ತಿರುವ ಕೊರಳಲಿ ತೊಡಿಸಲಾರದೆ
ತೆರಳಿದರು ಚತುರಂತ ಪೃಥ್ವೀ
ಶ್ವರರು ಮಾಗಧ ಚೈದ್ಯ ಮೊದಲಾದತುಳ ಭುಜಬಲರು
ತಿರುವನೇರಿಸಿ ಧನುವನುಗಿದ
ಬ್ಬರಿಸಿ ಗಗನದ ಯಂತ್ರಮತ್ಸ್ಯವ
ಮುರಿದ ಪಾಂಡವರರಸಿ ತೊತ್ತಹಳೇ ಶಿವಾ ಎಂದ (ಸಭಾ ಪರ್ವ, ೧೫ ಸಂಧಿ, ೪೦ ಪದ್ಯ)
ತಾತ್ಪರ್ಯ:
ದ್ರುಪದನ ಮಗಳ ಸ್ವಯಂವರದಲ್ಲಿ ಹೆದೆಯನ್ನು ಬಿಲ್ಲಿಗೆ ತೊಡಿಸಲಾಗದೆ ಜರಾಸಂಧ, ಶಿಶುಪಾಲ ಮೊದಲಾದವರೆಲ್ಲರೂ ಸೇರಿ, ನಾಲ್ಕುಸಮುದ್ರ ಪರ್ಯಂತ ರಾಜರೆಲ್ಲರೂ ಸೋತು ಹಿಂದಿರುಗಿದರು. ಆ ಬಿಲ್ಲಿಗೆ ಹೆದೆಯನ್ನೇರಿಸಿ ಆಕಾಶದಲ್ಲಿದ್ದ ಮತ್ಸ್ಯಯಂತ್ರವನ್ನು ಭೇದಿಸಿದ ಪಾಂಡವರ ಪತ್ನಿಯು ದಾಸಿಯಾಗುವಳೇ? ಶಿವ ಶಿವಾ ಎಂದು ವಿದುರನು ನೊಂದನು.
ಅರ್ಥ:
ತಿರುವ: ತಿರುಗುವ, ಚಲಿಸುವ; ಕೊರಳು: ಕುತ್ತಿಗೆ; ತೊಡು: ಬಾಣವನ್ನು ಹೂಡು; ತೆರಳು: ಹೋಗು, ನಡೆ; ಚತುರಂತ: ನಾಲ್ಕು ದಿಕ್ಕುಗಳಲ್ಲಿಯೂ; ಪೃಥ್ವಿ: ಭೂಮಿ; ಪೃಥ್ವೀಶ್ವರ: ರಾಜ; ಮಾಗಧ: ಜರಸಂಧ; ಚೈದ್ಯ: ಶಿಶುಪಾಲ; ಮೊದಲಾದ: ಮುಂತಾದ; ಅತುಳು: ಬಹಳ; ಭುಜಬಲ: ಪರಾಕ್ರಮಿ; ಧನು: ಬಿಲ್ಲು; ಉಗಿ: ಕಳಚು, ಹೊರದೂಡು; ಅಬ್ಬರ: ಅತಿಶಯ; ಗಗನ: ಆಗಸ; ಯಂತ್ರ: ಉಪಕರಣ; ಮತ್ಸ್ಯ: ಮೀನು; ಅರಸಿ: ರಾಣಿ; ತೊತ್ತು: ದಾಸಿ;
ಪದವಿಂಗಡಣೆ:
ತಿರುವ +ಕೊರಳಲಿ +ತೊಡಿಸಲಾರದೆ
ತೆರಳಿದರು +ಚತುರಂತ+ ಪೃಥ್ವೀ
ಶ್ವರರು +ಮಾಗಧ +ಚೈದ್ಯ +ಮೊದಲಾದ್+ಅತುಳ +ಭುಜಬಲರು
ತಿರುವನೇರಿಸಿ+ ಧನುವನ್+ಉಗಿದ್
ಅಬ್ಬರಿಸಿ +ಗಗನದ +ಯಂತ್ರ+ಮತ್ಸ್ಯವ
ಮುರಿದ+ ಪಾಂಡವರ್+ಅರಸಿ +ತೊತ್ತಹಳೇ +ಶಿವಾ +ಎಂದ
ಅಚ್ಚರಿ:
(೧) ತಿರುವ – ೧, ೪ ಸಾಲಿನ ಮೊದಲ ಪದ
(೨) ದ್ರೌಪದಿಯನ್ನು ಪಡೆಯುವುದು ಎಷ್ಟು ಕಷ್ಟ ಎಂದು ವಿವರಿಸುವ ಪದ್ಯ