ಕಂಡು ಕಂಬನಿದುಂಬಿದರು ಭೂ
ಮಂಡಲಾಧಿಪ ವೈರಿಮದವೇ
ತಂಡ ಕೇಸರಿಯಿರವಿದೇ ಮಝ ಪೂತು ವಿಧಿಯೆನುತ
ಗಂಡುಗಲಿಯವಧಾನ ರಿಪುಬಲ
ದಂಡಧರನವಧಾನ ಕುರುಕುಲ
ಚಂಡಕರನವಧಾನವೆನುತೆಚ್ಚರಿಸಿದರು ನೃಪನ (ಗದಾ ಪರ್ವ, ೧೦ ಸಂಧಿ, ೩ ಪದ್ಯ)
ತಾತ್ಪರ್ಯ:
ಕೃಪ, ಕೃತವರ್ಮ, ಅಶ್ವತ್ಥಾಮ, ಈ ಮೂವರು ದುರ್ಯೋಧನನು ಇದ್ದ ಸ್ಥಿತಿಯನ್ನು ನೋಡಿ ಕಣ್ಣಿರಿಟ್ಟರು. ವೈರಿಗಳೆಂಬ ಮದಗಜಗಳಿಗೆ ಸಿಂಹದಂತಿದ್ದ ದುರ್ಯೋಧನನಿಗೆ ಇಂತಹ ಸ್ಥಿತಿಯುಂಟಾಯಿತೇ? ಭಲೇ ವಿಧಿಯೇ, ನಿನ್ನ ಆಟ ಎಂತಹುದು! ಎಂದು ಉದ್ಗರಿಸಿದರು. ಗಂಡುಗಲಿಯೇ ಕೇಳು, ಶತ್ರುಗಳ ಪಾಲಿಗೆ ಯಮನೇ ಕೇಳು, ಕುರುಕುಲಕ್ಕೆ ಸೂರ್ಯನಾದವನೇ ಕೇಳು ಎಂದು ಅವನನ್ನು ಎಚ್ಚರಿಸಿದರು.
ಅರ್ಥ:
ಕಂಡು: ನೋಡು; ಕಂಬನಿ: ಕಣ್ಣೀರು; ತುಂಬು: ಭರಿತವಾಗು; ಭೂಮಂಡಲ: ಭೂಮಿ; ಅಧಿಪ: ಒಡೆಯ; ಭೂಮಂಡಲಾಧಿಪ: ರಾಜ; ವೈರಿ: ಶತ್ರು; ಮದ: ಅಹಂಕಾರ; ತಂಡ: ಗುಂಪು; ಕೇಸರಿ: ಸಿಂಹ; ಮಝ: ಭಲೇ; ಪೂತು: ಭಲೇ; ವಿಧಿ: ನಿಯಮ; ಗಂಡುಗಲಿ: ಪರಾಕ್ರಮಿ; ಅವಧಾನ: ಕೇಳು; ರಿಪು: ವೈರಿ; ಬಲ: ಸೈನ್ಯ, ಶಕ್ತಿ; ದಂಡಧರ: ಯಮ; ಕುಲ: ವಂಶ; ಚಂಡಕರ: ತೀಕ್ಷ್ಣವಾದ ಕಿರಣಗಳುಳ್ಳವನು, ಸೂರ್ಯ; ಎಚ್ಚರ: ಪ್ರಜ್ಞೆ ಬಂದಿರುವ ಸ್ಥಿತಿ;
ಪದವಿಂಗಡಣೆ:
ಕಂಡು +ಕಂಬನಿ+ತುಂಬಿದರು +ಭೂ
ಮಂಡಲಾಧಿಪ+ ವೈರಿಮದವೇ
ತಂಡ +ಕೇಸರಿ+ಇರವಿದೇ+ ಮಝ +ಪೂತು +ವಿಧಿಯೆನುತ
ಗಂಡುಗಲಿ+ಅವಧಾನ +ರಿಪುಬಲ
ದಂಡಧರನ್+ಅವಧಾನ +ಕುರುಕುಲ
ಚಂಡಕರನ್+ಅವಧಾನವ್+ಎನುತ್+ಎಚ್ಚರಿಸಿದರು +ನೃಪನ
ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ಗಂಡುಗಲಿ, ರಿಪುಬಲದಂಡಧರ, ಕುರುಕುಲಚಂಡಕರ, ವೈರಿಮದವೇತಂಡ ಕೇಸರಿ