ಧವನ್ನು ಮಾಡಿಸಿದ ಕಾರಣ – ಧಾರುಣಿಯ ಭಾರವ ಬಿಡಿಸಲೋಸುಗ ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆ

ಪದ್ಯ ೩೮: ಘಟೋತ್ಕಚನ ಮುಂದೆ ಯಾರು ನಿಲ್ಲಬಲ್ಲರು?

ನಿಲುವಡಸುರನ ಮುಂದೆ ಕರ್ಣನೆ
ನಿಲಲು ಬೇಹುದು ಕರ್ಣನುರುಬೆಗೆ
ನಿಲುವಡೀಯಮರಾರಿಗೊಪ್ಪುವುದೈ ಮಹಾದೇವ
ಉಳಿದ ಭೂರಿಯ ಬಣಗುಗಳು ವೆ
ಗ್ಗಳೆಯವೆರಸರಿಗೆ ನೋಂತರೇ ಕುರು
ಬಲದೊಳರಿಬಲದೊಳಗೆ ಸರಿಯಿನ್ನಿವರಿಗಿಲ್ಲೆಂದ (ದ್ರೋಣ ಪರ್ವ, ೧೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಘಟೋತ್ಕಚನ ಮುಂದೆ ನಿಂತರೆ ಕರ್ಣನೇ ನಿಲ್ಲಬೇಕು. ಶಿವ ಶಿವಾ, ಕರ್ಣನ ದಾಳಿಯನ್ನು ಸೈರಿಸಿ ನಿಲ್ಲಲು ಘಟೋತ್ಕಚನಿಗೆ ಮಾತ್ರ ಸಾಧ್ಯ, ಉಳಿದ ಮಹಾವೀರರೆನ್ನಿಸಿಕೊಳ್ಳುವವರು ಕೇವಲ ಶಕ್ತಿದರಿದ್ರರು, ವೀರರೆನ್ನಿಸಿಕೊಳ್ಳುವುದಕ್ಕೆ ಅನರ್ಹರು. ಇವರಿಗೆ ಸರಿಯಾದವರು ಉಭಯ ಸೈನ್ಯಗಳಲ್ಲೂ ಇಲ್ಲ.

ಅರ್ಥ:
ನಿಲುವು: ನಿಲ್ಲು; ಅಡ್: ಅಡ್ಡ, ನಡುವೆ; ಅಸುರ: ರಾಕ್ಷಸ; ಮುಂದೆ: ಎದುರು; ಬೇಹುದು: ಬೇಕು; ಉರುಬೆ: ಅಬ್ಬರ; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ಒಪ್ಪು: ಒಪ್ಪಿಗೆ, ಸಮ್ಮತಿ; ಉಳಿದ: ಮಿಕ್ಕ; ಭೂರಿ: ಹೆಚ್ಚಾದ, ಅಧಿಕವಾದ; ಬಣಗು: ಅಲ್ಪವ್ಯಕ್ತಿ, ತಿಳಿಗೇಡಿ; ವೆಗ್ಗಳೆ: ಶ್ರೇಷ್ಠ; ಬಲ: ಸೈನ್ಯ; ಅರಿ: ವೈರಿ;

ಪದವಿಂಗಡಣೆ:
ನಿಲುವಡ್+ಅಸುರನ +ಮುಂದೆ +ಕರ್ಣನೆ
ನಿಲಲು +ಬೇಹುದು +ಕರ್ಣನ್+ಉರುಬೆಗೆ
ನಿಲುವಡ್+ಈ+ ಅಮರಾರಿಗ್+ಒಪ್ಪುವುದೈ +ಮಹಾದೇವ
ಉಳಿದ +ಭೂರಿಯ+ ಬಣಗುಗಳು+ ವೆ
ಗ್ಗಳೆಯವೆರಸರಿಗೆ +ನೋಂತರೇ+ ಕುರು
ಬಲದೊಳ್+ಅರಿಬಲದೊಳಗೆ +ಸರಿಯಿನ್ನಿವರಿಗಿಲ್ಲೆಂದ

ಅಚ್ಚರಿ:
(೧) ಕುರುಬಲ, ಅರಿಬಲ – ಬಲ ಪದದ ಬಳಕೆ
(೨) ನಿಲುವಡ್, ನಿಲಲು – ೧-೩ ಸಾಲಿನ ಮೊದಲ ಪದಗಳು

ಪದ್ಯ ೧೬: ದ್ರೋಣರು ತಮ್ಮ ಹಿರಿಮೆಯನ್ನು ಭೀಮನೆದುರು ಹೇಗೆ ಹೇಳಿದರು?

ಫಡ ಫಡೆಲವೋ ಭೀಮ ಬಣಗುಗ
ಳೊಡನೆ ಸರಿಗಂಡೆನ್ನ ಬಗೆಯದೆ
ಕಡುಗುವೈ ಕಾಳೆಗಕೆ ತಪ್ಪೇನಾದಡನುವಾಗು
ಒಡಲನೀವೆನು ವಿನಯದೆಡೆಗವ
ಗಡಿಸಿದರೆ ಕೊಲುವೆನು ರಿಪುವ್ರಜ
ಮೃಡನರಿಯಾ ದ್ರೋಣ ತಾನೆನುತೆಚ್ಚನನಿಲಜನ (ದ್ರೋಣ ಪರ್ವ, ೧೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೋಣನು ಭೀಮನಿಗುತ್ತರಿಸುತ್ತಾ, ಎಲವೋ ಭೀಮ, ಕೈಲಾಗದ ಕ್ಷುಲ್ಲಕರಿಗೆ ನಾನು ಸಮವೆಂದು ತಿಳಿದು ವಿಚಾರಿಸದೆ ಯುದ್ಧಕ್ಕೆ ಬರುವೆಯಾ? ತಪ್ಪೇನು, ಸಿದ್ಧನಾಗು, ವಿನಯಕ್ಕೆ ನನ್ನ ದೇಹವನ್ನೇ ಕೊಡುತ್ತೇನೆ, ಪ್ರತಿಭಟಿಸಿದರೆ ಕೊಲ್ಲುತ್ತೇನೆ, ಶತ್ರುಗಳಿಗೆ ರುದ್ರನಾದ ದ್ರೋಣ ನಾನು ಎಂದು ಭೀಮನ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಬಣಗು: ಅಲ್ಪವ್ಯಕ್ತಿ; ಕಂಡು: ನೋಡು; ಬಗೆ: ತಿಳಿ; ಕಡುಗು: ಶಕ್ತಿಗುಂದು; ಕಾಳೆಗ: ಯುದ್ಧ; ಅನುವು: ರೀತಿ, ಅವಕಾಶ; ಒಡಲು: ದೇಹ; ವಿನಯ: ಸೌಜನ್ಯ; ಅವಗಡಿಸು: ಕಡೆಗಣಿಸು; ಕೊಲು: ಸಾಯಿಸು; ರಿಪು: ವೈರಿ; ವ್ರಜ: ಗುಂಪು; ಮೃಡ: ಶಿವ; ಅರಿ: ತಿಳಿ; ಎಚ್ಚು: ಬಾಣ ಪ್ರಯೋಗ ಮಾಡು; ಅನಿಲಜ: ವಾಯುಪುತ್ರ (ಭೀಮ);

ಪದವಿಂಗಡಣೆ:
ಫಡ +ಫಡ+ಎಲವೋ +ಭೀಮ +ಬಣಗುಗಳ್
ಒಡನೆ +ಸರಿಕಂಡ್+ಎನ್ನ +ಬಗೆಯದೆ
ಕಡುಗುವೈ +ಕಾಳೆಗಕೆ +ತಪ್ಪೇನ್+ಆದಡ್+ಅನುವಾಗು
ಒಡಲನ್+ಈವೆನು +ವಿನಯದೆಡೆಗ್+ಅವ
ಗಡಿಸಿದರೆ +ಕೊಲುವೆನು +ರಿಪು+ವ್ರಜ
ಮೃಡನರಿಯಾ +ದ್ರೋಣ +ತಾನೆನುತ್+ಎಚ್ಚನ್+ಅನಿಲಜನ

ಅಚ್ಚರಿ:
(೧) ದ್ರೋಣರು ತಮ್ಮನ್ನು ಹೊಗಳಿಕೊಂಡ ಪರಿ – ರಿಪುವ್ರಜ ಮೃಡನರಿಯಾ ದ್ರೋಣ ತಾನ್

ಪದ್ಯ ೭: ಚತುರಂಗ ಸೇನೆಯು ಯಾರನ್ನು ಉರುಳಿಸಿದರು?

ಉರಿಯ ಚೂಣಿಯಲುಸುರು ಮೂಗಿನ
ಲುರವಣಿಸುತಿದೆ ಧರಣಿಪತಿ ಸು
ಸ್ಥಿರನು ಹೊಯ್ ಹೊಯ್ ಹೊಳಲ ಬೆದರಿಸಿ ಸುಲಿವ ಬಣಗುಗಳ
ಹರಿಯೆನಲು ಹೊರವಂಟು ಹೊಯ್ದರು
ತುರಗ ಗಜಘಟೆ ಬೀದಿವರಿದವು
ನೆರವಿದೊಳಸಿನ ಮನ್ನೆಯರ ಸೆಣಸಿದರು ಶೂಲದಲಿ (ದ್ರೋಣ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಬಿಸಿಯುಸಿರು ಮೂಗಿನಲ್ಲಿ ಉರಿಯಂತೆ ಹೊರಬರುತ್ತಿದೆ. ದೊರೆ ಸ್ಥಿರವಾಗಿದ್ಧಾನೆ, ಬೀಡನ್ನು ಬೆದರಿಸಿ ದೋಚುತ್ತಿರುವವರನ್ನು ಬಡಿದು ಹಾಕಿ ಎಂದು ಮಂತ್ರಿಗಲು ಆಜ್ಞೆ ಮಾಡಲು ಚತುರಂಗ ಸೇನೆಯು ಹೊರಟು ಗೊಂದಲ ಮಾಡುತ್ತಿದ್ದವರನ್ನು ಶೂಲದಿಂದ ತಿವಿದು ಉರುಳಿಸಿದರು.

ಅರ್ಥ:
ಉರಿ: ಬೆಂಕಿ; ಚೂಣಿ: ಮುಂದಿನ ಸಾಲು, ಮುಂಭಾಗ; ಉಸುರು: ಪ್ರಾಣ, ಹೇಳು; ಮೂಗು: ನಾಸಿಕ; ಉರವಣಿಸು: ಆತುರಿಸು; ಧರಣಿಪತಿ: ರಾಜ; ಸ್ಥಿರ: ಶಾಶ್ವತವಾದ; ಹೊಯ್: ಹೊಡೆ; ಹೊಳಲು: ಪ್ರಕಾಶ, ನಗರ; ಬೆದರಿಸು: ಹೆದರಿಸು; ಸುಲಿ: ಬಿಡಿಸು, ತೆಗೆ; ಬಣಗು: ಕೀಳು, ಅಲ್ಪ; ಹರಿ: ಸೀಳು; ಹೊರವಂಟು: ತೆರಳು; ಹೊಯ್ದು: ಹೊಡೆ; ತುರಗ: ಅಶ್ವ; ಗಜಘಟೆ: ಆನೆಗಳ ಗುಂಪು; ಬೀದಿ: ಮಾರ್ಗ; ನೆರವಿ: ಗುಂಪು; ಅಸಿ: ಕತ್ತಿ, ಖಡ್ಗ; ಮನ್ನೆಯ: ಮೆಚ್ಚಿನ; ಸೆಣಸು: ಹೋರಾಡು; ಶೂಲ: ಈಟಿ, ಶಿವನ ತ್ರಿಶೂಲ;

ಪದವಿಂಗಡಣೆ:
ಉರಿಯ +ಚೂಣಿಯಲ್+ಉಸುರು +ಮೂಗಿನಲ್
ಉರವಣಿಸುತಿದೆ +ಧರಣಿಪತಿ +ಸು
ಸ್ಥಿರನು +ಹೊಯ್ +ಹೊಯ್ +ಹೊಳಲ +ಬೆದರಿಸಿ +ಸುಲಿವ +ಬಣಗುಗಳ
ಹರಿಯೆನಲು +ಹೊರವಂಟು +ಹೊಯ್ದರು
ತುರಗ+ ಗಜಘಟೆ +ಬೀದಿವರಿದವು
ನೆರವಿದೊಳ್+ಅಸಿನ +ಮನ್ನೆಯರ +ಸೆಣಸಿದರು +ಶೂಲದಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹರಿಯೆನಲು ಹೊರವಂಟು ಹೊಯ್ದರು

ಪದ್ಯ ೨೮: ಅಭಿಮನ್ಯುವಿನ ಬಗ್ಗೆ ಶ್ರೀಕೃಷ್ಣನು ಏನು ಹೇಳಿದನು?

ಗುಣಕೆ ಹುರುಡೇ ನಿನ್ನ ಮಗನೀ
ರಣವ ಬಗೆವನೆ ಸೂರ್ಯನಾರೋ
ಗಣೆಗೆ ಸೊಡರೇ ಸಾಕಿದೇತಕೆ ಬಯಲ ಭಂಡತನ
ಕೆಣಕು ನಡೆ ಸಮಸಪ್ತಕರನೀ
ಬಣಗುಗಳ ಕೊಂಬನ್ ಕುಮಾರಕ
ನಣಕವಲ್ಲೆಂದಸುರರಿಪು ತಿರುಹಿದನು ನಿಜರಥವ (ದ್ರೋಣ ಪರ್ವ, ೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಗುಣಕ್ಕೆ ಮತ್ಸರವೇ? ಅಭಿಮನ್ಯುವಿಗೆ ಈ ಯುದ್ಧವು ಒಂದು ಲೆಕ್ಕಕ್ಕಿದೆಯೇ? ಸೂರ್ಯನು ಊಟಮಾದುವಾಗ ದೀಪವನ್ನು ಹಚ್ಚಿಕೊಳ್ಳುವವನೇ? ಈ ನಾಚಿಕೆಗೇಡಿನ ಬುದ್ಧಿಯನ್ನು ಬಿಡು. ಸಮಸಪ್ತಕರೊಡನೆ ಯುದ್ಧಕ್ಕೆ ಹೋಗೋಣ, ಅಣಕದ ಮಾತಾಡುತ್ತಿಲ್ಲ. ಈ ಕ್ಷುಲ್ಲಕರನ್ನು ಅಭಿಮನ್ಯುವು ಲೆಕ್ಕಿಸುವುದಿಲ್ಲ ಎಂದು ಶ್ರೀಕೃಷ್ಣನು ಹೇಳಿದನು.

ಅರ್ಥ:
ಗುಣ: ನಡತೆ, ಸ್ವಭಾವ; ಹುರುಡು: ಪೈಪೋಟಿ, ಸ್ಪರ್ಧೆ; ಮಗ: ಪುತ್ರ; ರಣ: ಯುದ್ಧ; ಬಗೆ: ತಿಳಿ; ಸೂರ್ಯ: ರವಿ; ಆರೋಗಣೆ: ಊಟ, ಭೋಜನ; ಸೊಡರು: ದೀಪ; ಸಾಕು: ಕೊನೆ, ಅಂತ್ಯ; ಬಯಲ: ವ್ಯರ್ಥವಾದುದು; ಭಂಡ: ನಾಚಿಕೆ, ಲಜ್ಜೆ; ಕೆಣಕು: ಕೆರಳಿಸು; ನಡೆ: ಚಲಿಸು; ಸಮಸಪ್ತಕ: ಪ್ರತಿಜ್ಞೆ ಮಾಡಿ ಹೋರಾಡುವವರು; ಬಣ: ಗುಂಪು; ಕೊಂಬು: ಸಾಯಿಸು; ಕುಮಾರ: ಪುತ್ರ; ಅಣಕ: ಕುಚೋದ್ಯ; ಅಸುರರಿಪು: ಕೃಷ್ಣ; ತಿರುಹು: ತಿರುಗಿಸು; ರಥ: ಬಂಡಿ;

ಪದವಿಂಗಡಣೆ:
ಗುಣಕೆ +ಹುರುಡೇ +ನಿನ್ನ +ಮಗನ್+ಈ
ರಣವ +ಬಗೆವನೆ+ ಸೂರ್ಯನ್+ಆರೋ
ಗಣೆಗೆ +ಸೊಡರೇ +ಸಾಕಿದ್+ಏತಕೆ +ಬಯಲ +ಭಂಡತನ
ಕೆಣಕು +ನಡೆ +ಸಮಸಪ್ತಕರನ್+ಈ+
ಬಣಗುಗಳ+ ಕೊಂಬನೆ+ ಕುಮಾರಕನ್
ಅಣಕವಲ್ಲೆಂದ್+ಅಸುರರಿಪು+ ತಿರುಹಿದನು+ ನಿಜರಥವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೂರ್ಯನಾರೋಗಣೆಗೆ ಸೊಡರೇ

ಪದ್ಯ ೨೬: ಕರ್ಣನೇಕೆ ಶೂರನಲ್ಲ ಎಂದು ಶಲ್ಯನು ತಿಳಿದನು?

ಕ್ಷಣದೊಳೀಗಳೆ ಭೀಮ ಪಾರ್ಥರ
ರಣದೊಳಗೆ ತೋರುವೆನು ಕದಳಿಯ
ಹಣಿದವೋ ನಿನ್ನಾಳು ಕುದುರೆಯ ಕಾಣಲಹುದೀಗ
ಬಣಗು ನೀ ಭಾರಂಕ ಭಟನೊಳ
ಗಣಕಿಸುವೆ ಫಡ ಪಾಡನರಿಯದೆ
ಸೆಣಸಿದರೆ ನೀ ಶೂರನೆಂಬರೆ ಕರ್ಣ ಕೇಳೆಂದ (ಕರ್ಣ ಪರ್ವ, ೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಈ ಕ್ಷಣವೇ ನಾನು ಭೀಮಾರ್ಜುನರನ್ನು ತೋರಿಸುವೆ, ಅವರು ನಿನ್ನ ಸೈನ್ಯವನ್ನು ಬಾಳೆಯನ್ನು ಕತ್ತರಿಸಿದಂತೆ ಕಡಿದು ಹಾಕುತ್ತಾರೆ. ಕ್ಷುದ್ರನಾದ ನೀನು ಮಹಾಪರಾಕ್ರಮಿಯನ್ನು ಅಲ್ಲಗಳೆಯುತ್ತಿರುವೆ. ನಿನ್ನ ಪಾಡು ಏನಾದೀತೆಂಬುದನ್ನು ತಿಳಿಯದೆ ಯುದ್ಧಕ್ಕೆ ತೊಡಗಿದರೆ, ಕರ್ಣ, ನಿನ್ನನು ಶೂರನೆನ್ನುವರೇ?

ಅರ್ಥ:
ಕ್ಷಣ: ಈ ವೇಳೆ, ಅತ್ಯಲ್ಪ ವೇಳೆ; ರಣ: ಯುದ್ಧ; ತೋರು: ಗೋಚರ, ನೋಡು; ಕದಳಿ: ಬಾಳೆ; ಹಣಿ: ಬಾಗು, ಮಣಿ; ಆಳು: ಸೇವಕ; ಕುದುರೆ: ಅಶ್ವ; ಕಾಣಲು: ಕಾಣಲಾಗದು, ತೋರದು; ಬಣಗು: ಅಲ್ಪವ್ಯಕ್ತಿ; ಭಾರಾಂಕ: ಮಹಾಯುದ್ಧ; ಭಟ: ಸೈನಿಕ; ಫಡ: ಬೆಳೆದು ನಿಂತ ಜೋಳ; ಪಾಡು: ರೀತಿ, ಬಗೆ; ಅರಿ: ತಿಳಿ; ಸೆಣಸು: ಹೋರಾಡು; ಶೂರ: ಪರಾಕ್ರಮ; ಕೇಳು: ಆಲಿಸು; ಅಣಕಿಸು: ಮೂದಲಿಸು;

ಪದವಿಂಗಡಣೆ:
ಕ್ಷಣದೊಳ್+ಈಗಳೆ +ಭೀಮ +ಪಾರ್ಥರ
ರಣದೊಳಗೆ+ ತೋರುವೆನು +ಕದಳಿಯ
ಹಣಿದವೋ +ನಿನ್ನಾಳು +ಕುದುರೆಯ +ಕಾಣಲಹುದ್+ಈಗ
ಬಣಗು +ನೀ +ಭಾರಂಕ +ಭಟನೊಳಗ್
ಅಣಕಿಸುವೆ+ ಫಡ+ ಪಾಡನರಿಯದೆ
ಸೆಣಸಿದರೆ +ನೀ +ಶೂರನೆಂಬರೆ+ ಕರ್ಣ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕದಳಿಯ ಹಣಿದವೋ ನಿನ್ನಾಳು ಕುದುರೆಯ ಕಾಣಲಹುದೀಗ