ಮುರಿದು ಮಂದರಗಿರಿ ಪಯೋಧಿಯ
ತೆರೆಗಳನು ತುಳಿವಂತೆ ರಿಪು ಮೋ
ಹರವನರೆದುದು ನುಗ್ಗುನುಸಿಯಾಯ್ತಖಿಳ ತಳತಂತ್ರ
ತೆರಳಿದರು ರಾವುತರು ರಥಿಕರು
ಹೊರಳಿಯೊಡೆದುದು ಗಜದ ಗಾವಳಿ
ಜರಿದುದಳಿದುದನಾರು ಬಲ್ಲರು ಭೂಪ ಕೇಳೆಂದ (ದ್ರೋಣ ಪರ್ವ, ೩ ಸಂಧಿ, ೧೮ ಪದ್ಯ)
ತಾತ್ಪರ್ಯ:
ಮಂದರ ಗಿರಿಯು ಸಮುದ್ರದ ತೆರೆಗಳನ್ನು ನಿಗ್ರಹಿಸಿದಂತೆ ಶತ್ರುಸೈನ್ಯವನ್ನು ಆ ಗಜವು ಅರೆದು ಹಾಕಿತು. ಸೈನ್ಯವು ನುಗ್ಗು ನುಸಿಯಾಯಿತು ಚತುರಂಗ ಸೈನಯ್ವು ಚದುರಿ ಓಡಿತು, ರಾಜ, ಎಷ್ಟು ಶತ್ರುಸೈನ್ಯವು ನಾಶವಾಯಿತೋ ಯಾರು ಬಲ್ಲರು ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.
ಅರ್ಥ:
ಮುರಿ: ಸೀಳು; ಗಿರಿ: ಬೆಟ್ಟ; ಪಯೋಧಿ: ಸಮುದ್ರ; ತೆರೆ: ಅಲೆ; ತುಳಿ: ಮೆಟ್ಟು; ರಿಪು: ವೈರಿ; ಮೋಹರ: ಯುದ್ಧ; ಅರೆ: ನುಣ್ಣಗೆ ಮಾಡು; ನುಗ್ಗು: ತಳ್ಳು; ನುಸಿ: ಹುಡಿ, ಧೂಳು; ಅಖಿಳ: ಎಲ್ಲಾ; ತಳತಂತ್ರ: ಕಾಲಾಳುಗಳ ಪಡೆ, ಸೈನ್ಯ; ತೆರಳು: ಹೊರದು; ರಾವುತ: ಕುದುರೆ ಸವಾರ, ಅಶ್ವಾರೋಹಿ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಹೊರಳು:ತಿರುವು, ಬಾಗು; ಒಡೆ: ಸೀಳು, ಬಿರಿ; ಗಜ: ಆನೆ; ಆವಳಿ: ಸಾಲು; ಜರಿ: ಓಡಿಹೋಗು, ಪಲಾಯನ ಮಾಡು, ಅಳುಕು; ಅಳಿ: ನಾಶ; ಬಲ್ಲರು: ತಿಳಿದವರು; ಭೂಪ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಮುರಿದು +ಮಂದರ+ಗಿರಿ +ಪಯೋಧಿಯ
ತೆರೆಗಳನು +ತುಳಿವಂತೆ +ರಿಪು +ಮೋ
ಹರವನ್+ಅರೆದುದು +ನುಗ್ಗು+ನುಸಿಯಾಯ್ತ್+ಅಖಿಳ +ತಳತಂತ್ರ
ತೆರಳಿದರು +ರಾವುತರು +ರಥಿಕರು
ಹೊರಳಿ+ಒಡೆದುದು +ಗಜದಗ್ + ಆವಳಿ
ಜರಿದುದ್+ಅಳಿದುದನ್+ಆರು +ಬಲ್ಲರು +ಭೂಪ +ಕೇಳೆಂದ
ಅಚ್ಚರಿ:
(೧) ಉಪಮಾನದ ಪ್ರಯೋಗ – ಮುರಿದು ಮಂದರಗಿರಿ ಪಯೋಧಿಯ ತೆರೆಗಳನು ತುಳಿವಂತೆ
(೨) ನುಗ್ಗುನುಸಿ, ತುಳಿ, ಒಡೆ, ಜರಿ, ಅಳಿ – ನಾಶವನ್ನು ಸೂಚಿಸುವ ಪದಗಳ ಬಳಕೆ