ಪದ್ಯ ೫೬: ದೂತರು ಇಂದ್ರನಿಗೆ ಯಾವುದನ್ನು ತೆರೆಯಲು ಕೇಳಿದರು?

ಪುರದ ಬಾಹೆಯ ಕೋರಡಿಯ ಸಂ
ವರಣೆ ತೆಗೆಯಲಿ ನಿರ್ಭಯದಿ ಸಂ
ಚರಿಸುವುದು ನಂದನದೊಳಗೆ ನಿಮ್ಮದಿಯ ರಾಣಿಯರು
ತರತರದ ಕೊತ್ತಳದ ಕಾಹಿನ
ಸುರಭಟರು ಸುಖ ನಿದ್ರೆಗೈಯಲಿ
ನಿರುತವಿದು ನಿಜನಿಅಳಯದೊಳಗೆಂದುದು ಸುರವ್ರಾತ (ಅರಣ್ಯ ಪರ್ವ, ೧೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ಊರ ಹೊರಗಿನಲ್ಲಿದ್ದ ನಿರ್ಬಂಧವನ್ನು ತೆರವುಗೊಳಿಸು, ನಿಮ್ಮ ರಾಣಿಯರು ತೋಟದೊಳಗೆ ಭಯವಿಲ್ಲದೆ ವಿಹರಿಸಲಿ. ಕೋಟೆಯ ಬುರುಜಿನ ಕಾವಲುಗಾರರು ತಮ್ಮ ಮನೆಯಲ್ಲಿ ಸುಖ ನಿದ್ರೆ ಮಾಡಲಿ, ಎಂದು ದೂತರು ಹೇಳಿದರು.

ಅರ್ಥ:
ಪುರ: ಊರು; ಬಾಹೆ: ಹೊರಗೆ; ಕೋರಡಿ: ನಿರ್ಬಂಧ, ವೇಗ; ಸಂವರಣೆ: ಕಾಪು, ರಕ್ಷಣೆ ; ತೆಗೆ: ಹೊರತರು; ನಿರ್ಭಯ: ಭಯವಿಲ್ಲದ ಸ್ಥಿತಿ; ಸಂಚರಿಸು: ತಿರುಗಾಟ; ನಂದನ: ತೋಟ; ನಿಮ್ಮಡಿ: ನಿಮ್ಮ ಅಧೀನ; ರಾಣಿ: ಅರಸಿ; ತರ: ವಿಧ; ಕೊತ್ತಳ: ಕೋಟೆ; ಕಾಹು: ರಕ್ಷಣೆ; ಸುರಭಟ: ದೇವತೆಗಳ ಸೈನಿಕ; ಸುಖ: ನೆಮ್ಮದಿ; ನಿದ್ರೆ: ಶಯನ; ನಿರುತ: ಸತ್ಯ, ನಿಶ್ಚಯ; ನಿಜ: ದಿಟ; ನಿಳಯ: ಆಲಯ; ಸುರ: ದೇವತೆ; ವ್ರಾತ: ಗುಂಪು;

ಪದವಿಂಗಡಣೆ:
ಪುರದ+ ಬಾಹೆಯ +ಕೋರಡಿಯ +ಸಂ
ವರಣೆ+ ತೆಗೆಯಲಿ +ನಿರ್ಭಯದಿ+ ಸಂ
ಚರಿಸುವುದು +ನಂದನದೊಳಗೆ+ ನಿಮ್ಮಡಿಯ+ ರಾಣಿಯರು
ತರತರದ +ಕೊತ್ತಳದ +ಕಾಹಿನ
ಸುರಭಟರು +ಸುಖ +ನಿದ್ರೆಗೈಯಲಿ
ನಿರುತವಿದು +ನಿಜನಿಳಯದೊಳಗ್+ಎಂದುದು +ಸುರವ್ರಾತ

ಅಚ್ಚರಿ:
(೧) ಸಂವರಣೆ, ಸಂಚರಿಸು – ‘ಸಂ’ ಪದದ ಬಳಕೆ
(೨) ನಿದ್ರೆಗೈಯಲಿ, ನಿರುತವಿದು, ನಿಜನಿಳಯ, ನಿಮ್ಮಡಿ, ನಿರ್ಭಯ – ನಿ ಕಾರದ ಪದಗಳು

ಪದ್ಯ ೮೧: ಗಂಡನು ಯಾರನ್ನು ತೊರೆಯುವುದುತ್ತಮ?

ಮಡದಿ ನಿಜನಿಳಯವನು ಬಿಟ್ಟಡಿ
ಗಡಿಗೆ ಪರಗೃಹದೊಳಗೆ ಬಾಯನು
ಬಡಿದು ಮನೆಮನೆವಾರ್ತೆಯೆನ್ನದೆ ಬೀದಿಗಲಹವನು
ಒಡರಿಸ್ಚುವ ಪತಿಯೊಬ್ಬನುಂಟೆಂ
ದೆಡಹಿ ಕಾಣ್ದ ದಿಟ್ಟೆ ಹತ್ತನು
ಹಡೆದಡೆಯು ವರ್ಜಿಸುವುದುತ್ತಮ ಪುರುಷರುಗಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೧ ಪದ್ಯ)

ತಾತ್ಪರ್ಯ:
ಹೆಂಡತಿಯಾದವಳು ತನ್ನ ಮನೆ ಅವಳ ಮನೆಯಕೆಲಸಗಳನ್ನು ಬಿಟ್ಟು, ಹೆಜ್ಜೆ ಹೆಜ್ಜೆಗೂ ಬೇರೆಯವರ ಮನೆಯಲ್ಲಿ ಬಾಯ್ಬಡಿದು ಮಾತನಾಡುತ್ತಾ, ತನಗೆ ಒಬ್ಬ ಗಂಡನಿರುವನೆಂಬುದನ್ನು ಮರೆತು, ಅವನನ್ನು ಎಡವಿದರೂ ಗಮನಿಸದಿರುವ ದಿಟ್ಟ ಹೆಂಗಸು ತನ್ನಿಂದ ಹತ್ತು ಮಕ್ಕಳನ್ನು ಪಡೆದಿದ್ದರೂ ಶ್ರೇಷ್ಠ ಪುರುಷನು ಆಕೆಯನ್ನು ತೊರೆಯುವುದು ಉತ್ತಮ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಮಡದಿ: ಹೆಂಡತಿ; ನಿಜ: ಸ್ವಂತ; ನಿಳಯ: ಆಲಯ,ಮನೆ; ಬಿಟ್ಟು: ತೊರೆದು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ, ಯಾವಾಗಲೂ; ಪರ: ಬೇರೆ; ಗೃಹ: ಮನೆ; ಬಾಯನುಬಡಿದು: ಹರಟು, ಬೊಬ್ಬೆಹಾಕು; ಮನೆ: ಆಲಯ; ವಾರ್ತೆ: ವಿಷಯ; ಬೀದಿ: ರಸ್ತೆ; ಕಲಹ: ಜಗಳ; ಒಡರು: ಮಾಡು, ರಚಿಸು; ಪತಿ: ಗಂಡ; ಎಡಹು: ತಪ್ಪುಮಾಡು, ಮುಗ್ಗರಿಸು; ಕಾಣದ: ಗೋಚರಿಸದ; ಹತ್ತು: ದಶ; ಹಡೆದು: ಪಡೆದು, ಜನ್ಮನೀಡು; ವರ್ಜಿಸು: ತೊರೆ; ಉತ್ತಮ: ಒಳ್ಳೆಯ, ಶ್ರೇಷ್ಠ; ಪುರುಷ: ಗಂಡ;

ಪದವಿಂಗಡಣೆ:
ಮಡದಿ +ನಿಜ+ನಿಳಯವನು +ಬಿಟ್ಟ್+ಅಡಿ
ಗಡಿಗೆ +ಪರ+ಗೃಹದೊಳಗೆ +ಬಾಯನು
ಬಡಿದು +ಮನೆಮನೆ+ವಾರ್ತೆಯೆನ್ನದೆ +ಬೀದಿ+ಕಲಹವನು
ಒಡರಿಚುವ +ಪತಿಯೊಬ್ಬನ್+ಉಂಟೆಂದ್
ಎಡಹಿ +ಕಾಣ್ದ +ದಿಟ್ಟೆ +ಹತ್ತನು
ಹಡೆದಡೆಯು+ ವರ್ಜಿಸುವುದ್+ಉತ್ತಮ +ಪುರುಷರುಗಳೆಂದ

ಅಚ್ಚರಿ:
(೧) ಅಡಿಗಡಿ, ಮನೆಮನೆ – ಜೋಡಿ ಪದಗಳ ಬಳಕೆ
(೨) ಪತಿ, ಮಡದಿ – ಗಂಡ ಹೆಂಡತಿಗೆ ಉಪಯೋಗಿಸಿದ ಪದ

ಪದ್ಯ ೧೦೩: ಅರ್ಜುನನ ಕೀರ್ತಿ ಎಲ್ಲಿ ಪಸರಿಸಿತು?

ನಳಿನಮುಖಿ ಸುರಗಜದ ಮೇಲಿಂ
ದಿಳಿದು ಬಂದಳು ಸುರರ ಸಂ
ಕುಲದಿರದೆ ಕೈಗಳ ಮುಗಿದು ಗಂಗಾತನುಜಗಭಿನಮಿಸಿ
ಬಳಿಕ ಭೀಷ್ಮನ ನೇಮದಲಿ ನಿಜ
ನಿಳಯಕೈದಿದಳರ್ತಿಯಲಿ ಕಡು
ಗಲಿಯು ಪಾರ್ಥಗೆ ಕೀರ್ತಿಯಾಯಿತು ಮೂರುಲೋಕದಲಿ (ಆದಿ ಪರ್ವ, ೨೧ ಸಂಧಿ, ೧೦೩ ಪದ್ಯ)

ತಾತ್ಪರ್ಯ:
ಕುಂತಿಯು ತನ್ನ ಅರಮನೆಯ ಆವರಣಕ್ಕೆ ಬಂದು ಐರಾವತದಿಂದ ಕೆಳಗಿಳಿದಳು. ಅಲ್ಲಿ ನೆರೆದಿದ್ದ ಸಕಲ ದೇವತೆಗಳಿಗೆ ನಮಸ್ಕರಿಸಿ, ಭೀಷ್ಮರಿಗೂ ತನ್ನ ನಮಸ್ಕಾರಗಳನ್ನು ಸಲ್ಲಿಸಿ, ಅವರ ನಿಯಮದಂತೆ ತನ್ನ ಅರಮನೆಯನ್ನು ಸೇರಿದಳು. ಈ ವ್ರತವನ್ನು ಮಾಡಲು ಸ್ವರ್ಗದಿಂದ ಐರಾವತವನ್ನೇ ತರಿಸಿದ ಪರಾಕ್ರಮಿಯಾದ ಅರ್ಜುನನ ಕೀರ್ತಿ ಮೂರುಲೋಕಗಳಲ್ಲೂ ಹರಡಿತು.

ಅರ್ಥ:
ನಳಿನಮುಖಿ: ಕಮಲದಂತ ಮುಖದವಳು, ಸುಂದರಿ; ಸುರಗಜ: ಐರಾವತ; ಇಳಿ: ಕೆಳಕ್ಕೆ ಬಾ; ಸುರರು: ದೇವತೆಗಳು; ಸಂಕುಲ: ಸಮಸ್ತರಿಗೂ; ಕೈಮುಗಿದು: ನಮಸ್ಕರಿಸು; ಗಂಗಾಸುತ: ಭೀಷ್ಮ; ಅಭಿನಮಿಸಿ: ವಂದಿಸಿ;
ನೇಮ: ನಿಯಮ; ನಿಜನಿಳಯ: ತನ್ನ ಅರಮನೆ; ಐದು:ಹೊಂದು, ಸೇರು; ಅರ್ತಿ: ಸಂತೋಷ, ಪ್ರೀತಿ; ಕಡುಗಲಿ: ಪರಾಕ್ರಮಿ; ಪಾರ್ಥ: ಅರ್ಜುನ; ಕೀರ್ತಿ:ಯಶಸ್ಸು, ಖ್ಯಾತಿ; ಲೋಕ: ಜಗತ್ತು;

ಪದವಿಂಗಡಣೆ:
ನಳಿನಮುಖಿ +ಸುರಗಜದ+ ಮೇಲಿಂದ್
ಇಳಿದು +ಬಂದಳು +ಸುರರ+ ಸಂ
ಕುಲದಿರದೆ +ಕೈಗಳ+ ಮುಗಿದು+ ಗಂಗಾತನುಜಗ್+ಅಭಿನಮಿಸಿ
ಬಳಿಕ+ ಭೀಷ್ಮನ +ನೇಮದಲಿ +ನಿಜ
ನಿಳಯಕ್+ಐದಿದಳ್+ಅರ್ತಿಯಲಿ +ಕಡು
ಗಲಿಯು +ಪಾರ್ಥಗೆ +ಕೀರ್ತಿಯಾಯಿತು+ ಮೂರುಲೋಕದಲಿ

ಅಚ್ಚರಿ:
(೧) ತನ್ನ ಅರಮನೆಗೆ ಎನ್ನಲು – ನಿಜ ನಿಳಯ ಪದದ ಪ್ರಯೋಗ
(೨) ಗಂಗಾತನುಜ, ಭೀಷ್ಮ – ೩, ೪ ಸಾಲಿನಲ್ಲಿ ಪ್ರಯೋಗ