ಪದ್ಯ ೪೦: ದ್ರೌಪದಿ ದಾಸಿಯಾಗಲು ಸಾಧ್ಯವೇ?

ತಿರುವ ಕೊರಳಲಿ ತೊಡಿಸಲಾರದೆ
ತೆರಳಿದರು ಚತುರಂತ ಪೃಥ್ವೀ
ಶ್ವರರು ಮಾಗಧ ಚೈದ್ಯ ಮೊದಲಾದತುಳ ಭುಜಬಲರು
ತಿರುವನೇರಿಸಿ ಧನುವನುಗಿದ
ಬ್ಬರಿಸಿ ಗಗನದ ಯಂತ್ರಮತ್ಸ್ಯವ
ಮುರಿದ ಪಾಂಡವರರಸಿ ತೊತ್ತಹಳೇ ಶಿವಾ ಎಂದ (ಸಭಾ ಪರ್ವ, ೧೫ ಸಂಧಿ, ೪೦ ಪದ್ಯ)

ತಾತ್ಪರ್ಯ:
ದ್ರುಪದನ ಮಗಳ ಸ್ವಯಂವರದಲ್ಲಿ ಹೆದೆಯನ್ನು ಬಿಲ್ಲಿಗೆ ತೊಡಿಸಲಾಗದೆ ಜರಾಸಂಧ, ಶಿಶುಪಾಲ ಮೊದಲಾದವರೆಲ್ಲರೂ ಸೇರಿ, ನಾಲ್ಕುಸಮುದ್ರ ಪರ್ಯಂತ ರಾಜರೆಲ್ಲರೂ ಸೋತು ಹಿಂದಿರುಗಿದರು. ಆ ಬಿಲ್ಲಿಗೆ ಹೆದೆಯನ್ನೇರಿಸಿ ಆಕಾಶದಲ್ಲಿದ್ದ ಮತ್ಸ್ಯಯಂತ್ರವನ್ನು ಭೇದಿಸಿದ ಪಾಂಡವರ ಪತ್ನಿಯು ದಾಸಿಯಾಗುವಳೇ? ಶಿವ ಶಿವಾ ಎಂದು ವಿದುರನು ನೊಂದನು.

ಅರ್ಥ:
ತಿರುವ: ತಿರುಗುವ, ಚಲಿಸುವ; ಕೊರಳು: ಕುತ್ತಿಗೆ; ತೊಡು: ಬಾಣವನ್ನು ಹೂಡು; ತೆರಳು: ಹೋಗು, ನಡೆ; ಚತುರಂತ: ನಾಲ್ಕು ದಿಕ್ಕುಗಳಲ್ಲಿಯೂ; ಪೃಥ್ವಿ: ಭೂಮಿ; ಪೃಥ್ವೀಶ್ವರ: ರಾಜ; ಮಾಗಧ: ಜರಸಂಧ; ಚೈದ್ಯ: ಶಿಶುಪಾಲ; ಮೊದಲಾದ: ಮುಂತಾದ; ಅತುಳು: ಬಹಳ; ಭುಜಬಲ: ಪರಾಕ್ರಮಿ; ಧನು: ಬಿಲ್ಲು; ಉಗಿ: ಕಳಚು, ಹೊರದೂಡು; ಅಬ್ಬರ: ಅತಿಶಯ; ಗಗನ: ಆಗಸ; ಯಂತ್ರ: ಉಪಕರಣ; ಮತ್ಸ್ಯ: ಮೀನು; ಅರಸಿ: ರಾಣಿ; ತೊತ್ತು: ದಾಸಿ;

ಪದವಿಂಗಡಣೆ:
ತಿರುವ +ಕೊರಳಲಿ +ತೊಡಿಸಲಾರದೆ
ತೆರಳಿದರು +ಚತುರಂತ+ ಪೃಥ್ವೀ
ಶ್ವರರು +ಮಾಗಧ +ಚೈದ್ಯ +ಮೊದಲಾದ್+ಅತುಳ +ಭುಜಬಲರು
ತಿರುವನೇರಿಸಿ+ ಧನುವನ್+ಉಗಿದ್
ಅಬ್ಬರಿಸಿ +ಗಗನದ +ಯಂತ್ರ+ಮತ್ಸ್ಯವ
ಮುರಿದ+ ಪಾಂಡವರ್+ಅರಸಿ +ತೊತ್ತಹಳೇ +ಶಿವಾ +ಎಂದ

ಅಚ್ಚರಿ:
(೧) ತಿರುವ – ೧, ೪ ಸಾಲಿನ ಮೊದಲ ಪದ
(೨) ದ್ರೌಪದಿಯನ್ನು ಪಡೆಯುವುದು ಎಷ್ಟು ಕಷ್ಟ ಎಂದು ವಿವರಿಸುವ ಪದ್ಯ

ಪದ್ಯ ೧೧: ದಕ್ಷಿಣದ ಯಾವ ರಾಜರು ಯಾಗದ ನಂತರ ಹಿಂದಿರುಗಿದರು?

ಅರಸ ಕೇಳೈ ಪಾಂಡ್ಯ ಭೂಮೀ
ಶ್ವರ ಕಳಿಂಗ ಪ್ರಮುಖ ತೆಂಕಣ
ಧರಣಿಪರ ಬಳಿಯಲಿ ಘಟೋತ್ಕಚ ಯೋಜನಾಂತರವ
ವರಕುಮಾರರು ನಿಖಿಳ ಪೃಥ್ವೀ
ಶ್ವರರನವರವರುಚಿತದಲಿ ಸತು
ಕರಿಸಿ ಮರಳಿದು ಬಂದರಿಂದ್ರಪ್ರಸ್ಥಪುರವರಕೆ (ಸಭಾ ಪರ್ವ, ೧೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ದಕ್ಷಿಣದ ದೊರೆಗಳಾದ ಪಾಂಡ್ಯರಾಜ, ಕಳಿಂಗರಾಜ ಮೊದಲಾದವರನ್ನು ಘಟೋತ್ಕಚನು ಒಂದು ಯೋಜನ ದೂರ ಕಳುಹಿಸಿ ಬಂದನು. ಪಾಂಡವರ ಮಕ್ಕಳು ಎಲ್ಲಾ ರಾಜರನ್ನು ಸರಿಯಾದ ರೀತಿಯಲ್ಲಿ ಸತ್ಕರಿಸಿ ಅವರವರ ಊರುಗಳಿಗೆ ಕಳಿಸಿ ಇಂದ್ರಪ್ರಸ್ಥಪುರಕ್ಕೆ ಮರಳಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಭೂಮೀಶ್ವರ: ರಾಜ; ಪ್ರಮುಖ: ಮುಖ್ಯ; ತೆಂಕಣ: ದಕ್ಷಿಣ; ಧರಣಿಪ: ರಾಜ; ಬಳಿ: ಹತ್ತಿರ; ಯೋಜನ: ಅಳತೆಯ ಪ್ರಮಾಣ; ಅಂತರ: ದೂರ; ವರ: ಶ್ರೇಷ್ಠ; ಕುಮಾರ: ಮಕ್ಕಳು; ನಿಖಿಳ: ಎಲ್ಲಾ; ಪೃಥ್ವೀಶ್ವರ: ರಾಜ; ಉಚಿತ: ಸರಿಯಾದ; ಸತುಕರಿಸು: ಗೌರವ; ಮರಳು: ಹಿಂದಿರುಗು; ಬಂದು: ಆಗಮಿಸು; ಪುರ: ಊರು;

ಪದವಿಂಗಡಣೆ:
ಅರಸ +ಕೇಳೈ +ಪಾಂಡ್ಯ +ಭೂಮೀ
ಶ್ವರ +ಕಳಿಂಗ +ಪ್ರಮುಖ +ತೆಂಕಣ
ಧರಣಿಪರ+ ಬಳಿಯಲಿ+ ಘಟೋತ್ಕಚ +ಯೋಜನ+ಅಂತರವ
ವರಕುಮಾರರು +ನಿಖಿಳ +ಪೃಥ್ವೀ
ಶ್ವರರನ್+ಅವರವರ್+ಉಚಿತದಲಿ+ ಸತು
ಕರಿಸಿ +ಮರಳಿದು+ ಬಂದರ್+ಇಂದ್ರಪ್ರಸ್ಥ+ಪುರವರಕೆ

ಅಚ್ಚರಿ:
(೧) ಅರಸ, ಭೂಮೀಶ್ವರ, ಧರಣಿಪ, ಪೃಥ್ವೀಶ್ವರ – ರಾಜ ಪದದ ಸಮನಾರ್ಥಕ ಪದಗಳು
(೨) ೧ ಸಾಲಿನ ಮೊದಲ ಮತ್ತು ಕೊನೆ ಪದ ಸಮಾನಾರ್ಥಕ ಪದ

ಪದ್ಯ ೨೦: ಕರ್ಣ ಮತ್ತು ಶಲ್ಯರು ಯಾವ ಜವಾಬ್ದಾರಿಯನ್ನು ವಹಿಸಿದರು?

ಅರಸ ಕೇಳೈ ಬಳಿಕ ಪೃಥ್ವೀ
ಶ್ವರರಿಗಭಿನವಗಜ ರಥಾವಳಿ
ತುರಗ ಶಸ್ತ್ರಾಸ್ತ್ರಗಳನೀವ ನಿಯೋಗ ಕರ್ಣನದು
ಕರೆಕರೆದು ಯೋಗ್ಯಾತಿಶಯವರಿ
ದಿರದೆ ಯೋಷಿಜ್ಜನಕೆ ಮದ್ರೇ
ಶ್ವರನು ಕೊಡುವವನಾದರಧಿಕೋತ್ಸವದ ಸಿರಿಮಿಗಿಲು (ಸಭಾ ಪರ್ವ, ೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಬಂದ ಎಲ್ಲಾ ರಾಜರುಗಳಿಗೆ ಕುದುರೆ, ಆನೆ, ರಥ ಶಸ್ತ್ರಾಸ್ತ್ರಗಳನ್ನು ಕೊಡುವವನು ಕರ್ಣನು. ಯಾಗಕ್ಕೆ ಬಂದ ಎಲ್ಲಾ ಸ್ತ್ರೀಯರಿಗೆ ಯೋಗ್ಯತಾನುಸಾರವಾಗಿ ಸತ್ಕರಿಸುವವನು ಶಲ್ಯ.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ಪೃಥ್ವಿ: ಭೂಮಿ; ಪೃಥ್ವೀಶ್ವರ: ರಾಜ; ಅಭಿನವ: ಹೊಸದಾದ; ಗಜ: ಆನೆ; ರಥ: ಬಂಡಿ; ಆವಳಿ: ಸಾಲು, ಗುಂಪು; ತುರಗ: ಕುದುರೆ; ಶಸ್ತ್ರಾಸ್ತ್ರ: ಆಯುಧ; ನಿಯೋಗ: ಸಮಿತಿ; ಕರೆ: ಬರೆಮಾಡು; ಯೋಗ್ಯ:ಅರ್ಹತೆ ; ಯೋಷಿಜನ: ಸ್ತ್ರೀ; ಆದರ: ಸತ್ಕಾರ; ಅಧಿಕ: ಹೆಚ್ಚು; ಉತ್ಸವ: ಹಬ್ಬ; ಸಿರಿ: ಐಶ್ವರ್ಯ; ಮಿಗಿಲು: ಹೆಚ್ಚು;

ಪದವಿಂಗಡಣೆ:
ಅರಸ +ಕೇಳೈ +ಬಳಿಕ+ ಪೃಥ್ವೀ
ಶ್ವರರಿಗ್+ಅಭಿನವ+ಗಜ +ರಥಾವಳಿ
ತುರಗ+ ಶಸ್ತ್ರಾಸ್ತ್ರಗಳನೀವ+ ನಿಯೋಗ +ಕರ್ಣನದು
ಕರೆಕರೆದು +ಯೋಗ್ಯ +ಅತಿಶಯವರ್
ಇದಿರದೆ +ಯೋಷಿಜ್ಜನಕೆ+ ಮದ್ರೇ
ಶ್ವರನು+ ಕೊಡುವವನ್+ಆದರ್+ಅಧಿಕ್+ಉತ್ಸವದ+ ಸಿರಿ+ಮಿಗಿಲು

ಅಚ್ಚರಿ:
(೧) ಅರಸ, ಪೃಥ್ವೀಶ್ವರ – ಸಮನಾರ್ಥಕ ಪದ
(೨) ಶ್ವರ – ೨, ೬ ಸಾಲಿನ ಮೊದಲ ಪದ