ತೀರಿತಡವಿಯ ಕಡಿತ ಗಿರಿಗಳ
ಹೋರಟೆಗೆ ಹೊಗಬೇಕು ಸೇನೆಗೆ
ಪಾರುಖಾಣೆಯ ಕೊಟ್ಟೆವಾಗಳೆ ಗುರುಸುತಾದಿಗಳ
ಭಾರಣೆಗೆ ಕೊಡಬೇಕು ಸಮಯವ
ನಾರುಭಟೆಯಲಿ ಮಲೆವುದೈ ಕೈ
ವಾರವೇಕೀ ಕಾಯದಲಿ ಕಕ್ಕುಲಿತೆ ಬೇಡೆಂದ (ಭೀಷ್ಮ ಪರ್ವ, ೮ ಸಂಧಿ, ೫೩ ಪದ್ಯ)
ತಾತ್ಪರ್ಯ:
ಅರ್ಜುನನು ಸೈನ್ಯದ ಅಡವಿಯ ಕಡಿತವನ್ನು ಮುಗಿಸಿದನು. ಇನ್ನೂ ಬೆಟ್ಟಗಳೊಡನೆ ಹೋರಾಟವಾಗಬೇಕಾಗಿದೆ, ಅಶ್ವತ್ಥಾಮಾದಿಗಳಿಗೆ ಬಹುಮಾನವನ್ನು ಆಗಲೇ ಕೊಟ್ಟಿದ್ದಾಗಿದೆ, ಅವರು ಬರಲು ಸಮಯವನ್ನು ಕೊಡಬೇಕು, ರಿಪುವೀರರೇ ಪರಾಕ್ರಮದಿಮ್ದ ಕಾದಲು ಬನ್ನಿ, ಮನುಷ್ಯ ಶರೀರಕ್ಕೆ ಅಷ್ಟು ಹೆಚ್ಚಿನ ಮಾನ್ಯತೆ ಕೊಡಬೇಡಿ, ಮೈಗೆ ಏನಾಗುವುದೋ ಎಂಬ ಕಕ್ಕುಲಾತಿ ಬೇಡ ಎಂದು ಮೂದಲಿಸಿದನು.
ಅರ್ಥ:
ತೀರು: ಅಂತ್ಯ, ಮುಕ್ತಾಯ; ಅಡವಿ: ಕಾಡು; ಕಡಿತ: ಸೀಳು; ಗಿರಿ: ಬೆಟ್ಟ; ಹೋರಟೆ: ಕಾಳಗ, ಯುದ್ಧ; ಹೊಗು: ಒಳಸೇರು; ಸೇನೆ: ಸೈನ್ಯ; ಪಾರುಖಾಣೆ: ಬಹು ಮಾನ, ಉಡುಗೊರೆ; ಕೊಡು: ನೀಡು; ಸುತ: ಮಗ; ಭಾರಣೆ: ಮಹಿಮೆ, ಗೌರವ; ಕೊಡು: ನೀಡು; ಸಮಯ: ಕಾಲ; ಆರುಭಟೆ: ಗರ್ಜನೆ, ಆರ್ಭಟ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಕಾಯ: ಕೆಲಸ; ಕೈವಾರ: ಕೈಚಳಕ; ಕಕ್ಕುಲಿತೆ: ಚಿಂತೆ;
ಪದವಿಂಗಡಣೆ:
ತೀರಿತ್+ಅಡವಿಯ +ಕಡಿತ +ಗಿರಿಗಳ
ಹೋರಟೆಗೆ +ಹೊಗಬೇಕು +ಸೇನೆಗೆ
ಪಾರುಖಾಣೆಯ +ಕೊಟ್ಟೆವಾಗಳೆ +ಗುರುಸುತಾದಿಗಳ
ಭಾರಣೆಗೆ +ಕೊಡಬೇಕು +ಸಮಯವನ್
ಆರುಭಟೆಯಲಿ +ಮಲೆವುದೈ +ಕೈ
ವಾರವೇಕೀ +ಕಾಯದಲಿ +ಕಕ್ಕುಲಿತೆ+ ಬೇಡೆಂದ
ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೈವಾರವೇಕೀ ಕಾಯದಲಿ ಕಕ್ಕುಲಿತೆ
(೨) ಹೋಲಿಸುವ ಪರಿ – ತೀರಿತಡವಿಯ ಕಡಿತ ಗಿರಿಗಳ ಹೋರಟೆಗೆ ಹೊಗಬೇಕು