ಧರಣಿಪತಿ ಕೇಳುಳಿದ ಪುಷ್ಪದ
ಪರಿಮಳವು ಪಥಿಸಿದರೆ ಸಂಪಗೆ
ಯರಳ ಪರಿಮಳ ಪಥ್ಯವೇ ತುಂಬಿಗಳ ತಿಂತಿಣಿಗೆ
ಅರಿಭಟರು ಭೀಮಾದಿಗಳ ಗೆಲಿ
ದಿರಲಿ ಹೊಲ್ಲಹವೇನು ಘನ ಸಂ
ಗರದೊಳಗೆ ನನ್ನೊಡನೆ ತುಡುಕಿದಡರಿಯಬಹುದೆಂದ (ದ್ರೋಣ ಪರ್ವ್, ೪ ಸಂಧಿ, ೪೩ ಪದ್ಯ)
ತಾತ್ಪರ್ಯ:
ರಾಜ, ದುಂಬಿಗಳ ಹಿಂಡಿಗೆ ಎಲ್ಲಾ ಹೂಗಳ ಮಕರಂದವು ಇಷ್ಟವಾದರೆ, ಸಂಪಗೆಯ ಪರಿಮಳವು ಪಥ್ಯವಾದೀತೇ? ಭೀಮಾದಿಗಳನ್ನು ಶತ್ರುಗಳು ಗೆದ್ದರೇನಂತೆ? ನನ್ನ ಮೇಲೆ ಯುದ್ಧವನ್ನು ಮಾಡಲು ಬಂದರೆ ಅವರು ತಮ್ಮ ಯೋಗ್ಯತೆಯನ್ನು ತಿಳಿದುಕೊಳ್ಳುತ್ತಾರೆ ಎಂದು ಅಭಿಮನ್ಯುವು ನುಡಿದನು.
ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಉಳಿದ: ಮಿಕ್ಕ; ಪುಷ್ಪ: ಹೂವು; ಪರಿಮಳ: ಸುವಾಸನೆ; ಪಥಿಸು: ಒಗ್ಗು, ಹಿಡಿಸು; ಸಂಪಗೆ: ಚಂಪಕ; ಅರಳು: ಹೂವು; ಪಥ್ಯ:ಯೋಗ್ಯವಾದುದು, ಹಿತವಾದುದು; ತುಂಬಿ: ಭ್ರಮರ; ತಿಂತಿಣಿ: ಗುಂಪು; ಅರಿ: ವೈರಿ; ಭಟ: ಸೈನಿಕ; ಗೆಲಿದು: ಜಯಿಸು; ಹೊಲ್ಲ: ಹೀನವಾದುದು, ಕೆಟ್ಟದ್ದು; ಘನ: ಶ್ರೇಷ್ಠ; ಸಂಗರ: ಯುದ್ಧ; ತುಡುಕು: ಹೋರಾಡು, ಸೆಣಸು; ಅರಿ: ತಿಳಿ;
ಪದವಿಂಗಡಣೆ:
ಧರಣಿಪತಿ +ಕೇಳ್+ಉಳಿದ +ಪುಷ್ಪದ
ಪರಿಮಳವು +ಪಥಿಸಿದರೆ +ಸಂಪಗೆ
ಅರಳ +ಪರಿಮಳ +ಪಥ್ಯವೇ +ತುಂಬಿಗಳ +ತಿಂತಿಣಿಗೆ
ಅರಿಭಟರು +ಭೀಮಾದಿಗಳ +ಗೆಲಿ
ದಿರಲಿ +ಹೊಲ್ಲಹವೇನು+ ಘನ +ಸಂ
ಗರದೊಳಗೆ +ನನ್ನೊಡನೆ +ತುಡುಕಿದಡ್+ಅರಿಯಬಹುದೆಂದ
ಅಚ್ಚರಿ:
(೧) ರೂಪಕದ ಪ್ರಯೋಗ – ಪುಷ್ಪದ ಪರಿಮಳವು ಪಥಿಸಿದರೆ ಸಂಪಗೆ ಯರಳ ಪರಿಮಳ ಪಥ್ಯವೇ ತುಂಬಿಗಳ ತಿಂತಿಣಿಗೆ