ಘಾಯಗತಿ ಲೇಸಾಯ್ತು ಪೂತುರೆ
ವಾಯುಸುತ ದಿಟ ಸೈರಿಸೆನ್ನಯ
ಘಾಯವನು ಘೋರಪ್ರಹಾರಸಹಿಷ್ಣು ಗಡ ನೀನು
ಕಾಯಲಾಪಡೆ ಫಲುಗುಣನನಬು
ಜಾಯತಾಕ್ಷನ ಕರೆಯೆನುತ ಕುರು
ರಾಯನೆರಗಿದನನಿಲಜನ ಕರ್ಣ ಪ್ರದೇಶದಲಿ (ಗದಾ ಪರ್ವ, ೭ ಸಂಧಿ, ೨೩ ಪದ್ಯ)
ತಾತ್ಪರ್ಯ:
ನಿನ್ನ ಹೊಡೆತದ ರೀತಿ ಬಹಳ ಉತ್ತಮವಾಗಿತ್ತು ಭೀಮ, ಭಲೇ, ನನ್ನ ಹೊಡೆತವನ್ನು ಸಹಿಸಿಕೋ ಎಂದು ಹೇಳುತ್ತಾ ಘೋರವಾದ ಪ್ರಹಾವರು ಬಿದ್ದರೂ ನೀನು ಸಹಿಸಿಕೊಳ್ಳಬಲ್ಲೆ ಆದರೆ ನನ್ನ ಹೊಡೆತದಿಂದ ನೀನು ತಪ್ಪಿಸಿಕೊಳ್ಳಲಾರೆ, ನಿನ್ನನ್ನು ಉಳಿಸಿಕೊಳ್ಳಲು ಅರ್ಜುನನನ್ನೋ, ಕೃಷ್ಣನನ್ನೋ ಕರೆ ಎನ್ನುತ್ತಾ ಕೌರವನು ಭೀಮನ ಕಿವಿಯ ಪ್ರದೇಶಕ್ಕೆ ಹೊಡೆದನು.
ಅರ್ಥ:
ಘಾಯ: ಪೆಟ್ಟು; ಗತಿ: ವೇಗ; ಲೇಸು: ಒಳಿತು; ಪೂತು: ಭಲೇ; ವಾಯುಸುತ: ಭೀಮ; ವಾಯು: ಅನಿಲ; ದಿಟ: ಸತ್ಯ; ಸೈರಿಸು: ತಾಳು; ಘೋರ: ಭಯಂಕರ; ಪ್ರಹಾರ: ಹೊಡೆಯುವಿಕೆ, ಪೆಟ್ಟು; ಸಹಿಷ್ಣು: ತಾಳ್ಮೆಯುಳ್ಳವನು; ಗಡ: ಅಲ್ಲವೆ; ತ್ವರಿತವಾಗಿ; ಕಾಯು: ರಕ್ಷಿಸು; ಅಬುಜಾಯತಾಕ್ಷ: ಕಮಲದಂತ ಕಣ್ಣುಳ್ಳ (ಕೃಷ್ಣ); ಕರೆ: ಬರೆಮಾದು; ರಾಯ: ರಾಜ; ಎರಗು: ಬಾಗು; ಅನಿಲಜ: ವಾಯುಪುತ್ರ; ಕರ್ಣ: ಕಿವಿ; ಪ್ರದೇಶ: ಜಾಗ;
ಪದವಿಂಗಡಣೆ:
ಘಾಯಗತಿ +ಲೇಸಾಯ್ತು +ಪೂತುರೆ
ವಾಯುಸುತ +ದಿಟ +ಸೈರಿಸ್+ಎನ್ನಯ
ಘಾಯವನು +ಘೋರ+ಪ್ರಹಾರ+ಸಹಿಷ್ಣು +ಗಡ +ನೀನು
ಕಾಯಲಾಪಡೆ +ಫಲುಗುಣನನ್+ಅಬು
ಜಾಯತಾಕ್ಷನ+ ಕರೆ+ಎನುತ +ಕುರು
ರಾಯನ್+ಎರಗಿದನ್+ಅನಿಲಜನ +ಕರ್ಣ+ ಪ್ರದೇಶದಲಿ
ಅಚ್ಚರಿ:
(೧) ಭೀಮನನ್ನು ಹಂಗಿಸುವ ಪರಿ – ಕಾಯಲಾಪಡೆ ಫಲುಗುಣನನಬುಜಾಯತಾಕ್ಷನ ಕರೆ