ಬಂದುದೀ ಗಜಪುರದ ನಾರೀ
ವೃಂದ ಧೃತರಾಷ್ಟ್ರಾವನೀಶನ
ಮುಂದೆ ವೇದವ್ಯಾಸ ಸಂಜಯ ವಿದುರ ಪೌರಜನ
ಮುಂದಣಾಹವರಂಗಧಾರುಣಿ
ಯೊಂದು ಕೆಲದುಪವನದ ನೆಳಲಲಿ
ನಿಂದುದಿವರಾಗಮನವನು ಕೇಳಿದನು ಯಮಸೂನು (ಗದಾ ಪರ್ವ, ೧೧ ಸಂಧಿ, ೨೭ ಪದ್ಯ)
ತಾತ್ಪರ್ಯ:
ಹಸ್ತಿನಾಪುರದ ನಾರೀವೃಂದವು ಧೃತರಾಷ್ಟ್ರ, ಸಂಜಯ, ವಿದುರ, ಪುರಜನರು ರಣರಂಗಕ್ಕೆ ಬಂದುದನ್ನು, ಯುದ್ಧರಂಗದ ಒಂದು ಪಕ್ಕದ ಉಪವನದ ನೆರಳಿನಲ್ಲಿ ನಿಂತಿದ್ದ ಯುಧಿಷ್ಠಿರನು ಕೇಳಿದನು.
ಅರ್ಥ:
ಬಂದು: ಆಗಮಿಸು; ಗಜಪುರ: ಹಸ್ತಿನಾಪುರ; ನಾರಿ: ಹೆಣ್ಣು; ವೃಂದ: ಗುಂಪು; ಅವನೀಶ: ರಾಜ; ಮುಂದೆ: ಎದುರು; ಆಹವ: ಯುದ್ಧ; ಧಾರುಣಿ: ಭೂಮಿ; ಕೆಲ: ಪಕ್ಕ; ಉಪಮನ: ಉದ್ಯಾನವನ; ನೆಳಲು: ನೆರಳು; ನಿಂದು: ನಿಲ್ಲು; ಆಗಮನ: ಬರುವಿಕೆ; ಕೇಳು: ಆಲಿಸು; ಸೂನು: ಮಗ;
ಪದವಿಂಗಡಣೆ:
ಬಂದುದೀ +ಗಜಪುರದ +ನಾರೀ
ವೃಂದ +ಧೃತರಾಷ್ಟ್ರ+ಅವನೀಶನ
ಮುಂದೆ +ವೇದವ್ಯಾಸ +ಸಂಜಯ +ವಿದುರ +ಪೌರಜನ
ಮುಂದಣ್+ಆಹವರಂಗಧಾರುಣಿ
ಯೊಂದು +ಕೆಲದ್+ಉಪವನದ +ನೆಳಲಲಿ
ನಿಂದುದ್+ಇವರ್+ಆಗಮನವನು +ಕೇಳಿದನು+ ಯಮಸೂನು
ಅಚ್ಚರಿ:
(೧) ಯುದ್ಧಭೂಮಿ ಎಂದು ಹೇಳಲು – ಆಹವರಂಗಧಾರುಣಿ ಪದದ ಬಳಕೆ