ಖಾತಿಯೇಕೈ ಸೈಂಧವನ ಕಾ
ವಾತನಾರೈ ತ್ರಿಪುರದಹನದ
ಭೂತನಾಥನ ಬಾಣ ಬಂದುದು ನರನ ಗಾಂಡಿವಕೆ
ಆತನೆಚ್ಚದು ಪಾಶುಪತವದ
ನಾತುಕೊಂಬವರಾರು ಬರಿದೆ ಭ
ಟಾತಿಶಯವನು ಹುರುಳುಗೆಡಿಸುವಿರೆಂದನಾ ದ್ರೋಣ (ದ್ರೋಣ ಪರ್ವ, ೧೫ ಸಮ್ಧಿ, ೧೪ ಪದ್ಯ)
ತಾತ್ಪರ್ಯ:
ನೀವೇಕೆ ಇಷ್ಟು ಸಿಟ್ಟಿನಿಂದ ವಾದಿಸುತ್ತಿರುವಿರಿ ಎಂದು ದ್ರೋಣನು ತನ್ನ ವಿಚಾರವನ್ನಿಡಲು ಶುರುಮಾಡಿದರು. ತ್ರಿಪುರಗಳನ್ನು ದಹಿಸಿದ ಶಿವನ ಪಾಶುಪತಾಸ್ತ್ರವು ಅರ್ಜುನನ ಗಾಂಡಿವಕ್ಕೆ ಬಂದಿತು ಎಂದ ಮೇಲೆ ಸೈಂಧವನನ್ನು ಕಾಪಾಡುವವರಾರು? ಅರ್ಜುನನು ಪ್ರಯೋಗಿಸಿದ್ದ ಪಾಶುಪತಾಸ್ತ್ರವನ್ನು ಇದಿರಿಸಬಲ್ಲವರಾರು? ಸುಮ್ಮನೆ ವೀರರನ್ನು ಬೆದರಿಸಿ ಅಲ್ಲಗಳೆಯುತ್ತಿದ್ದೀರಿ ಎಂದು ದ್ರೋಣನು ಹೇಳಿದನು.
ಅರ್ಥ:
ಖಾತಿ: ಕೋಪ, ಸಿಟ್ಟು; ಕಾವು: ರಕ್ಷಿಸು; ದಹನ: ಸುಡು; ಭೂತನಾಥ: ಶಿವ; ಬಾಣ: ಅಂಬು; ಬಂದು: ಆಗಮಿಸು; ನರ: ಅರ್ಜುನ; ಎಚ್ಚು: ಬಾಣ ಪ್ರಯೋಗ ಮಾಡು; ಭಟ: ಸೈನಿಕ, ಪರಾಕ್ರಮಿ; ಅತಿಶಯ: ಹೆಚ್ಚಳ; ಹುರುಳು: ಸತ್ತ್ವ, ಸಾರ; ಕೆಡಿಸು: ಹಾಳುಮಾಡು;
ಪದವಿಂಗಡಣೆ:
ಖಾತಿಯೇಕೈ +ಸೈಂಧವನ +ಕಾವ್
ಆತನಾರೈ +ತ್ರಿಪುರದಹನದ
ಭೂತನಾಥನ +ಬಾಣ +ಬಂದುದು +ನರನ +ಗಾಂಡಿವಕೆ
ಆತನ್+ಎಚ್ಚದು +ಪಾಶುಪತವ್+ಅದನ್
ಆತುಕೊಂಬವರಾರು +ಬರಿದೆ +ಭ
ಟಾತಿಶಯವನು +ಹುರುಳು+ಕೆಡಿಸುವಿರೆಂದನಾ +ದ್ರೋಣ
ಅಚ್ಚರಿ:
(೧) ಪಾಶುಪತಾಸ್ತ್ರ ಎಂದು ಹೇಳುವ ಪರಿ – ತ್ರಿಪುರದಹನದ ಭೂತನಾಥನ ಬಾಣ
(೨) ಹುರುಳಿಲ್ಲದ ಮಾತು ಎಂದು ಹೇಳುವ ಪರಿ – ಬರಿದೆ ಭಟಾತಿಶಯವನು ಹುರುಳುಗೆಡಿಸುವಿರೆಂದನಾ ದ್ರೋಣ