ಪದ್ಯ ೭: ಅಶ್ವತ್ಥಾಮನ ವಾದವು ಹೇಗಿತ್ತು?

ಏನು ಗುರುಸುತ ಕಾರ್ಯದನುಸಂ
ಧಾನವೇನೆನೆ ವಾಯಸಂಗಳ
ನಾ ನಿಶಾಟನನಿರಿವುತದೆ ಗೂಡುಗಳನಬ್ಬರಿಸಿ
ಈ ನಿದರುಶನದಿಂದ ಪಾಂಡವ
ಸೇನೆಯನು ಕಗ್ಗೊಲೆಗೊಳಗೆ ಕೊಲ
ಲೇನು ಹೊಲ್ಲೆಹ ಮಾವ ಎಂದನು ಗುರುಸುತನು ಕೃಪಗೆ (ಗದಾ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ಎಚ್ಚರಗೊಂಡ ಕೃಪನು, ಏನು ಅಶ್ವತ್ಥಾಮ, ನಿನ್ನ ಕೆಲಸವನ್ನು ಹೇಗೆ ಮಾಡುವೆ ಎಂದು ಕೇಳಲು, ಅಶ್ವತ್ಥಾಮನು ಕಾಗೆಗಳ ಗೂಡುಗಳನ್ನು ಮುರಿದು ಗೂಬೆಯು ಕಾಗೆಗಳನ್ನು ಕೊಲ್ಲುತ್ತಿದೆ, ಈ ನಿದರ್ಶನದಿಂದ ನಾನು ಪಾಂಡವಸೇನೆಯನ್ನು ಕೊಂದರೆ ತಪ್ಪೆನು ಎಂದು ಕೇಳಿದನು.

ಅರ್ಥ:
ಸುತ: ಮಗ; ಕಾರ್ಯ: ಕೆಲಸ; ಅನುಸಂಧಾನ: ಪರಿಶೀಲನೆ, ಏರ್ಪಾಡು; ವಾಯ: ಮೋಸ, ಕಪಟ; ಸಂಗ: ಜೊತೆ; ನಿಶಾಟ: ರಾತ್ರಿಯ ಆಟ; ನಿಶ: ರಾತ್ರಿ; ಇರಿ: ಚುಚ್ಚು; ಗೂಡು: ಮನೆ; ಅಬ್ಬರಿಸು: ಆರ್ಭಟಿಸು; ನಿದರುಶನ: ತೋರು; ಸೇನೆ: ಸೈನ್ಯ; ಕಗ್ಗೊಲೆ: ಸಾಯಿಸು; ಹೊಲ್ಲೆಹ: ದೋಷ;

ಪದವಿಂಗಡಣೆ:
ಏನು +ಗುರುಸುತ+ ಕಾರ್ಯದ್+ಅನುಸಂ
ಧಾನವೇನ್+ಎನೆ +ವಾಯಸಂಗಳನ್
ಆ+ ನಿಶಾಟನನ್+ಇರಿವುತದೆ +ಗೂಡುಗಳನ್+ಅಬ್ಬರಿಸಿ
ಈ +ನಿದರುಶನದಿಂದ +ಪಾಂಡವ
ಸೇನೆಯನು +ಕಗ್ಗೊಲೆಗೊಳಗೆ ಕೊಲಲ್
ಏನು +ಹೊಲ್ಲೆಹ +ಮಾವ +ಎಂದನು +ಗುರುಸುತನು +ಕೃಪಗೆ

ಅಚ್ಚರಿ:
(೧) ಗೂಬೆ ಎಂದು ಹೇಳಲು ನಿಶಾಟನ ಪದದ ಬಳಕೆ
(೨) ಕೃಪನನ್ನು ಮಾವ ಎಂದು ಅಶ್ವತ್ಥಾಮನು ಸಂಭೋದಿಸಿದುದು