ಈತನಿದಿರೆದ್ದರ್ಘ್ಯಪಾದ್ಯವ
ನಾ ತಪೋನಿಧಿಗಿತ್ತು ಬಹಳ
ಪ್ರೀತಿಯಲಿ ಬೆಸಗೊಂಡನವರಾಗಮನ ಸಂಗತಿಯ
ಆತನಮಳ ಸ್ವರ್ಗಸದನ ಸು
ಖಾತಿಶಯವನು ಹೇಳಿದನು ಪುರು
ಹೂತ ಭವನದಲರ್ಜುನನ ವಾರ್ತೆಯನು ವಿವರಿಸಿದ (ಅರಣ್ಯ ಪರ್ವ, ೧೦ ಸಂಧಿ, ೩ ಪದ್ಯ)
ತಾತ್ಪರ್ಯ:
ಧರ್ಮಜನು ಲೋಮಶನನ್ನು ಎದುರುಗೊಂಡು ಅಮರಾವತಿಯ ವಿದ್ಯಮಾನಗಳೇನೆಂದು ಕೇಳಿದನು, ಸ್ವರ್ಗದ ಸಂತೋಷಾತಿಶಯವನ್ನೂ ಅರ್ಜುನನು ದೇವೇಂದ್ರ ಭವನದಲ್ಲಿದ್ದ ವಾರ್ತೆಯನ್ನು ಲೋಮಶನು ತಿಳಿಸಿದನು.
ಅರ್ಥ:
ಅರ್ಘ್ಯ: ದೇವತೆಗಳಿಗೂ ಪೂಜ್ಯರಿಗೂ ಕೈತೊಳೆಯಲು ಕೊಡುವ ನೀರು; ಪಾದ್ಯ: ಕಾಲು ತೊಳೆಯುವ ನೀರು; ತಪೋನಿಧಿ: ಮುನಿ; ಬಹಳ: ತುಂಬ; ಪ್ರೀತಿ: ಒಲವು; ಬೆಸಗೊಳ್: ಕೇಳು;
ಆಗಮನ: ಬರುವಿಕೆ; ಸಂಗತಿ: ವಿಚಾರ; ಅಮಳ: ನಿರ್ಮಲ; ಸ್ವರ್ಗ: ನಾಕ; ಸದನ; ಆಲಯ; ಸುಖ: ಸಮಾಧಾನ, ಸಂತಸ; ಅತಿಶಯ: ಹೆಚ್ಚಳ; ಹೇಳು: ತಿಳಿಸು; ಪುರುಹೂತ: ಇಂದ್ರ; ಭವನ: ಆಲಯ; ವಾರ್ತೆ: ವಿಚಾರ, ವಿಷಯ; ವಿವರಿಸು: ತಿಳಿಸು;
ಪದವಿಂಗಡಣೆ:
ಈತನ್+ಇದಿರೆದ್+ಅರ್ಘ್ಯ+ಪಾದ್ಯವನ್
ಆ+ ತಪೋನಿಧಿಗಿತ್ತು +ಬಹಳ
ಪ್ರೀತಿಯಲಿ +ಬೆಸಗೊಂಡನ್+ಅವರ್+ಆಗಮನ +ಸಂಗತಿಯ
ಆತನ್+ಅಮಳ +ಸ್ವರ್ಗ+ಸದನ +ಸುಖ
ಅತಿಶಯವನು +ಹೇಳಿದನು +ಪುರು
ಹೂತ +ಭವನದಲ್+ಅರ್ಜುನನ +ವಾರ್ತೆಯನು +ವಿವರಿಸಿದ
ಅಚ್ಚರಿ:
(೧) ಲೋಮಶ ಮುನಿಗಳನ್ನು ತಪೋನಿಧಿ ಎಂದು ಕರೆದಿರುವುದು
(೨) ಇಂದ್ರನನ್ನು ಕರೆದ ಪರಿ – ಪುರುಹೂತ