ನರನನೆಚ್ಚನು ಪವನಜನ ತನು
ಬಿರಿಯಲೆಚ್ಚನು ಸಾರಥಿಗಳಿ
ಬ್ಬರಲಿ ಹೂಳಿದನಂಬ ನೆರೆ ನೋಯಿಸಿದ ರಥ ಹಯವ
ನರನ ಕಣೆಯನು ಭೀಮನಂಬನು
ಹರೆಗಡಿದು ಮಗುಳೆಚ್ಚನವರನು
ಸರಳ ಪುನರಪಿ ಸವರಿ ಸೆಕ್ಕಿದನೊಡಲೊಳಂಬುಗಳ (ದ್ರೋಣ ಪರ್ವ, ೧೮ ಸಂಧಿ, ೨೭ ಪದ್ಯ)
ತಾತ್ಪರ್ಯ:
ಅರ್ಜುನನನ್ನು ಬಾಣಗಳಿಂದ ಹೊಡೆದನು. ಭೀಮನ ಮೈ ಬಿರಿಯುವಂತೆ ಹೊಡೆದನು. ಅವರ ದೇಹಗಳಲ್ಲಿ ಬಾಣಗಳನ್ನು ನೆಡಿಸಿದನು. ಅರ್ಜುನ ಭೀಮರ ಬಾಣಗಳನ್ನು ಕತ್ತರಿಸಿ ಎಸೆದು ಮತ್ತೆ ಅವರ ಮೈಗಳಲ್ಲಿ ಬಾಣಗಳು ನೆಡುವಂತೆ ದ್ರೋಣರು ಹೊಡೆದರು.
ಅರ್ಥ:
ನರ: ಅರ್ಜುನ; ಎಚ್ಚು: ಬಾಣ ಪ್ರಯೋಗ ಮಾಡು; ಪವನಜ: ಭೀಮ; ತನು: ದೇಹ; ಬಿರಿ: ಕಠಿಣ, ಕಷ್ಟ, ಸೀಳು; ಸಾರಥಿ: ಸೂತ; ಹೂಳು: ಹೂತು ಹಾಕು; ಅಂಬು: ಬಾಣ; ನೆರೆ: ಗುಂಪು; ನೋಯಿಸು: ಪೆಟ್ಟು; ರಥ: ಬಂಡಿ; ಹಯ: ಕುದುರೆ; ಕಣೆ: ಬಾಣ; ಹರೆ: ಚೆದುರು; ಕಡಿ: ಸೀಳು; ಮಗುಳು: ಪುನಃ, ಮತ್ತೆ; ಸರಳ: ಬಾಣ; ಪುನರಪಿ: ಪುನಃ; ಸವರು: ನಾಶಮಾಡು; ಸೆಕ್ಕು: ಒಳಸೇರಿಸು, ತುರುಕು; ಒಡಲು: ದೇಹ;
ಪದವಿಂಗಡಣೆ:
ನರನನ್+ಎಚ್ಚನು +ಪವನಜನ+ ತನು
ಬಿರಿಯಲ್+ಎಚ್ಚನು +ಸಾರಥಿಗಳ್
ಇಬ್ಬರಲಿ +ಹೂಳಿದನ್+ಅಂಬ +ನೆರೆ +ನೋಯಿಸಿದ+ ರಥ+ ಹಯವ
ನರನ +ಕಣೆಯನು +ಭೀಮನ್+ಅಂಬನು
ಹರೆ+ಕಡಿದು +ಮಗುಳ್+ಎಚ್ಚನವರನು
ಸರಳ +ಪುನರಪಿ+ ಸವರಿ+ ಸೆಕ್ಕಿದನ್+ಒಡಲೊಳ್+ಅಂಬುಗಳ
ಅಚ್ಚರಿ:
(೧) ಅಂಬು, ಸರಳ, ಕಣೆ; ಮಗುಳು, ಪುನರಪಿ; ಪವನಜ, ಭೀಮ – ಸಮಾನಾರ್ಥಕ ಪದಗಳು
(೨) ಎಚ್ಚನು – ೩ ಬಾರಿ ಪ್ರಯೋಗ