ಪದ್ಯ ೨೮: ದ್ರೋಣನು ಯಾಕೆ ಚಿಂತಿಸಿದನು?

ಇವು ಮಹಾನಿಸ್ಸೀಮತರ ವೈ
ಷ್ಣವವಲೇ ದಿವ್ಯಾಸ್ತ್ರನಿವಹವ
ನವರು ಕೊಟ್ಟರು ಕೊಂಡನುಚಿತ ವಿಧಾನದಲಿ ದ್ರೋಣ
ಇವು ಮ್ಹಾರಣರಂಗದಲಿ ಶಾ
ತ್ರವ ನಿವಾರಣವೈಸಲೆಮ್ಮೀ
ವ್ಯವಹೃತಿಗೆ ತಾನೇನುಪಾಯವೆನುತ್ತ ಚಿಂತಿಸಿದ (ಆದಿ ಪರ್ವ, ೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ಪರಶುರಾಮನು ಇವು ಮಹಾವೈಷ್ಣವ ದಿವ್ಯಾಸ್ತ್ರಗಳು, ಇವುಗಳ ಪ್ರಭಾವಕ್ಕೆ ಎಲ್ಲೆಯೇ ಇಲ್ಲ. ಇವನ್ನು ತೆಗೆದುಕೋ ಎಂದು ಹೇಳಿದನು. ದ್ರೋಣನು ಉಚಿತರೀತಿಯಲ್ಲಿ ಅವನ್ನು ಸ್ವೀಕರಿಸಿದನು. ಈ ಅಸ್ತ್ರಗಳಿಂದ ರಣರಂಗದಲ್ಲಿ ಶತ್ರುಗಳನ್ನು ಸಂಹರಿಸಬಹುದು. ಆದರೆ ಲೌಕಿಕ ವ್ಯವಹಾರಕ್ಕೆ ಏನು ಉಪಾಯವನ್ನು ಮಾಡಬೇಕೆಂದು ದ್ರೋಣನು ಚಿಂತಿಸಿದನು.

ಅರ್ಥ:
ನಿಸ್ಸೀಮ: ನಿಪುಣ, ಅತಿಶೂರ, ಪರಾಕ್ರಮಿ; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧಗಳು; ನಿವಹ: ಗುಂಪು; ಕೊಟ್ಟರು: ನೀಡಿದರು; ಉಚಿತ: ಸರಿಯಾದ; ವಿಧಾನ: ರೀತಿ; ರಣರಂಗ: ಯುದ್ಧಭೂಮಿ; ಶಾತ್ರ: ಶತ್ರು; ನಿವಾರಣೆ: ನಾಶ; ವ್ಯವಹೃತಿ: ಲೌಕಿಕ ಜೀವನ; ಉಪಾಯ: ಯುಕ್ತಿ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಇವು +ಮಹಾ+ನಿಸ್ಸೀಮತರ +ವೈ
ಷ್ಣವವಲೇ +ದಿವ್ಯಾಸ್ತ್ರ+ನಿವಹವನ್
ಅವರು +ಕೊಟ್ಟರು +ಕೊಂಡನ್+ಉಚಿತ +ವಿಧಾನದಲಿ +ದ್ರೋಣ
ಇವು +ಮಹಾರಣರಂಗದಲಿ +ಶಾ
ತ್ರವ+ ನಿವಾರಣವೈಸಲ್+ಎಮ್ಮೀ
ವ್ಯವಹೃತಿಗೆ +ತಾನೇನ್+ಉಪಾಯವ್+ಎನುತ್ತ+ ಚಿಂತಿಸಿದ

ಅಚ್ಚರಿ:
(೧) ಮಹಾನಿಸ್ಸೀಮ, ಮಹಾರಣರಂಗ – ಮಹಾ ಪದದ ಬಳಕೆ

ಪದ್ಯ ೭೯: ವಿದುರನು ಧೃತರಾಷ್ಟ್ರನ ಮಾತನ್ನು ಏಕೆ ಒಪ್ಪಿದನು?

ಮೊದಲಲಿದು ಸದ್ಯೂತವವಸಾ
ನದಲಿ ವಿಷಮ ದ್ಯೂತದಲಿ ನಿಲು
ವುದು ನಿವಾರಣವುಂಟೆ ಮರ್ಮವನಿರಿದ ಸಬಳದಲಿ
ತುದಿಗೆ ತಾನಿದಪಥ್ಯ ಕುರುವ
ರ್ಗದಿ ವಿನಾಶಕ ಬೀಜವದು ನಿಮ
ಗಿದರೊಳಗೆ ಸೊಗಸಾದುದೇ ಕೈಕೊಂಡೆ ನಾನೆಂದ (ಸಭಾ ಪರ್ವ, ೧೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಮೊದಲನೆಯದಾಗಿ ಇದು ಒಳ್ಳೆಯ ದ್ಯೂತ ಪಂದ್ಯವಾಗಿ ಆರಂಭವಾದರೂ ಕೊನೆಗೆ ಕಷ್ಟಕರವಾದ ದ್ಯೂತವಾಗಿಬಿಡುತ್ತದೆ. ಮರ್ಮವನ್ನು ಚುಚ್ಚುವ ಕತ್ತಿಯನ್ನು ತಪ್ಪಿಸಲಾಗುತ್ತದೆಯೇ? ಈ ದ್ಯೂತವು ಕೊನೆಗೆ ಕೌರವರ ವಿನಾಶದ ಬೀಜವಾಗುತ್ತದೆ. ನಿಮಗೆ ಇದು ಸರಿಯೆಂದು ಕಾಣಿಸಿತೇ? ಆಗಲಿ ನಾನು ಒಪ್ಪಿಕೊಂಡೆ ಎಂದು ವಿದುರನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಮೊದಲು: ಮುನ್ನ; ಸುದ್ಯೂತ: ಒಳ್ಳೆಯ ಪಗಡೆಯಾಟ; ವಿಷಮ: ಕೆಟ್ಟ, ದುಷ್ಟ; ಅವಸಾನ:ಅಂತ್ಯ, ಮುಕ್ತಾಯ; ದ್ಯೂತ: ಪಗಡೆ, ಜೂಜು; ನಿಲುವುದು: ನಿಂತುಕೊಳ್ಳು, ಸ್ಥಾನ; ನಿವಾರಣೆ: ಕಳೆಯುವಿಕೆ; ಮರ್ಮ: ಒಳ ಅರ್ಥ, ಗುಟ್ಟು; ಸಬಳ: ಈಟಿ, ಭರ್ಜಿ; ಇರಿ: ಚುಚ್ಚು; ತುದಿ: ಕೊನೆ; ಪಥ್ಯ: ಯೋಗ್ಯವಾದುದು; ವರ್ಗ: ಗುಂಫು; ವಿನಾಶ: ಹಾಳು, ಅಂತ್ಯ; ಬೀಜ: ಮೂಲ, ಕಾರಣ; ಸೊಗಸು: ಚೆಲುವು; ಕೈಕೊಂಡು: ಒಪ್ಪು;

ಪದವಿಂಗಡಣೆ:
ಮೊದಲಲ್+ಇದು +ಸದ್ಯೂತವ್+ಅವಸಾ
ನದಲಿ +ವಿಷಮ +ದ್ಯೂತದಲಿ +ನಿಲು
ವುದು +ನಿವಾರಣವುಂಟೆ +ಮರ್ಮವನ್+ಇರಿದ +ಸಬಳದಲಿ
ತುದಿಗೆ+ ತಾನಿದ+ಪಥ್ಯ +ಕುರು+ವ
ರ್ಗದಿ +ವಿನಾಶಕ +ಬೀಜವದು+ ನಿಮಗ್
ಇದರೊಳಗೆ+ ಸೊಗಸಾದುದೇ +ಕೈಕೊಂಡೆ +ನಾನೆಂದ

ಅಚ್ಚರಿ:
(೧) ಸದ್ಯೂತ, ವಿಷಮದ್ಯೂತ – ಪದಗಳ ಬಳಕೆ
(೨) ಉಪಮಾನದ ಪ್ರಯೋಗ – ನಿವಾರಣವುಂಟೆ ಮರ್ಮವನಿರಿದ ಸಬಳದಲಿ