ಪದ್ಯ ೪೬: ಸೈನ್ಯದವರು ಹೇಗೆ ಮುತ್ತಿಗೆ ಹಾಕಿದರು?

ಇತ್ತ ಪಡಿಬಲವಾಗಿ ಸಾವಿರ
ಮತ್ತಗಜಘಟೆ ಕೌರವೇಂದ್ರನ
ತೆತ್ತಿಗರು ತೂಳಿದರು ಪಾಂಚಾಲಪ್ರಬುದ್ಧಕರ
ಹತ್ತುಸಾವಿರ ಪಾಯದಳ ಹೊಗ
ರೆತ್ತಿದಲಗಿನ ಹೊಳಹಿನಂತಿರೆ
ಮುತ್ತಿತವನೀಪತಿಯ ಮೋಹರದೆರಡು ಬಾಹೆಯಲಿ (ಗದಾ ಪರ್ವ, ೧ ಸಂಧಿ, ೪೬ ಪದ್ಯ)

ತಾತ್ಪರ್ಯ:
ಇತ್ತ ಕೌರವನ ಆಶ್ರಿತರಾದ ಒಂದು ಸಾವಿರ ಆನೆಗಳ ಮೇಲಿದ್ದ ಜೋದರು ಪಾಂಚಾಲರನ್ನು ಪ್ರಬುದ್ಧಕರನ್ನು ಒತ್ತಿದರು. ಹತ್ತು ಸಾವಿರ ಪದಾತಿಗಳು ಹೊಳೆ ಹೊಳೆಯುವ ಅಲಗಿನಹಾಗೆ ರಾಜನ ಎರಡು ಪಕ್ಕದಲ್ಲೂ ಮುತ್ತಿದರು.

ಅರ್ಥ:
ಪಡಿಬಲ: ವೈರಿ ಸೇನೆ; ಸಾವಿರ: ಸಹಸ್ರ; ಮತ್ತ: ಅಮಲು, ಮದ; ಗಜಘಟೆ: ಆನೆಯ ಗುಂಪು; ತೆತ್ತು: ಕುಂದಣಿಸು, ಕೂಡಿಸು; ತೂಳು: ಆಕ್ರಮಣ; ಪಾಯದಳ: ಕಾಲಾಳು, ಸೈನಿಕ; ಹೊಗರು: ಕಾಂತಿ, ಪ್ರಕಾಶ; ಅಲಗು: ಆಯುಧದ ಮೊನೆ, ಕತ್ತಿ; ಹೊಳಹು: ಪ್ರಕಾಶ; ಮುತ್ತು: ಆವರಿಸು; ಅವನೀಪತಿ: ರಾಜ; ಮೋಹರ: ಯುದ್ಧ; ಬಾಹೆ: ಪಕ್ಕ, ಪಾರ್ಶ್ವ;

ಪದವಿಂಗಡಣೆ:
ಇತ್ತ+ ಪಡಿಬಲವಾಗಿ +ಸಾವಿರ
ಮತ್ತ+ಗಜ+ಘಟೆ +ಕೌರವೇಂದ್ರನ
ತೆತ್ತಿಗರು +ತೂಳಿದರು+ ಪಾಂಚಾಲ+ಪ್ರಬುದ್ಧಕರ
ಹತ್ತುಸಾವಿರ +ಪಾಯದಳ+ ಹೊಗರ್
ಎತ್ತಿದ್+ಅಲಗಿನ +ಹೊಳಹಿನಂತಿರೆ
ಮುತ್ತಿತ್+ಅವನೀಪತಿಯ +ಮೋಹರದ್+ಎರಡು +ಬಾಹೆಯಲಿ

ಅಚ್ಚರಿ:
(೧) ಇತ್ತ, ಮತ್ತ; ತೆತ್ತಿ, ಎತ್ತಿ, ಮುತ್ತಿ – ಪ್ರಾಸ ಪದಗಳು